ಅಂತರ್ಜಲ ಸಂರಕ್ಷಣೆಗಾಗಿ ಕಂದಕ-ಬಂಡು ನಿರ್ಮಾಣ
ಗುಂಡ್ಲುಪೇಟೆ, ಫೆಬ್ರವರಿ 20: ಕಳೆದ ವರುಷದ ಹಿಂಗಾರು ಉತ್ತಮವಾಗಿ ಸುರಿದ ಕಾರಣ ಗುಂಡ್ಲುಪೇಟೆ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬಿದ್ದವು. ಇದ್ದು ಹಲವು ವರ್ಷಗಳಿಂದ ಬರದಿಂದ ತತ್ತರಿಸಿದ ತಾಲೂಕಿಗೆ ಕೊಂಚ ರಿಲ್ಯಾಕ್ಸ್ ತಂದಿತ್ತು.
ಮುಂದಿನ ದಿನಗಳಲ್ಲಿ ಮಳೆ ಸುರಿದರೆ ಅದನ್ನು ಹಿಡಿದಿಟ್ಟು ಭೂಮಿಗೆ ಸೇರಿಸುವ ಕಾರ್ಯಕ್ಕೆ ಈ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯು ಮುಂದಾಗಿದ್ದು, ತಾಲೂಕಿನ ತೆರಕಣಾಂಬಿ ಹೋಬಳಿಯ ಜಲಾಯನಯನ ಪ್ರದೇಶದ ರೈತರ ಜಮೀನುಗಳಲ್ಲಿ ಕಂದಕ ಹಾಗೂ ಬಂಡು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದರಿಂದ ಮಳೆಗಾಲದಲ್ಲಿ ಬಿದ್ದ ಮಳೆ ನೀರು ಹರಿದು ಹೋಗದೆ ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಳಕ್ಕೂ ಅವಕಾಶವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಪ್ರದೇಶವು ಎತ್ತರ ಹಾಗೂ ಇಳಿಜಾರಿನಿಂದ ಕೂಡಿದ್ದು, ಇಲ್ಲಿನ ಆಲವಾಡಿ ಹಾಗೂ ಕಡತಾಳಕಟ್ಟೆಹುಂಡಿ ಗ್ರಾಮಗಳ ಜಮೀನುಗಳಲ್ಲಿ ಮೇಲ್ಭಾಗದಿಂದ ಬಿದ್ದ ಮಳೆಯ ನೀರು ಸಾರಾಗವಾಗಿ ಹರಿದು ಹೋಗುವುದಲ್ಲದೆ, ಇದರೊಂದಿಗೆ ಮಣ್ಣು ಕೂಡ ಕೊಚ್ಚಿಕೊಂಡು ಹೋಗುತ್ತಿದೆ. ಮಣ್ಣಿನ ಸವಕಳಿಯುಂಟಾಗಿ ಫಲವತ್ತತೆಯ ಕೊರತೆಯಿಂದ ಜಮೀನು ಬರಡಾಗುವುದಲ್ಲದೆ, ಇಲ್ಲಿ ಅಂತರ್ಜಲದ ಕೊರತೆಯೂ ಕಾಡುತ್ತಿತ್ತು.
ಇದನ್ನು ತಡೆಗಟ್ಟಲು ಕೃಷಿ ಅಧಿಕಾರಿಗಳು ಕಂದಕ ಮತ್ತು ಬಂಡು ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಸರ್ವೇ ನಡೆಸಿ 300 ಹೆಕ್ಟೇರ್ ಪ್ರದೇಶದಲ್ಲಿ ಜಮೀನುಗಳಲ್ಲಿ ಕಂದಕ ಹಾಗೂ ಬಂಡುಗಳನ್ನು ನಿರ್ಮಾಣ ಮಾಡಲು ಯೋಜನೆ ತಯಾರಿಸಿ ಸದ್ಯ 150ರಿಂದ 160 ಹೆಕ್ಟೇರ್ ಜಮೀನುಗಳಲ್ಲಿ ಬಂಡು ನಿರ್ಮಾಣ ಕಾರ್ಯ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ತೆರಕಣಾಂಬಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎನ್.ಪರಮೇಶ್ವರಪ್ಪ ಅವರು, ಕೃಷಿ ಇಲಾಖೆಯ ವತಿಯಿಂದ ಕಳೆದ ಮೂರು ವರ್ಷಗಳಿಂದ ಹೋಬಳಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಕೆರೆಕಟ್ಟೆಗಳನ್ನು ದುರಸ್ತಿಗೊಳಿಸಿದ ಪರಿಣಾಮ ಸ್ವಲ್ಪ ಪ್ರಮಾಣದಲ್ಲಿ ಅಂತರ್ಜಲ ವೃದ್ದಿಯಾಗಿ ಬತ್ತಿದ್ದ ಹಲವು ಕೊಳವೆಬಾವಿಗಳಲ್ಲಿ ನೀರು ಸಂಗ್ರಹವಾಗಿದೆ, ಗ್ರಾಮಪಂಚಾಯಿತಿ ಕಾರ್ಮಿಕರ ಕೊರತೆಯಿಂದ ನರೇಗಾ ಯೋಜನೆಯಲ್ಲಿ ಬಂಡು ನಿರ್ಮಾಣ ಮಾಡಲು ಮುಂದಾಗದ ಕಾರಣದಿಂದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಯೋಜನೆಯನ್ನು ಜೆಸಿಬಿ ಬಳಸಿ ಕೆಲವೇ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಡುಗಳ ಮೇಲೆ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯ ನೆರವಿನಿಂದ ಸಸಿಗಳನ್ನು ನಡೆಲಾಗುವುದಾಗಿ ತಿಳಿಸಿದ್ದಾರೆ.