PAYCM ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ: ಪೊಲೀಸ್ ಅಧಿಕಾರಿ ಅಮಾನತ್ತಿಗೆ ಆಗ್ರಹ
ಚಾಮರಾಜನಗರ, ಅಕ್ಟೋಬರ್ 1: ಶುಕ್ರವಾರ ರಾಜ್ಯದಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ PAYCM ಟೀ ಶರ್ಟ್, ಧ್ವಜ ಹಿಡಿದು ಹೆಜ್ಜೆ ಹಾಕಿದ್ದ ಯುವಕನ ಮೇಲೆ ಎಫ್ಐಆರ್ ದಾಖಲಾಗಿದೆ.
ವಿಜಯಪುರ ಮೂಲದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಈತ PAYCM ಎಂಬ ಟೀ ಶರ್ಟ್, ಧ್ವಜ ಹಿಡಿದು ಹೆಜ್ಜೆ ಹಾಕಿ ಇದು 40% ಸರ್ಕಾರ, ಯುವಕರಿಗೆ ಉದ್ಯೋಗ ಕೊಡದೇ ಬೀದಿಪಾಲು ಮಾಡುತ್ತಿರುವ ಸರ್ಕಾರ ಇದನ್ನ ತೆಗೆದೇ ತೆಗೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದರ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ವೈರಲ್ ಆಗಿದ್ದವು.
ವರದಿ ಕಂಡು ಗುಂಡ್ಲುಪೇಟೆ ಪುರಸಭಾ ಸದಸ್ಯ ಕಿರಣ್ ಗೌಡ ಹಾಗೂ ಸುರೇಶ್ ಎಂಬವರು ಚಾಮರಾಜನಗರ ಸಿಇಎನ್ ಠಾಣೆಗೆ ದೂರು ಕೊಟ್ಟು, ರಾಜ್ಯದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡುವ ರೀತಿ ನಡೆದುಕೊಳ್ಳುತ್ತಿರುವ ಈ ಯುವಕನನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿದ್ದರು. ಈ ಸಂಬಂಧ ಯುವಕನ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಹುಲ್ ಗಾಂಧಿ ಎದುರು ಬಿಜೆಪಿ ಹಾಗೂ ಪೊಲೀಸರಿಗೆ ವಾರ್ನಿಂಗ್ ಕೊಟ್ಟ ಸಿದ್ದರಾಮಯ್ಯ
ಪೇ ಸಿಎಂ ಶರ್ಟ್ ಬಿಚ್ಚಿಸಿದ ಪೊಲೀಸ್
ದೂರು ದಾಖಲಾದ ಹಿನ್ನಲೆ ಭಾರತ್ ಜೋಡೋ ಯಾತ್ರೆಯಲ್ಲಿ ಪೇ ಸಿಎಂ ಎಂದು ಟೀ ಶರ್ಟ್ , ಧ್ವಜ ಹಿಡಿದು ಓಡಾಡುತ್ತಿದ್ದ ಯುವಕ ಅಕ್ಷಯ್ನನ್ನು ಯಾತ್ರೆ ವೇಳೆಯೇ ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಖಂಡನೆ
ಪೇಸಿಎಂ ಟಿ ಶರ್ಟ್ ಧರಿಸಿದ್ದ ಕಾರ್ಯಕರ್ತನನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, " ಪೇಸಿಎಂ ಟೀ ಶರ್ಟ್ ಹಾಕಿಕೊಂಡ ಹುಡುಗನಿಗೆ ಪೊಲೀಸರು ಹೊಡೆದಿದ್ದಾರೆ. ಬಿಜೆಪಿಯವರಿಗೆ ನಾವು ಮಾಡುತ್ತಿರುವ ಕೆಲಸ ಸಹಿಸುವುದಕ್ಕಾಗುತ್ತಿಲ್ಲ, ನನ್ನನ್ನೇ ಬಿಡ್ತಿಲ್ಲ ಕಾರ್ಯಕರ್ತರನ್ನು ಬಿಡುತ್ತಾರಾ ಎಂದು ಡಿ.ಕೆ. ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಶುಕ್ರವಾರ ಭರ್ಜರಿ ಆರಂಭ ಪಡೆದಿದ್ದ ಭಾರತ್ ಜೋಡೋ ಯಾತ್ರೆ ಶನಿವಾರ ಅಭೂತಪರ್ವವಾಗಿ ಆರಂಭಗೊಂಡಿತ್ತು. 2ನೇ ದಿನವಾದ ಶನಿವಾರ ಗುಂಡ್ಲುಪೇಟೆಯ ತೊಂಡವಾಡಿ ಗೇಟ್ನಿಂದ ಆರಂಭವಾಗಿತ್ತು. ಇದೀಗ ಮೈಸೂರು ಜಿಲ್ಲೆಗೆ ಆಗಮಿಸಿದ್ದು, ಕಾಂಗ್ರೆಸ್ ನಾಯಕರಿಗೆ ಅದ್ದೂರಿ ಸ್ವಾಗತ ದೊರೆತಿದೆ.
ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿ:
ಪೇಸಿಎಂ ಟಿಶರ್ಟ್ ಧರಿಸಿದ್ದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಬೀದಿ ಗುಂಡಾನಂತೆ ಹಲ್ಲೆಗೈದ ಪೊಲೀಸ್ ಅಧಿಕಾರಿಯ ಕೃತ್ಯ ಖಂಡನೀಯ. ಈ ಪುಂಡ ಪೊಲೀಸನನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಯಥಾ ಮುಖ್ಯಮಂತ್ರಿ, ತಥಾ ಪೊಲೀಸ್. ಸರ್ಕಾರದಲ್ಲಿ ಯುಪಿ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಪೊಲೀಸರು ಅದನ್ನು ಅನುಷ್ಠಾನಗೊಳಿಸಲು ಹೊರಟಂತಿದೆ. 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ವಿರುದ್ಧದ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ಧಮ್ಮು-ತಾಕತ್ತು ಬಿಜೆಪಿಗೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಎದುರಿಸಲು ಸಾಧ್ಯವಾಗದೆ ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.