ಎದುರಾಳಿ ಮುನ್ನಡೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದೇನು?
ಕಾಂಗ್ರೆಸ್ ಅಭ್ಯರ್ಥಿಯು ಅದೆಷ್ಟೇ ಮುನ್ನಡೆ ಸಾಧಿಸಲು, ಅಂತಿಮವಾಗಿ, ಸುಮಾರು 5 ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುವುದು ಖಚಿತ ಎಂದು ನಿರೀಕ್ಷಿಸಿದ್ದೇವೆ. ಹಾಗಾಗಿ, ಅಂತಿಮ ಫಲಿತಾಂಶದವರೆಗೂ ಕಾಯಬೇಕಿದೆ ಎಂದಿದ್ದಾರೆ ಶ್ರೀನಿವಾಸ್ ಪ್ರಸಾದ್.
ನಂಜನಗೂಡು, ಏಪ್ರಿಲ್ 13: ನಂಜನಗೂಡು ಉಪಚುನಾವಣೆಯ ಮತ ಎಣಿಕೆಯು ಈಗಾಗಲೇ ಆರಂಭವಾಗಿದ್ದು, ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಅವರ ಎದುರಾಳಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವ ಮೂರ್ತಿಯವರು ಸುಮಾರು 5 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಪ್ರಸಾದ್, ''ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯಾವ ರೀತಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಯಾವ ರೀತಿಯಲ್ಲಿ ಹಣ ಬಳಕೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಾವು ಚುನಾವಣೆಯ ನಂತರ ಹಲವಾರು ಸಮೀಕ್ಷಾ ಮಾಹಿತಿಗಳನ್ನು ವಿಶ್ಲೇಷಿಸಿದ್ದೇವೆ. ಬಿಜೆಪಿ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ'' ಎಂದು ತಿಳಿಸಿದರು.
''ಕಾಂಗ್ರೆಸ್ ಅಭ್ಯರ್ಥಿಯು ಅದೆಷ್ಟೇ ಮುನ್ನಡೆ ಸಾಧಿಸಲು, ಅಂತಿಮವಾಗಿ, ಸುಮಾರು 5 ಸಾವಿರ ಮತಗಳ ಅಂತರದಲ್ಲಿ ನಾನು ಗೆಲ್ಲುವುದು ಖಚಿತ ಎಂದು ನಿರೀಕ್ಷಿಸಿದ್ದೇವೆ. ಹಾಗಾಗಿ, ಅಂತಿಮ ಫಲಿತಾಂಶದವರೆಗೂ ಕಾಯಬೇಕಿದೆ'' ಎಂದು ತಿಳಿಸಿದರು.
ಇದಲ್ಲದೆ, ''ಈಗ ಆರಂಭಿಕ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರಬಹುದು. ಮತ ಎಣಿಕೆಯ ಇನ್ನು ಹಲವಾರು ಸುತ್ತುಗಳು ಇವೆ. ಕೊನೆಯವರೆಗೂ ಕಾದು ನೋಡೋಣ'' ಎಂದು ಅವರು ತಿಳಿಸಿದರು.