ಬಿಳಿಗಿರಿರಂಗನಬೆಟ್ಟದ ಹುಲಿಗಳ ಅಡ್ಡಾದಲ್ಲಿ ಕರಿಚಿರತೆಯ ಓಡಾಟ!
ಚಾಮರಾಜನಗರ, ಮೇ 22; ಹುಲಿಗಳು ಸೇರಿದಂತೆ ವನ್ಯಪ್ರಾಣಿಗಳ ಆವಾಸತಾಣವಾಗಿ ಜಿಲ್ಲೆಯಲ್ಲಿ ಬಂಡೀಪುರ ಹೆಸರುವಾಸಿಯಾಗಿದ್ದು, ಇಲ್ಲಿಗೆ ಆಗಾಗ್ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ಬಂಡೀಪುರದಂತೆಯೇ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಅಪರೂಪದ ಪ್ರಾಣಿಗಳು ಕಾಣಿಸಿ ಕೊಳ್ಳುವುದರೊಂದಿಗೆ ಪ್ರವಾಸಿಗರ ಗಮನಸೆಳೆಯುತ್ತಿದೆ.
ಬಿಳಿಗಿರಿರಂಗನಬೆಟ್ಟದಲ್ಲಿ ಸಾಮಾನ್ಯವಾಗಿ ಕಾಡಾನೆಗಳು ಮಾತ್ರ ಕಂಡುಬರುತ್ತಿದ್ದವು. ಆದರೆ ಇತ್ತೀಚೆಗಿನ ದಿನಗಳಲ್ಲಿ ಹುಲಿ, ಕರಡಿ ಮತ್ತು ಕರಿಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಎಲ್ಲರ ಚಿತ್ತ ಅತ್ತ ನೆಟ್ಟಿದೆ. ಈ ಅರಣ್ಯದಲ್ಲಿ ಹಲವು ಪ್ರಾಣಿ ಪಕ್ಷಿಗಳು, ಹಾವು ಸೇರಿದಂತೆ ಹಲವು ಜೀವ ಸಂಕುಲಗಳಿದ್ದರೂ ಇವು ಯಾರ ಕಣ್ಣಿಗೆ ಬೀಳದೆ ಆರಾಮಾಗಿ ವಿಹರಿಸಿಕೊಂಡಿವೆ. ಆಗೊಮ್ಮೆ ಈಗೊಮ್ಮೆ ಜನರ ಕಣ್ಣಿಗೆ ಬಿದ್ದು ಸುದ್ದಿಯಾಗುವುದು ಮಾಮೂಲಾಗಿದೆ.
ಚಾಮರಾಜನಗರ; ವರುಣನ ಕೃಪೆಗೆ ಹಸಿರಾದ ಬಂಡೀಪುರ!
ಸ್ಥಳೀಯರು ಇಲ್ಲಿರುವ ಪ್ರಾಣಿಗಳನ್ನು ಆಗಾಗ್ಗೆ ನೋಡುತ್ತಿದ್ದು ಅವರಿಗೆ ಯಾವ ಅಚ್ಚರಿಯೂ ಇಲ್ಲದಾಗಿದೆ. ಆದರೆ ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳನ್ನು ತಮ್ಮ ಕ್ಯಾಮರಾದ ಮೂಲಕ ಸೆರೆಹಿಡಿಯುವ ಪ್ರವಾಸಿಗರು ಸಾಮಾಜಿಕ ಜಾಲ ತಾಣಗಳ ಮೂಲಕ ಹರಿಯ ಬಿಟ್ಟಾಗ ಅದು ಸುದ್ದಿಯಾಗುತ್ತಿದೆ.
ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ
ಕಾಣಿಸಿದ ಕಪ್ಪು ಚಿರತೆ; ಇದೀಗ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ (ಬಿಆರ್ಟಿ) ಬೈಲೂರು ವಲಯದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿರುವುದು ಎಲ್ಲರ ಚಿತ್ತ ಅತ್ತ ನೆಡುವಂತೆ ಮಾಡಿದೆ. ಹೊಳೆಮತ್ತಿ ನೇಚರ್ ಫೌಂಡೇಶನ್ ಡಾ. ಸಂಜಯ್ ಗುಬ್ಬಿ ಮತ್ತು ತಂಡದವರು ಬಿಳಿಗಿರಿರಂಗನಬೆಟ್ಟದಲ್ಲಿ ಚಿರತೆಗಳಿಗೆ ಸಂಬಂಧಿತ ಅಧ್ಯಯನಕ್ಕಾಗಿ ನಡೆಸಿದ್ದ ಕ್ಯಾಮರಾ ಟ್ರ್ಯಾಪ್ನಲ್ಲಿ ಕರಿಚಿರತೆ ಚಲನವಲನ ಸೆರೆಯಾಗಿದೆ. ಯಾರ ಕಣ್ಣಿಗೂ ಬೀಳದ ಕರಿಚಿರತೆ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದೆ ದರ್ಶನ ನೀಡಿದೆ.
ಅಂಬಾನಿ ಮಾಲೀಕತ್ವದ ವಿಶ್ವದ ಅತಿದೊಡ್ಡ ಮೃಗಾಲಯಕ್ಕೆ
ಈ ಹಿಂದೆ ಡಿಸೆಂಬರ್ 2020 ಆಗಸ್ಟ್ನಲ್ಲಿ ಬಿಆರ್ಟಿಯ ಬೈಲೂರು ವಲಯದಲ್ಲಿ ಕಪ್ಪು ಚಿರತೆ ಕ್ಯಾಮೆರಾ ಟ್ರ್ಯಾಪ್ನಲ್ಲಿ ಸೆರೆಯಾಗಿತ್ತು. ಅದೇ ವರ್ಷದ ಡಿಸೆಂಬರ್ನಲ್ಲಿ ಮಲೆ ಮಹದೇಶ್ವರ ವನ್ಯಧಾಮದ ಪಿ. ಜಿ. ಪಾಳ್ಯ ವಲಯದಲ್ಲೂ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಸೆರೆ ಸಿಕ್ಕಿತು. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಇದು ಗಂಡು ಕರಿ ಚಿರತೆಯಾಗಿದ್ದು ಸುಮಾರು ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಈ ಕರಿಚಿರತೆ ಬಗ್ಗೆ ಹೇಳುವುದಾದರೆ ಇದು ತನ್ನ ಅಡ್ಡವನ್ನು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವಿನ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಅನ್ನು ತನ್ನ ಅಡ್ಡ ಮಾಡಿಕೊಂಡಿದ್ದು, ಈ ಎರಡೂ ವನ್ಯಧಾಮಗಳಲ್ಲಿಯೂ ಇದರ ಚಲನವಲನ ದಾಖಲಾಗಿರುವುದು ಕಂಡು ಬಂದಿದೆ. ಹೀಗಾಗಿ ಈ ಕಾರಿಡಾರ್ನ ಸಂರಕ್ಷಿಸುವ ಅಗತ್ಯವಿದೆ ಎನ್ನುವುದು ಪ್ರಾಣಿಪ್ರಿಯರ ಅಭಿಪ್ರಾಯವಾಗಿದೆ.
ವಾಹನಗಳಿಂದ ಪ್ರಾಣಿಗಳಿಗೆ ಸಂಕಷ್ಟ; ಇನ್ನೊಂದೆಡೆ ಈ ಕಿರಿದಾದ ಕಾರಿಡಾರ್ ಮೂಲಕ ಕೊಳ್ಳೇಗಾಲ - ಹಾಸನೂರು ರಸ್ತೆ ( ರಾಜ್ಯ ಹೆದ್ದಾರಿ -38 ) ಹಾದು ಹೋಗಿದ್ದು, ಈ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿದ್ದು ಇದರಿಂದ ವನ್ಯಜೀವಿಗಳಿಗೆ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಆತಂಕವನ್ನು ಪರಿಸರ ಪ್ರಿಯರು ಹೊರಹಾಕುತ್ತಿದ್ದಾರೆ. ಈ ಹಿಂದೆ ಬಿಳಿಗಿರಿರಂಗನಬೆಟ್ಟದಲ್ಲಿ ಕರಡಿಗಳು ಕಾಣಿಸಿದ್ದವು. ಅವು ನಿರ್ಭಯವಾಗಿ ಓಡಾಡುತ್ತಿರುವ ದೃಶ್ಯಗಳನ್ನು ಪ್ರವಾಸಿಗರು ಸೆರೆಹಿಡಿದಿದ್ದರು. ಇದಕ್ಕೂ ಮೊದಲು ತಾಯಿ ಹುಲಿಯೊಂದು ತನ್ನ ಮರಿಗಳೊಂದಿಗೆ ವಿಹರಿಸುತ್ತಿರುವ ದೃಶ್ಯಗಳು ಕಾಣಿಸಿದ್ದವು.
ಏಷ್ಯಾದ ಆನೆಗಳ ವಾಸಕ್ಕೆ ಯೋಗ್ಯತಾಣ; ಹಾಗೆ ನೋಡಿದರೆ ಬಿಳಿಗಿರಿರಂಗನಬೆಟ್ಟ ಪ್ರದೇಶವು ಹುಲಿಸಂರಕ್ಷಿತ ಪ್ರದೇಶವಾಗಿದ್ದು, ಸುಂದರ ನಿಸರ್ಗ ಸಿರಿಯನ್ನು ಹೊಂದಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15 ಕಿ. ಮೀ. ದೂರದಲ್ಲಿದ್ದು ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರದಲ್ಲಿದ್ದು, ಸುಮಾರು 750 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ.
ಇಲ್ಲಿನ ಮುಖ್ಯ ವಿಶೇಷತೆ ಏನೆಂದರೆ ಬಿಳಿಪಟ್ಟೆಗಳ ಹುಲಿಗಳ ಹಾಗೂ ಏಷ್ಯಾದ ಆನೆಗಳ ವಾಸಕ್ಕೆ ಇದು ಯೋಗ್ಯ ತಾಣವಾಗಿದೆ. ಅರಣ್ಯದಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ, ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಆಕರ್ಷಣೆಯಾಗಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು ಹೀಗೆ ಸುಮಾರು 420ಕ್ಕೂ ಅಧಿಕ ಜೀವ ಸಂಕುಲಗಳು ಇಲ್ಲಿವೆ ಎಂದು ಹೇಳಲಾಗುತ್ತಿದೆ.
ಇಷ್ಟೊಂದು ಜೀವ ಸಂಕುಲಗಳಿದ್ದರೂ ಎಲ್ಲೆಂದರಲ್ಲಿ ದರ್ಶನ ನೀಡದೆ ಅರಣ್ಯದೊಳಗೆ ವಾಸ್ತವ್ಯ ಹೂಡಿದ್ದು, ಕೆಲವು ಪ್ರಾಣಿಗಳು ಆಗೊಮ್ಮೆ ಈಗೊಮ್ಮೆ ಎಂಬಂತೆ ಅಪರೂಪಕ್ಕೆ ದರ್ಶನ ನೀಡಿ ಸುದ್ದಿಯಾಗುವುದು ಇಲ್ಲಿನ ವಿಶೇಷತೆಯಾಗಿದೆ.
Recommended Video