ಚಾಮರಾಜನಗರಕ್ಕೆ ಬರಲು ತಮಿಳರು ಬಳಸುತ್ತಿದ್ದ ಕಳ್ಳದಾರಿ ಬಂದ್
ಚಾಮರಾಜನಗರ, ಮೇ 26: ರಾಜ್ಯದ ಎಲ್ಲ ಜಿಲ್ಲೆಗಳು ಕೊರೊನಾ ಸಂಕಷ್ಟ ಅನುಭವಿಸುತ್ತಿವೆ. ಈ ನಡುವೆ ಚಾಮರಾಜನಗರ ಜಿಲ್ಲೆ ಮಾತ್ರ ಹಸಿರು ವಲಯವಾಗಿ ಉಳಿದುಕೊಂಡಿದೆ. ಹೀಗಿರುವಾಗ ಪಕ್ಕದ ತಮಿಳುನಾಡಿನಿಂದ ಇಲ್ಲಿಗೆ ಕಾಡು ದಾರಿ ಮೂಲಕ ಕೆಲವರು ಅಕ್ರಮವಾಗಿ ಪ್ರವೇಶಿಸುತ್ತಿದ್ದದ್ದು ಭಯ ಹುಟ್ಟಿಸಿತ್ತು.
Recommended Video
ಚಾಮರಾಜನಗರ ಜಿಲ್ಲೆಗೂ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಆದರೆ ಈ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಕ್ರಮ ಪ್ರವೇಶಕ್ಕಿದ್ದ ದಾರಿಗಳನ್ನು ಬಂದ್ ಮಾಡಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.
ಚಾಮರಾಜನಗರಕ್ಕೆ ಕಂಟಕವಾಗುತ್ತಾ ತಮಿಳರ ಅಕ್ರಮ ಪ್ರವೇಶ?
ಭೀತಿ ಹುಟ್ಟಿಸಿದ್ದ ತಮಿಳರ ಅಕ್ರಮ ಪ್ರವೇಶ
ಈಗಾಗಲೇ ಚಾಮರಾಜನಗರ ಜಿಲ್ಲಾಡಳಿತ ಗ್ರಾಮ ಮಟ್ಟದಿಂದಲೇ ಕೊರೊನಾ ವಾರಿಯರ್ಸ್ ಅನ್ನು ಸಿದ್ಧ ಮಾಡಿಕೊಂಡು ಸೋಂಕಿನ ವಿರುದ್ಧ ಜಾಗೃತಿ ಮೂಡಿಸುತ್ತಾ ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ತಮಿಳುನಾಡಿನ ಕೆಲವರು ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಕಾಡು ದಾರಿಗಳ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುತ್ತಿದ್ದರು. ಇದು ಜನತೆಯಲ್ಲಿ ಭೀತಿಯನ್ನುಂಟು ಮಾಡಿತ್ತು.
ತಮಿಳುನಾಡಿನಿಂದ ಬರಲು ಕಳ್ಳದಾರಿ ಬಳಕೆ
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್, ಹೂಗ್ಯಂ, ಜಲ್ಲಿಪಾಳ್ಯ, ಗಾಜನೂರು, ಗರಿಕೆಕಂಡಿಯ ಕಾಲುದಾರಿಗಳಲ್ಲಿ ಜನ ನಡೆದು ಬರುತ್ತಿದ್ದರು. ಇನ್ನೊಂದೆಡೆ ಪಾಲಾರ್ ನದಿಯ ಪಕ್ಕದಲ್ಲೇ ಚೆಕ್ ಪೋಸ್ಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದರು. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ಎರಡು ರಾಜ್ಯಗಳ ನಡುವೆ ಸಂಚರಿಸುವ ಮೂಲಕ ಕೊರೊನಾ ಆತಂಕ ತಂದೊಡ್ಡಿದ್ದರು.
ಜಿಲ್ಲಾಡಳಿತದ ದಿಕ್ಕು ತಪ್ಪಿಸಿದ ಕೊರೊನಾ ಸೋಂಕಿತ ಮಳವಳ್ಳಿ ಸಿಡಿಪಿಒ
ಕಳ್ಳದಾರಿ ಮುಚ್ಚಿದ ಅರಣ್ಯ ಇಲಾಖೆ
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಗಮನಕ್ಕೆ ತಂದ ಕೂಡಲೇ ಅಕ್ರಮವಾಗಿ ಜಿಲ್ಲೆಗೆ ಬರುವವರನ್ನು ತಡೆಗಟ್ಟಲು ನಿರಂತರವಾಗಿ ಗಸ್ತು ನಡೆಸಲು ಅರಣ್ಯ ಇಲಾಖೆಗೆ ಸೂಚಿಸಿದ್ದು, ಅಡ್ಡದಾರಿಗಳ ಮೂಲಕ ಬರುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಹಾಗು ಅರಣ್ಯ ಇಲಾಖೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದರು. ಆದರೆ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡ ಕಾರಣ ಈಗ ಕಳ್ಳದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಿದ್ದು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ರಸ್ತೆಗಳ ಮೂಲಕ ಸಂಪೂರ್ಣ ಬಂದ್ ಮಾಡುವ ಮೂಲಕ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ನೆಮ್ಮದಿಯುಸಿರು ಬಿಟ್ಟ ಜನ
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೇಡುಕೊಂಡಲು ಅವರು ಮಾಹಿತಿ ನೀಡಿದ್ದು, ಅರಣ್ಯದ ಗಡಿಭಾಗದ ಆಯಕಟ್ಟಿನ ಸ್ಥಳಗಳಿಗೆ ಅರಣ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ ಗಸ್ತು ಹೆಚ್ಚಿಸಲಾಗಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಅಲ್ಲಿಂದ ಬರುವ ವಲಸಿಗರಿಂದ ಸೋಂಕು ಹರಡುವ ಭಯವಿತ್ತು. ಈಗ ಕಳ್ಳದಾರಿಗಳನ್ನು ಮುಚ್ಚಿ ಚೆಕ್ ಪೋಸ್ಟ್ಗಳಲ್ಲಿ ಬಿಗಿಯಾದ ಕ್ರಮ ಕೈಗೊಂಡಿರುವುದರಿಂದ ನೆಮ್ಮದಿಯುಸಿರು ಬಿಡುವಂತಾಗಿದೆ.