ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪುಟ ಒಪ್ಪಿಗೆ
ಚಾಮರಾಜನಗರ, ಮಾರ್ಚ್ 12; ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮವನ್ನು 'ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ' ಎಂದು ಘೋಷಣೆ ಮಾಡಲು ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ ಕರ್ನಾಟಕದ 6ನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಬೇಕಾದ ತಯಾರಿಯನ್ನು ಅರಣ್ಯ ಇಲಾಖೆ ಮಾಡಿಕೊಂಡಿತ್ತು. ಈಗ ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆಯೂ ದೊರಕಿದೆ.
ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಮಲೆ ಮಹದೇಶ್ವರ ವನ್ಯಧಾಮವನ್ನು 'ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ' ಎಂದು ಘೋಷಣೆ ಮಾಡಲು ಒಪ್ಪಿಗೆ ನೀಡಲಾಯಿತು.
ಕರ್ನಾಟಕ; 6ನೇ ಹುಲಿ ಸಂರಕ್ಷಿತ ಪ್ರದೇಶ ಶೀಘ್ರವೇ ಘೋಷಣೆ
ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಮಹದೇಶ್ವರ ಬೆಟ್ಟ, ಹನೂರು, ಯಡೆಯಾರಳ್ಳಿ ರಕ್ಷಿತ ಅರಣ್ಯವನ್ನು ಒಗ್ಗೂಡಿಸಿ 906 ಚದರ ಕಿ. ಮೀ. ವಿಸ್ತೀರ್ಣವನ್ನು ಇದರ ವ್ಯಾಪ್ತಿಗೆ ತರಲಾಗುತ್ತದೆ.
ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ
2018ರಲ್ಲಿ ಹುಲಿ ಗಣತಿ ನಡೆಸಿದ ಸಂದರ್ಭದಲ್ಲಿ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ 18 ರಿಂದ 20 ಹುಲಿಗಳಿವೆ ಎಂಬ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಕರ್ನಾಟಕ ಸರ್ಕಾರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಪ್ರಸ್ತಾವನೆ ತಯಾರು ಮಾಡಿತ್ತು.
6ನೇ ಹುಲಿ ಸಂರಕ್ಷಿತ ಪ್ರದೇಶ; ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ ಕರ್ನಾಟಕದ 6ನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಅಲ್ಲದೇ ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಎರಡು ಹುಲಿ ಸಂರಕ್ಷಿತ ಪ್ರದೇಶವಿದ್ದು, ಇದು ಮೂರನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ.
ಮಲೆ ಮಹದೇಶ್ವರ ವನ್ಯಧಾಮದ ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಪೂರ್ವಕ್ಕೆ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಆದ್ದರಿಂದ ಇದು ಹುಲಿಗಳ ವಾಸಕ್ಕೆ ಯೋಗ್ಯವಾದ ಪ್ರದೇಶ ಎಂದು ಅಂದಾಜಿಸಲಾಗಿತ್ತು.
ಆದ್ದರಿಂದ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಕರ್ನಾಟಕ ಸರ್ಕಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಈ ಪ್ರಸ್ತಾವನೆಗೆ ಪ್ರಾಧಿಕಾರ ಕೆಲವೊಂದು ಸ್ಪಷ್ಟನೆಗಳನ್ನು ಕೇಳಿತ್ತು.
ಅವುಗಳಲ್ಲಿ ಪ್ರಮಖವಾಗಿ ಇದರ ವ್ಯಾಪ್ತಿಗೆ ಸೇರುವ ಗ್ರಾಮಗಳು, ಜನವಸತಿ ಪ್ರದೇಶಗಳು, ಧಾರ್ಮಿಕ ಕ್ಷೇತ್ರ, ಪ್ರವಾಸೋದ್ಯಮ ಕ್ಷೇತ್ರ ಮುಂತಾವುಗಳ ಗಡಿಗಳನ್ನು ಗುರುತಿಸಬೇಕಿತ್ತು. ಕರ್ನಾಟಕ ಸರ್ಕಾರ ಪುನಃ ಪ್ರಾಧಿಕಾರಕ್ಕೆ ಸ್ಪಷ್ಟನೆಗಳನ್ನು ಕಳಿಸಿಕೊಟ್ಟ ಬಳಿಕ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಒಪ್ಪಿಗೆ ನೀಡಲಾಗಿತ್ತು.
ಪ್ರಯೋಜನೆಗಳೇನು?; ಹುಲಿ ಮೀಸಲು ಪ್ರದೇಶ ಅಥವ ಸಂರಕ್ಷಿತ ಪ್ರದೇಶವನ್ನು ಭಾರತ ಸರ್ಕಾರದ ಸಮ್ಮತಿಯೊಂದಿಗೆ ರಾಜ್ಯ ಸರ್ಕಾರ ಘೋಷಣೆ ಮಾಡುತ್ತದೆ. ಹುಲಿ ಮೀಸಲು ಪ್ರದೇಶ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.) ಹುಲಿ ಯೋಜನೆಯಡಿ ನಿಧಿ ಸ್ವೀಕರಿಸಲು ಅರ್ಹವಾಗಿರುತ್ತದೆ.
ಹುಲಿ ಮೀಸಲು ಪ್ರದೇಶದಲ್ಲಿ ನಡೆಸಲಾಗುವ ಚಟುವಟಿಕೆಗಳನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಒಂದು ಹುಲಿ ಮೀಸಲು ಪ್ರದೇಶ ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನ ಅಥವಾ ಅಭಯಾರಣ್ಯ, ಅಥವಾ ಎರಡನ್ನೂ ಒಳಗೊಂಡಿರುತ್ತದೆ.
ಕರ್ನಾಟಕದಲ್ಲಿ ಈಗಾಗಲೇ ದಾಂಡೇಲಿ ಅಂಶಿ, ಬಂಡೀಪುರ, ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಈ ಪಟ್ಟಿಗೆ ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ ಹೊಸದಾಗಿ ಸೇರ್ಪಡೆಯಾಗುತ್ತಿದೆ.
ದೇಶದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಣತಿ ನಡೆಸಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪದೇಶದಲ್ಲಿ ಹುಲಿ ಗಣತಿ ನಡೆಸಲಾಗಿದೆ. ಈ ಹಿಂದೆ ನಡೆದ ಗಣತಿ ಅನ್ವಯ ಕರ್ನಾಟಕದಲ್ಲಿ 524 ಹುಲಿಗಳಿದ್ದವು.