ಚಾಮರಾಜನಗರ; ಕೋವಿಡ್ ನಿರ್ವಹಣೆಯಲ್ಲಿ ಎಡವಿದ ಜಿಲ್ಲಾಡಳಿತ
ಚಾಮರಾಜನಗರ, ಮೇ 06; ಗಡಿಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೇ ದಿನ 24 ಮಂದಿ ದುರ್ಮರಣ ಹೊಂದಿದ ಘಟನೆ ಬಳಿಕ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಿದ್ದು ಸಮಸ್ಯೆಗಳಗೂಡಾಗಿ ಪರಿಣಮಿಸಿದೆ.
ಸದ್ಯಕ್ಕೆ ಸಾವಿಗೀಡಾಗುತ್ತಿರುವ ಸೋಂಕಿತರ ಸಂಖ್ಯೆ ಕಡಿಮೆಯಾದಂತೆ ಕಾಣುತ್ತಿಲ್ಲ. ಬುಧವಾರ ಒಂದೇ ದಿನ 8 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ ಹೊಂದಿರುವುದು ಆತಂಕವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 553 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 3,400 ಕ್ಕೇರಿದೆ.
ಚಾಮರಾಜನಗರ, ಮೈಸೂರು ಜಿಲ್ಲಾಧಿಕಾರಿ ಕಚೇರಿ ದಾಖಲೆ ಜಪ್ತಿಗೆ ಆದೇಶ
ಇನ್ನು ಇದುವರೆಗೆ ಜಿಲ್ಲೆಯಲ್ಲಿ 197 ಸೋಂಕಿತರು ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲಾಕ್ ಡೌನ್ ನಡುವೆಯೂ ಸೋಂಕು ಕಡಿಮೆಯಾಗದಿರುವುದು ಭಯ ಹುಟ್ಟಿಸುತ್ತಿದೆ.
ಆಕ್ಸಿಜನ್ ದುರಂತಕ್ಕೆ ಮೈಸೂರು ಡಿಸಿ ಕಾರಣ; ಚಾಮರಾಜನಗರ ಡಿಸಿ ಆರೋಪ
ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಹಲವು ದಿನಗಳ ಕಾಲ ಜಿಲ್ಲೆ ಗ್ರೀನ್ ಝೋನ್ನಲ್ಲಿತ್ತು. ಆದರೆ ಎರಡನೇ ಅಲೆ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಣೆ ಮಾಡುವುದರಲ್ಲಿ ಎಡವುತ್ತಿರುವುದರಿಂದ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ತನಿಖಾಧಿಕಾರಿ ಶಿವಯೋಗಿ ಕಳಸದ್
ಶವದತ್ತ ಸುಳಿಯದ ಜನರು
ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಮ್ಮನಗದ್ದೆ ಸಮೀಪದ ವಡ್ಡರ ದೊಡ್ಡಿಯ ಗ್ರಾಮದ ಬಳಿಯಿರುವ ಕೆರೆಯಲ್ಲಿ 90 ವರ್ಷದ ವೃದ್ದೆಯೊಬ್ಬರ ಶವ ದೊರೆತ್ತಿದ್ದು, ಗಂಟಲ ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಹೀಗಾಗಿ ಸಂಬಂಧಿಕರಾಗಲೀ, ಗ್ರಾಮಸ್ಥರಾಗಲೀ ಶವದತ್ತ ಸುಳಿಯಲಿಲ್ಲ. ಹೀಗಾಗಿ ನಾಲ್ಕು ಮಂದಿ ಸ್ವಯಂ ಸೇವಕರು ಪಿಪಿಇ ಕಿಟ್ ಧರಿಸಿಕೊಂಡು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಶವವನ್ನು ಮಂಚದ ಸಮೇತ ಹೊತ್ತು ತಂದು ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವೃದ್ಧೆ
ಕೋವಿಡ್ ಸೋಂಕಿತ ವೃದ್ಧೆಯ ಶವ ಸಂಸ್ಕಾರಕ್ಕೆ ಅಜ್ಜೀಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಹಕಾರ ನೀಡದೆ ನುಣಚಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ವೃದ್ದೆಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದು, ಇವರಲ್ಲಿ ಮೂವರು ಗಂಡುಮಕ್ಕಳು ಹಾಗೂ ಪುತ್ರಿಯೊಬ್ಬರು ಮೃತಪಟ್ಟಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೃದ್ದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಆಕ್ಸಿಜನ್ ನೀಡದ ಆರೋಪ
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ಕೋವಿಡ್ ಸೋಂಕಿತ ರೋಗಿ ಮೃತಪಟ್ಟಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಸೋಂಕಿತ ವ್ಯಕ್ತಿಗೆ ನೀಡಲು ಆಕ್ಸಿಜನ್ ಇಲ್ಲ, ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದೇ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸತ್ಯನಾರಾಯಣ ಶೆಟ್ಟಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರು ಬೆಡ್ ಖಾಲಿಯಲ್ಲ, ಜೊತೆಗೆ ಆಕ್ಸಿಜನ್ ಕೂಡ ಇಲ್ಲ ಎಂದು ಆಸ್ಪತ್ರೆಗೆ ದಾಖಲಿಸಲಿಲ್ಲ. ಮತ್ತೆ ದಾಖಲಿಸಿಕೊಂಡರೂ ಆಕ್ಸಿಜನ್ ವ್ಯವಸ್ಥೆಯಿಲ್ಲದ ಬೆಡ್ ನೀಡಿದರು. ಇದರಿಂದ ಅರ್ಧಗಂಟೆಯಲ್ಲಿ ಸೋಂಕು ಉಲ್ಬಣಿಸಿ ಸತ್ಯನಾರಾಯಣ ಶೆಟ್ಟಿ ಸಾವನ್ನಪ್ಪಿದ್ದಾರೆ.
Recommended Video
ಸೋಂಕಿತ ಸಾವು, ಆಸ್ಪತ್ರೆಯಲ್ಲಿ ಪ್ರತಿಭಟನೆ
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಎದುರಾಗಿ ಯುವಕನೊಬ್ಬ ಸಾವನ್ನಪ್ಪಿದ್ದು, ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಆಸ್ಪತ್ರೆಗೆ ಬಳಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಚಾಮರಾಜನಗರದ ನಿವಾಸಿ ಅಭಿಷೇಕ್(25) ಮೃತ ಸೋಂಕಿತ. ಈತನಿಗೆ ಕೋವಿಡ್ ಪಾಸಿಟಿವ್ ಆಗಿ ಕಳೆದ ಒಂದು ವಾರದಿಂದ ಹೋಂ ಐಸೋಲೇಷನ್ ನಲ್ಲಿದ್ದನು. ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಸೋಂಕಿತ ಮೃತಪಟ್ಟಿದ್ದಾನೆ.
ವೈದ್ಯರಿಗೆ ಉಸಿರಾಟದ ಸಮಸ್ಯೆ ಇದೆ ಎಂದು ಹೇಳಿದರೂ ಆಕ್ಸಿಜನ್ ಕೊಡದೆ ದಾಖಲಾತಿ ಪ್ರಕ್ರಿಯೆ ನಡೆಸಬೇಕೆಂದು ಕೂರಿಸಿದ್ದರು. ಕೊನೆಗೆ ಸೋಂಕಿತನ ಸ್ಥಿತಿ ಚಿಂತಾಜನಕಗೊಂಡಾಗ ಪರೀಕ್ಷೆ ನಡೆಸಿ ಐದು ನಿಮಿಷ ಬೇಗ ಕರೆತಂದಿದ್ದರೆ ರೋಗಿಯನ್ನು ಬದುಕಿಸಬಹುದಿತ್ತು. ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇದೆ ಎಂದು ವೈದ್ಯರು ಹೇಳಿದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಮೃತನ ಸ್ನೇಹಿತರು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಅಭಿಷೇಕ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.