ಚಾಮರಾಜನಗರ ರೈತರಿಗೆ ಹರ್ಷ ತಂದ ಪೂರ್ವ ಮುಂಗಾರು ಮಳೆ..!
ಚಾಮರಾಜನಗರ, ಮೇ.13: ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯದ ಕಾರಣ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ರೈತನ ಬದುಕು ದುಸ್ತರವಾಗಿತ್ತು. ಜಿಲ್ಲೆಯ ಬಹಳಷ್ಟು ರೈತರು ಕೃಷಿ ಮಾಡಲಾಗದೆ ಕೈಚೆಲ್ಲಿ ಕುಳಿತಿದ್ದರು. ಅಷ್ಟೇ ಅಲ್ಲದೆ ತಮ್ಮ ಜಾನುವಾರುಗಳನ್ನು ಸಾಕಿ ಸಲಹಲು ಸಾಧ್ಯವಿಲ್ಲದೆ ಮಾರಾಟ ಮಾಡಿದ್ದರು.
ಆದರೆ ಈ ಬಾರಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಳೆ ಸುರಿದ ಕಾರಣ ಸಂತಸಗೊಂಡಿರುವ ರೈತರು ತಮ್ಮ ಜಮೀನಿನತ್ತ ಮುಖ ಮಾಡಿದ್ದಾರೆ.ಅಲ್ಲದೆ ಭೂಮಿಯನ್ನು ಉಳುಮೆ ಮಾಡಿ ಜೋಳ, ಸೂರ್ಯಕಾಂತಿ, ಹತ್ತಿ ಹೀಗೆ ತಮಗೆ ಅನುಕೂಲವಾದ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ಬೆಂಗಳೂರಲ್ಲಿ ಗಾಳಿ ಸಹಿತ ಮಳೆ, ವಾಹನ ಸವಾರರೇ ಎಚ್ಚರ
ಈಗಾಗಲೇ ಹಲವು ಕಡೆ ಬಿತ್ತನೆ ಕಾರ್ಯ ಮುಗಿದಿದ್ದರೆ, ಇನ್ನು ಕೆಲವು ಕಡೆ ಇದೀಗ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಈ ಬಾರಿ ಯುಗಾದಿ ಹಬ್ಬದ ನಂತರ ಉತ್ತಮ ಮಳೆ ಬೀಳುತ್ತಿರುವುದರಿಂದ ಗುಂಡ್ಲುಪೇಟೆ ತಾಲೂಕಿನ ರೈತಾಪಿ ವರ್ಗದಲ್ಲಿ ಭರವಸೆ ಮೂಡಿಸಿದೆ. ಯುಗಾದಿಗೂ ಮುಂಚಿತವಾಗಿವಾಗಿಯೇ ಬಹುತೇಕ ಜಮೀನಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದಮಾಡಿಕೊಂಡಿದ್ದ ರೈತರು ಇದೀಗ ಬಿತ್ತನೆ ಕಾರ್ಯ ಆರಂಭಿಸಿದ್ದನ್ನು ಕಾಣಬಹುದಾಗಿದೆ.
ಕೃಷಿ ಇಲಾಖೆಯು ರೈತರಿಗೆ ಅಗತ್ಯವಾದ ಬಿತ್ತನೆ ಬೀಜಗಳನ್ನು ಮಾರುಕಟ್ಟೆಯ ದರಕ್ಕಿಂತ ರಿಯಾಯಿತಿ ದರದಲ್ಲಿ ವಿತರಿಸಲು ಮುಂದಾಗಿದ್ದು, ಅಗತ್ಯ ಸಲಹೆಗಳನ್ನು ರೈತರಿಗೆ ನೀಡಲಾಗುತ್ತಿದೆ. ಈಗಾಗಲೇ ಬರದ ಬವಣೆಯಿಂದ ಜಾನುವಾರುಗಳನ್ನು ಮಾರಾಟ ಮಾಡಿದ ರೈತರು ಇದೀಗ ಉಳುಮೆಗೆ ಎತ್ತುಗಳಿಲ್ಲದೆ ಪರದಾಡುವಂತಾಗಿದೆ. ಜತೆಗೆ ದುಬಾರಿ ಹಣ ನೀಡಿ ಎತ್ತುಗಳನ್ನು ಖರೀದಿಸುವ ಸ್ಥಿತಿಯಲ್ಲಿಯೂ ರೈತರು ಇಲ್ಲದಂತಾಗಿದೆ.
ಕೆಲವರು ಸಾಲ ಮಾಡಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೃಷಿಯನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಎತ್ತುಗಳನ್ನು ಬಾಡಿಗೆಗೆ ಪಡೆದು ಉಳುಮೆ ಕಾರ್ಯವನ್ನು ಮಾಡುತ್ತಿದ್ದಾರೆ. ಕಾರ್ಮಿಕರ ಕೂಲಿ ಜತೆಗೆ ಉಳುಮೆಗೂ ಹಣ ನೀಡಬೇಕಾಗಿರುವುದರಿಂದ ರೈತರು ಹೈರಾಣರಾಗಿದ್ದಾರೆ.
ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೃಷಿ ಇಲಾಖೆಯ ಎಲ್ಲಾ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಬಿತ್ತನೆಬೀಜ ಹಾಗೂ ರಸಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಸದ್ಯ ಸೂರ್ಯಕಾಂತಿ, ಹೈಬ್ರೀಡ್ ಜೋಳ, ಅಲಸಂದೆ, ಹೆಸರು, ಉದ್ದು ಮುಂತಾದ ಬಿತ್ತನೆ ಬೀಜಗಳು ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ.
ಒಟ್ಟಾರೆ ಪೂರ್ವ ಮುಂಗಾರು ಮಳೆ ಚಾಮರಾಜನಗರ ಜಿಲ್ಲೆಯ ರೈತರಲ್ಲಿ ಆಶಾಭಾವವನ್ನು ಹುಟ್ಟು ಹಾಕಿದ್ದು, ಕಳೆದ ಕೆಲವು ವರ್ಷಗಳಿಂದ ಮಳೆ ಬಾರದ್ದರಿಂದ ಜಮೀನಿನತ್ತ ಮುಖ ಮಾಡದ ರೈತರು ಈ ಬಾರಿ ಉತ್ಸಾಹದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ.