ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ ಬಿ.ವೈ ವಿಜಯೇಂದ್ರ
ಚಾಮರಾಜನಗರ, ಡಿಸೆಂಬರ್ 1: ಅಪ್ಪ ಚೆಕ್ ಮೂಲಕ, ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪದ ವಿಚಾರವಾಗಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ""ಸಿದ್ದರಾಮಯ್ಯ ಒಬ್ಬ ಅಡ್ವೊಕೇಟ್, ಚೆಕ್ ಅಥವಾ ಆರ್.ಟಿ.ಜಿ.ಎಸ್ ಮೂಲಕ ಲಂಚ ತೆಗೆದುಕೊಂಡಿದ್ದರೆ ಮಾಧ್ಯಮಗಳ ಮುಂದೆ ಬಂದು ತೋರಿಸಲಿ'' ಎಂದು ಸವಾಲು ಹಾಕಿದರು.
ಸಂಪುಟ ವಿಸ್ತರಣೆ: ಮೌನಕ್ಕೆ ಶರಣಾದ ಯಡಿಯೂರಪ್ಪ, ಒಂದು ಹೆಜ್ಜೆ ಹಿಂದಿಟ್ಟಿದ್ದು ಈ ಕಾರಣಕ್ಕೆ
ಸುಮ್ಮನೆ ಯಾರೋ ರಸ್ತೆಯಲ್ಲಿ ಬಂದವನು ಆರೋಪ ಮಾಡುತ್ತಾನೆ ಅಂತ, ಮುಖಂಡರುಗಳು ಮಾತನಾಡುವುದರಲ್ಲಿ ಅರ್ಥ ಇಲ್ಲ. ವಿರೋಧ ಪಕ್ಷಗಳಿಗೆ ಬಿಜೆಪಿ ಬಗ್ಗೆ ಮಾತನಾಡಲು ಏನು ಉಳಿದುಕೊಂಡಿಲ್ಲ. ಅದರಲ್ಲೂ ಕೆ.ಆರ್.ಪೇಟೆ, ಶಿರಾದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಮುಖ ತೋರಿಸಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಚಾಮುಂಡೇಶ್ವರಿ ತಾಯಿಯ ಶಾಪ ತಟ್ಟಿದೆ
ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣೆ ಎದುರಿಸುವ ನೈತಿಕ ಸ್ಥೈರ್ಯ ಕಳೆದುಕೊಂಡಿವೆ. ಇದರಿಂದ ಹತಾಶರಾಗಿ ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ ಎಂದು ಬಿ.ವೈ ವಿಜಯೇಂದ್ರ ಟೀಕಿಸಿದರು. ಇದೇ ಸಂದರ್ಭದಲ್ಲಿ ಎಚ್.ವಿಶ್ವನಾಥ್ಗೆ ಚಾಮುಂಡೇಶ್ವರಿ ತಾಯಿಯ ಶಾಪ ತಟ್ಟಿದೆ ಎಂದ ಸಾ.ರಾ.ಮಹೇಶ್ ಹೇಳಿಕೆ ವಿಚಾರಕ್ಕೆ, ಅವರು ಯಾರ್ರಿ ಹೇಳುವುದಕ್ಕೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೊಳ್ಳೆಗಾಲದಲ್ಲಿ ಹೇಳಿದರು.
ವಲಸಿಗರು ಹೇಳುವುದು ಸರಿ ಇದೆ
ಅತೀ ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ಮುಸುಕಿನ ಗುದ್ದಾಟ ವಿಚಾರದಲ್ಲಿ ರೇಣುಕಾಚಾರ್ಯ ಹೇಳಿಕೆ ಸರಿಯಾಗಿದೆ ಹಾಗೂ ವಲಸಿಗರು ಹೇಳುವುದು ಸರಿ ಇದೆ ಎನ್ನುವ ಮೂಲಕ ಪಕ್ಷದ ಆಂತರಿಕ ಜಗಳವನ್ನು ವಿಜಯೇಂದ್ರ ಒಪ್ಪಿಕೊಂಡರು.
ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಟಾಂಗ್
ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿ ಸಿಎಂ ಯಡಿಯೂರಪ್ಪನವರಿಗೆ ಇದ್ದು, ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಎಂಎಲ್ಸಿ ಸಿ.ಪಿ ಯೋಗೇಶ್ವರ್ ಅವರಿಗೆ ಮಂತ್ರಿ ಮಾಡುವ ಕುರಿತು ಮಾತನಾಡಿ, ಯಾರನ್ನು ಮಂತ್ರಿ ಮಾಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪಕ್ಷವನ್ನು ನಂಬಿ ಬಂದವರಿಗೆ ಯಡಿಯೂರಪ್ಪನವರು ಬೆಂಬಲ ಕೊಟ್ಟಿದ್ದಾರೆ ಎನ್ನುವ ಮೂಲಕ ಎಚ್.ವಿಶ್ವನಾಥ್ ಅವರ ಬಿಜೆಪಿ ವಿರುದ್ಧದ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಟಾಂಗ್ ನೀಡಿದರು.
ಸಿಎಂ ಹಾಗೂ ರಾಜ್ಯಾಧ್ಯಕ್ಷರು ಕುಳಿತು ಚರ್ಚೆ
ಎಚ್.ವಿಶ್ವನಾಥ್ ಹಿರಿಯರಿದ್ದಾರೆ. ಹೈಕೋರ್ಟ್ ಮಧ್ಯಂತರ ತೀರ್ಪು ನಮಗೂ ಅಘಾತವನ್ನು ತಂದಿದೆ. ಹಿರಿಯರು ಕುಳಿತುಕೊಂಡು ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ವ್ಯವಸ್ಥಿತವಾಗಿ ವಿಶ್ವನಾಥ್ ಅವರನ್ನ ಪಕ್ಷದೊಳಗೆ ಗಡೆಗಣಿಸುತ್ತಿರುವ ವಿಚಾರವಾಗಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಮೇಲ್ಮನವಿ ಸಲ್ಲಿಸುವ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರು ಕುಳಿತು ಚರ್ಚೆ ಮಾಡುತ್ತಾರೆ ಎಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಿ.ವೈ.ವಿಜಯೇಂದ್ರ ರಾಜ್ಯ ರಾಜಕೀಯ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದರು.