ಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧು
ಚಾಮರಾಜನಗರ, ಫೆಬ್ರವರಿ 6: ಮದುವೆಯ ಹಿಂದಿನ ದಿನ ನಸುಕಿನ ಹೊತ್ತಲ್ಲಿ ವಧು ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.
ತೆರಕಣಾಂಬಿ ಗ್ರಾಮದ ಯುವಕ ಯುವತಿಗೆ ಫೆಬ್ರವರಿ 5ರಂದು ಮದುವೆ ನಿಶ್ಚಯವಾಗಿತ್ತು. ಕಳೆದ ವರ್ಷವೇ ಇಬ್ಬರದ್ದೂ ನಿಶ್ಚಿತಾರ್ಥ ನಡೆದಿತ್ತು. ತೆರಕಣಾಂಬಿ ಗ್ರಾಮದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಸಲು ಸಿದ್ಧತೆ ನಡೆಯುತ್ತಿತ್ತು. ಆದರೆ ಅದಕ್ಕೂ ಮುನ್ನ ಯುವತಿ ಪರಾರಿಯಾಗಿದ್ದಾಳೆ. ಫೆ.3ರ ಸೋಮವಾರ ವಧುವಿಗೆ ನೀರು ಹಾಕುವ ಶಾಸ್ತ್ರ ಇತ್ತು. ಅದು ಮುಗಿದ ಮಾರನೆ ದಿನ ಮಂಗಳವಾರ ಮುಂಜಾನೆ ಮೂರರ ಸಮಯದಲ್ಲಿ ನಾಪತ್ತೆಯಾಗಿದ್ದಾಳೆ.
ಬಸ್ ಕಾಯುತ್ತಿದ್ದ ಯುವತಿ ಕಿಡ್ನ್ಯಾಪ್; ಕಾರಿನಲ್ಲೇ ಕಲ್ಯಾಣ!
ಮದುವೆ ಇನ್ನು ಒಂದು ದಿನ ಇದ್ದಿದ್ದರಿಂದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ವಧು ಪರಾರಿಯಾಗಿ ಮದುವೆ ನಿಂತಿದೆ. ವಧು ಎಲ್ಲಿ ಹೋಗಿದ್ದಾಳೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾರಣವೂ ತಿಳಿದುಬಂದಿಲ್ಲ. ಆದರೆ ಮದುವೆ ಮುರಿದು ಬಿದ್ದಿದ್ದಕ್ಕೆ ವರನ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ.
ಮದುವೆಗೆ ತಮ್ಮ ಹಣ ಖರ್ಚಾಗಿದೆ, ವಧುವಿನ ಮನೆಯವರು ಹಣ ಕಟ್ಟಿಕೊಡಲಿ ಎಂದು ಪಟ್ಟು ಹಿಡಿದಿದ್ದಾರೆ.