ಮದುವೆ ಮನೇಲಿ ಮತಜಾಗೃತಿ: ನವದಂಪತಿಗಳಿಂದ ಆದರ್ಶ ಕಾರ್ಯ
ಚಾಮರಾಜನಗರ, ಮೇ 04: ಮತಹಾಕುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು ಅದನ್ನು ಚಲಾಯಿಸುವಂತೆ ಮಾಡಲು ಈಗಾಗಲೇ ಚುನಾವಣಾ ಆಯೋಗ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಕಡ್ಡಾಯ ಮತದಾನ ಮಾಡುವಂತೆ ಎಲ್ಲರಿಗೂ ಮನವಿ ಮಾಡುತ್ತಿದೆ.
ಬೀದಿ ನಾಟಕ, ಜಾಥಾ, ಮತದಾನದ ಪ್ರತಿಜ್ಞೆ ಕೈಗೊಳ್ಳುವ ಮೂಲಕವೂ ಜಾಗೃತಿ ಮೂಡಿಸುತ್ತಿದ್ದು, ಎಲ್ಲರೂ ಮತದಾನದ ದಿನ ಮತ ಚಲಾಯಿಸಲು ಬೂತ್ನತ್ತ ಬರುವಂತೆ ಮಾಡುತ್ತಿದೆ. ಇದೆಲ್ಲದರ ನಡುವೆ ಚಾಮರಾಜನಗರದಲ್ಲಿ ಮದುವೆ ಮಂಟಪದಲ್ಲಿಯೇ ಮತದಾನದ ಜಾಗೃತಿ ಮೂಡಿಸಿರುವುದು ವಿಶೇಷವಾಗಿದೆ.
ಮತದಾನ ಮಾಡಲು ಕನ್ನಡ ನಟನಟಿಯರಿಂದ ಸಂದೇಶ
ಚಾಮರಾಜನಗರದ ನಂದಿಭವನದಲ್ಲಿ ಹರದನಹಳ್ಳಿ ಗಾಮದ ಮಧುಸೂಧನ್ ರವರ ವಿವಾಹ ಏರ್ಪಡಿಸಲಾಗಿತ್ತು. ಈ ವಿವಾಹದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ನೆರವಿನೊಂದಿಗೆ ಕಲ್ಯಾಣ ಮಂಟಪದಲ್ಲೇ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ನಡೆಸಿದ್ದು ಇದಕ್ಕೆ ಜಿಲ್ಲಾಡಳಿತ ಅಭಿನಂದಿಸಿದೆ.
ವಧುವರರನ್ನು ಆಶೀರ್ವದಿಸಲು ಬರುವ ನೂರಾರು ಮಂದಿ ಬಂಧು ಬಳಗದವರಿಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ನೇತೃತ್ವದಲ್ಲಿ ನವದಂಪತಿ ಕಡಾಯ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಲ್ಲದೆ ಹಣಕ್ಕಾಗಿ ಮತಗಳನ್ನು ಮಾರಾಟ ಮಾಡಿಕೊಳ್ಳದಿರಲು ತೀರ್ಮಾನಿಸಿ ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗೆ ಮತ ಚಲಾವಣೆ ಮಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.
ಈ ಕುರಿತು ತಾಪಂ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿ ಸಾರ್ವಜನಿಕರಿಗೆ ಅಧಿಕಾರಿಗಳ ಮಟ್ಟದಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಮದುವೆ ಮನೆಯಲ್ಲೂ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಿರುವ ಕಾರ್ಯಕ್ರಮ ವಿಶಿಷ್ಟವಾಗಿದ್ದು, ಇಂತಹ ಕಾರ್ಯಗಳು ಜಿಲ್ಲೆಯ ಬಹುತೇಕ ಕಡೆ ನಡೆದರೆ ಉತ್ತಮವಾಗಿರುತ್ತದೆ ಹಾಗೂ ಜನರಲ್ಲಿ ಮತದಾನದ ಮಹತ್ವ ಏನೆಂಬುದು ಗೊತ್ತಾಗಲಿದೆ. ಅಲ್ಲದೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳು ಆರಿಸಿ ಬರಲು ಸಾಧ್ಯವಾಗುತ್ತದೆ ಎಂದರು.
ಅಂತು ಮದುವೆ ಮನೆಯಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ಎಲ್ಲರ ಗಮನಸೆಳೆದಿದ್ದಂತು ನಿಜ.