ಬ್ರೈಲ್ ಲಿಪಿ ಬಳಸದೆ ಪಿಎಚ್ಡಿ ಪಡೆದ ದಿವ್ಯಾಂಗ ವಿದ್ಯಾರ್ಥಿ
ಚಾಮರಾಜನಗರ, ಡಿಸೆಂಬರ್ 15: ಚಾಮರಾಜನಗರ ಜಿಲ್ಲೆಯ ಸಮೀಪದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಅಂಧ ವಿದ್ಯಾರ್ಥಿ ಎಚ್.ಎನ್ ಮನು ಕುಮಾರ್ ಬ್ರೈಲ್ ಲಿಪಿ ಬಳಸದೆ ಸ್ಕ್ರೈಬ್ ಗಳನ್ನು ಬಳಸಿಕೊಂಡು ಮಹಾ ಪ್ರಬಂಧವೊಂದನ್ನು ಮಂಡಿಸಿ ಆ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಮನು ಕುಮಾರ್ ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕಾಡಂಚಿನ ಹಂಗಳ ಎಂಬ ಕುಗ್ರಾಮದಲ್ಲಿ. ಹುಟ್ಟಿನಿಂದಲೇ ಇವರು ಅಂಧರಾಗಿದ್ದರೂ, ಇವರು ಬೇರೆಲ್ಲರಂತೆ ಸ್ನಾತಕ ಪದವಿ ಪಡೆಯುವುದಕ್ಕೆ ಅಂಧತ್ವ ಎಂದಿಗೂ ಅಡ್ಡಿ ಆಗಲಿಲ್ಲ.
ಬಂಡೀಪುರದಲ್ಲಿ ಹಸಿರು ಮರುಸ್ಥಾಪನೆಗೆ ಹೀಗೊಂದು ಹೊಸ ಪ್ರಯೋಗ
ಮೊದಲಿನಿಂದಲೂ ಒದಿನಲ್ಲಿ ಚುರುಕಾಗಿದ್ದ ಇವರು, ಈಗ ಜೆಎಸ್ಎಸ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ 2016ರಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಇದೀಗ ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ರಾಜ್ಯಶಾಸ್ತ್ರ ವಿಷಯದಲ್ಲಿ "ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಧೆಗಳ ಪಾತ್ರ' ಎಂಬ ಮಹಾಪ್ರಬಂಧವನ್ನು ಮೈಸೂರು ವಿವಿ ಸಂಜೆ ಕಾಲೇಜಿನ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಆರ್.ಎನ್ ದಿನೇಶ್ ಅವರ ಮಾರ್ಗದರ್ಶನದಲ್ಲಿ ಮೂರೂವರೆ ವರ್ಷಗಳ ಅವಧಿಯಲ್ಲಿ 105 ಶಾಲೆಯ 354ಕ್ಕೂ ಹೆಚ್ಚು ಮಕ್ಕಳನ್ನು ಖುದ್ದಾಗಿ ಸಂದರ್ಶಿಸಿ ಸಂಶೋಧನಾ ಪ್ರಬಂಧ ಮಂಡಿಸಿ, ಪಿಎಚ್ಡಿ ಪಡೆದುಕೊಂಡಿದ್ದಾರೆ.
ಟೇಪ್ ರೆಕಾರ್ಡರ್ ಹಾಗೂ ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು, ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಮೈಸೂರು ವಿವಿಯಿಂದ ಎರಡು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದಿರುವ ಮನು ಕುಮಾರ್ ಬ್ರೈಲ್ ಲಿಪಿಯನ್ನು ಬಳಸಿಲ್ಲ.
ಮನು ಕುಮಾರ್ ತಂದೆ ನಾಗಪ್ಪ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಕೆಲಸದ ಒತ್ತಡದಿಂದಾಗಿ ಮಗನನ್ನು 7ನೇ ತರಗತಿ ಓದುತ್ತಿದ್ದಾಗಲೇ ಶಾಲೆ ಬಿಡಿಸಲು ತೀರ್ಮಾನಿಸಿದ್ದೆ. ಆದರೆ ಓದಲೇಬೇಕೆಂದು ಹಠ ಹಿಡಿದು ಇಂದು ಈ ಸಾಧನೆ ಮಾಡಿದ್ದಾನೆ, ತುಂಬಾ ಖುಷಿಯಾಗುತ್ತಿದೆ ಎಂದು ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎನ್ನುವ ಮನು ಕುಮಾರ್, ಡಾಕ್ಟರೇಟ್ ಮಾಡುವ ತಮ್ಮ ಹಲವು ವರ್ಷಗಳ ಗುರಿ ಈಗ ಈಡೇರಿದ್ದು, ಸರ್ಕಾರ ವಿಶೇಷ ಚೇತನರಿಗೆ ವಿಶೇಷ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಆಶಿಸಿದ್ದಾರೆ.
Recommended Video
ಸರ್ಕಾರ ಮಾಡಬೇಕಾದ ಕೆಲಸಗಳ ಬಗ್ಗೆ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲೂ ವಿಸ್ತೃತ ಉಲ್ಲೇಖ ಮಾಡಿದ್ದಾರೆ. ವಿಶೇಷ ಚೇತನರಿಗೆ ಅನುಕಂಪ ಬೇಕಾಗಿಲ್ಲ ಅವಕಾಶ ಕೊಡಿ ಅನ್ನುವುದು ಅವರ ಕಳಕಳಿ.