ಮಳೆ ಅಬ್ಬರ: ಚಾಮರಾಜನಗರ ಜಿಲ್ಲೆಯ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ
ಚಾಮರಾಜನಗರ, ಆಗಸ್ಟ್ 4: ಎಡಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಸುರಿಯುತ್ತಿರುವ ಮಳೆ ಹಾಗೂ ಮುಂದಿನ ಎರಡು ದಿನಗಳ ಕಾಲ ಅತೀ ಹೆಚ್ಚು ಮಳೆ ಬೀಳುವ ಸಂಭವ ವರದಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಿಗೆ ಆಗಸ್ಟ್ 5 ಮತ್ತು 6 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗದಗದಲ್ಲಿ ಭಾರಿ ಮಳೆಗೆ ರೈತ ಹೈರಾಣ; ಸೌತೆ, ಬೆಂಡೆ ಕಾಯಿ ಬೆಳೆ ನಾಶ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಜಿಲ್ಲಾದ್ಯಂತ ಅತೀ ಹೆಚ್ಚು ಮಳೆ ಬೀಳುವ ಸಂಭವ ಇದೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಜಿಲ್ಲಾದ್ಯಂತ ಇರುವ ಎಲ್ಲಾ ಅಂಗನವಾಡಿ, ಎಲ್.ಕೆ.ಜಿ, ಯು.ಕೆ.ಜಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಗಸ್ಟ್ 5 ಹಾಗೂ 6ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಮಜ್ಜನ ಬಾವಿ ಮುಳುಗಡೆ
ಜಿಲ್ಲೆಯಲ್ಲಿ ಸುರಿಯುತ್ತಿರುವ ಜೋರುಮಳೆಗೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ನಂದನವನ ನೀರಿನಿಂದ ಆವೃತವಾಗಿದ್ದರೆ ಮಜ್ಜನ ಬಾವಿಯೇ ಮುಳುಗಡೆಯಾಗಿದೆ. ಮಾದಪ್ಪನಿಗೆ ನಿತ್ಯ ತ್ರಿಕಾಲ ಪೂಜೆ ನೆರವೇರಿಸಲು ಆಗ್ರೋದಕ ತರುವ ನಂದನವನ ಹಾಗೂ ಮಜ್ಜನ ಬಾವಿಯು ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದಾಗಿ ಶ್ರಾವಣ ಮಾಸದ ಪೂಜೆಯನ್ನು ನೆರವೇರಿಸುವ ಅರ್ಚಕರು ಮತ್ತೊಂದು ಬಾವಿಯಿಂದ ಜಲವನ್ನು ತಂದು ಮಾದಪ್ಪನಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.
ಇತ್ತ ಪ್ರಗತಿಯಲ್ಲಿರುವ ದೊಡ್ಡಕೆರೆ ಕಲ್ಯಾಣಿ ಕಾಮಗಾರಿಯಲ್ಲಿ ಕಟ್ಟೆಗಳು ಕುಸಿದಿದೆ. ಜೊತೆಗೆ ತಂಬಡಿಗೇರಿಯ ಚರಂಡಿಯ ಕೊಳಚೆ ನೀರು ನಂದನವನಕ್ಕೆ ನುಗ್ಗಿದ ಪರಿಣಾಮ ಮಜ್ಜನದ ಬಾವಿ ನೀರು ಕಲುಷಿತಗೊಂಡಿದೆ.
ಕಾವೇರಿಗೆ ಹಾರಿದ ಯುವಕ
ಯುವಕನೋರ್ವ ಭೋರ್ಗರೆದು ಹರಿಯುತ್ತಿರುವ ಕಾವೇರಿ ನದಿಗೆ ಹಾರಿರುವ ಘಟನೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ನಡೆದಿದೆ. ನದಿಗೆ ಹಾರಿರುವ ವ್ಯಕ್ತಿ ಕೊಳ್ಳೇಗಾಲ ಪಟ್ಟಣದ ಶಾಂತರಾಜು(28) ಎಂದು ತಿಳಿದುಬಂದಿದೆ. ಸೇತುವೆ ಮೇಲೆ ಬೈಕ್, ಮೊಬೈಲ್, ಬಟ್ಟೆ ಬಿಟ್ಟು ಹಾರಿದ್ದು ಈ ಸಂಬಂಧ ಕುಟುಂಬಸ್ಥರು ಯಾವುದೇ ದೂರು ಕೊಟ್ಟಿಲ್ಲ ಎಂದು ತಿಳಿದುಬಂದಿದೆ.
ಕ್ರಿಮಿನಾಶಕ ಕುಡಿದಿದ್ದ ಕಾರ್ಮಿಕ ಸಾವು
ಹೊಟ್ಟೆನೋವು ತಾಳಲಾರದೇ ಕ್ರಿಮಿನಾಶಕ ಸೇವಿಸಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಮಳವಳ್ಳಿ ತಾಲೂಕಿನ ಮುತ್ತತಿ ಗ್ರಾಮದ ಶಂಕರ್(40) ಮೃತ ದುರ್ದೈವಿ. ಶಂಕರ್ ಬಾಳಹುಣಸೆ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಆಗಾಗೆ ಬರುತ್ತಿದ್ದ ಹೊಟ್ಟೆನೋವು ತಾಳಲಾರದೆ ಕಳೆದ 30 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಂಕರ್ ಅಸುನೀಗಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತ
ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿದ್ದು, ಮೆಟ್ಟೂರು ಜಲಾಶಯದ ಹಿನ್ನೀರು ಹೆಚ್ಚಾದ ಪರಿಣಾಮ ಹನೂರು ತಾಲೂಕಿನ ಗೋಪಿನಾಥಂನ ಚಿಕ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಗೋಪಿನಾಥಂನಿಂದ ಆಲಂಬಾಡಿ, ಜಂಬಲ್ ಪಟ್ಟಿ, ಮಾರಿಕೊಟ್ಟಾಯಂ ಹಾಗೂ ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತಗೊಂಡಿದೆ. ಹೊಗೆನಕಲ್ ಬಳಿ ನೀರು ಸೇತುವೆ ಮೇಲೆ ಹರಿದ ಕಾರಣ ಸಾರಿಗೆ ಸಂಸ್ಥೆ ಬಸ್ವೊಂದು ಅರ್ಧದಲ್ಲಿಯೇ ನಿಂತಿದ್ದು, ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ನಿಮ್ಹಾನ್ಸ್,
ರೋಟರಿ
ಸಂಸ್ಥೆ
ಹಾಗೂ
ಮೆಡಿಕೊ
ಪ್ಯಾಸ್ಟೊರಾಲ್
ಅಸೋಸಿಯೇಷನ್
ನೆರವಿನಿಂದ
ಬೆಂಗಳೂರಿನಲ್ಲಿ
ಆತ್ಮಹತ್ಯೆ
ತಡೆಗಟ್ಟಲು,
ಮಾನಸಿಕ
ಖಿನ್ನತೆಯಿಂದ
ಬಳಲುವವರಿಗಾಗಿ
SAHAI
ಸಹಾಯವಾಣಿ
ಇಂತಿದೆ:
080
-
25497777