ಪರಿಷತ್ ಫಲಿತಾಂಶ ಮುಂದಿನ ಚುನಾವಣೆ ದಿಕ್ಸೂಚಿಯಲ್ಲ: ಕಟೀಲ್
ಚಾಮರಾಜನಗರ, ಜೂನ್ 16; "ಪ್ರಸ್ತುತ ನಡೆದ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಯಾವುದೇ ಚುನಾವಣೆಗೆ ದಿಕ್ಸೂಚಿಯಲ್ಲ" ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಗುರುವಾರ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು 4 ರಲ್ಲಿ ಎರಡು ಸ್ಥಾನದಲ್ಲಿ ಗೆದ್ದಿದ್ದೇವೆ. ಹಿಂದೆಯೂ ಎರಡು ಸ್ಥಾನ ಇತ್ತು, ಅದನ್ನು ಈಗಲೂ ಉಳಿಸಿಕೊಂಡಿದ್ದೇವೆ" ಎಂದರು.
ವಿಧಾನ ಪರಿಷತ್ ಚುನಾವಣೆ; ಠೇವಣಿ ಕಳೆದುಕೊಂಡ ವಾಟಾಳ್!
"ವಿಧಾನ ಪರಿಷತ್ ಚುನಾವಣೆಗಳು ಎಂದಿಗೂ ಯಾವುದೇ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ನಮ್ಮ ಮತಗಳು ನಮಗೆ ಬಂದಿದೆ. ಹಿಂದೆ ನಾವು ಪಡೆದಿದ್ದಕ್ಕಿಂತ ಈ ಬಾರಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಜೊತೆಗೆ ಜೆಡಿಎಸ್ ಮತಗಳು ನಮ್ಮ ಕಡೆ ಬಂದಿದೆ" ಎಂದು ಎಂಎಲ್ಸಿ ಚುನಾವಣೆ ಫಲಿತಾಂಶವನ್ನು ಕಟೀಲ್ ವಿವರಿಸಿದರು.
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿ, "ದೇಶ ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ, ವಿರೋಧ ಪಕ್ಷ ಆಗುವುದಕ್ಕೂ ಅದು ನಾಲಾಯಕ್ಕಾಗಿದೆ. ಕಾಂಗ್ರೆಸ್ ಅನ್ನು ಇಡೀ ದೇಶದಲ್ಲಿ ಜನ ತಿರಸ್ಕರಿಸುತ್ತಿದ್ದಾರೆ, ಅವರದೇ ಪಕ್ಷ ಅಧಿಕಾರದಲ್ಲಿದ್ದ ಪಂಜಾಬ್ನಲ್ಲಿ ಇವತ್ತು ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ" ಎಂದು ಟೀಕಿಸಿದರು.
ವಾಯುವ್ಯ ಪದವೀಧರ ಕ್ಷೇತ್ರ: ಸತತ 2ನೇ ಬಾರಿ ಜಯ ಸಾಧಿಸಿದ ಹಣಮಂತ ನಿರಾಣಿ
ಮೋದಿ -ಶಾ ವಿರುದ್ಧವೂ ಇಡಿ ವಿಚಾರಣೆ ನಡೆದಿತ್ತು
"ಕಾಂಗ್ರೆಸ್ಗೆ ಸಂವಿಧಾನ ಹಾಗೂ ಕಾನೂನಿನ ಬಗ್ಗೆ ನಂಬಿಕೆ ಇಲ್ಲ. ಇಡಿ ಕಾನೂನಿನ ಆಧಾರದ ಮೇಲೆ ವಿಚಾರಣೆ ಮಾಡುತ್ತಿದೆ. ಹಿಂದೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಇಡಿ ತನಿಖೆ ನಡೆದಿದೆ. ಅಂದು ಪಕ್ಷದಿಂದ ಯಾರೂ ಹೋರಾಟ ಮಾಡಿರಲಿಲ್ಲ. ಈಗ ಕಾಂಗ್ರೆಸ್ಗೆ ಯಾವುದರ ಮೇಲೂ ನಂಬಿಕೆ ಇಲ್ಲ, ಪ್ರತಿದಿನ ರಾಜಭವನ ಚಲೋ ಚಳುವಳಿ ಬೇರೆ ಬೇರೆ ಕಾರಣಗಳಿಂದ ಮಾಡುತ್ತಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ವಿರೋಧ ಪಕ್ಷಕ್ಕೂ ನಾಲಾಯಕ್
"ದೇಶ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ವಿರೋಧ ಪಕ್ಷ ಆಗುವುದಕ್ಕೂ ಕಾಂಗ್ರೆಸ್ ನಾಲಾಯಕ್ ಆಗಿದೆ. ದೇಶದ ಜನರು ಪಕ್ಷವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈಗ ಪ್ರತಿಭಟಿಸುವ ಮುನ್ನ ಸಿದ್ದರಾಮಣ್ಣ ಹಿಂದೆ ತುರ್ತು ಪರಿಸ್ಥಿತಿ ಹೇರಿದ್ದು ಅವರದೇ ಪಾರ್ಟಿ, ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡಿದ್ದು ಅವರದೇ ಪಾರ್ಟಿ ಎನ್ನುವುದನ್ನು ಆಲೋಚನೆ ಮಾಡಬೇಕಿತ್ತು. ಇವತ್ತು ಇಡಿ ತನಿಖೆ ವಿರುದ್ಧ ಹೋರಾಟ ಮಾಡುತ್ತಿರುವುದು ಸಿದ್ದರಾಮಯ್ಯನವರ ನಡವಳಿಕೆ ಎಂಥಹದ್ದು ಎನ್ನುವುದನ್ನು ತೋರುತ್ತದೆ. ಕಾಂಗ್ರೆಸ್ ವಿರುದ್ಧ ಈಗಾಗಲೇ ಜನ ದಂಗೆ ಎದ್ದಿದ್ದಾರೆ, ಸಿದ್ದರಾಮಯ್ಯನ ಪಾಠ ಕೇಳುವವರು ಯಾರು ಇಲ್ಲ" ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಾಯಕತ್ವ ಬದಲಾವಣೆಯಲ್ಲಿ
ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, "ರಾಜ್ಯ ಬಿಜೆಪಿ ಸರಕಾರದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಮುಂದಿನ ಚುನಾವಣೆಯನ್ನು ಸಹ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ" ಎಂದರು.
ತಲಾ 2 ಕ್ಷೇತ್ರ ಹಂಚಿಕೊಂಡ ಕೈ-ಕಮಲ
ಜೂನ್ 13ರಂದು ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮತ್ತೆರಡು ಕ್ಷೇತ್ರಗಳಲ್ಲಿ ವಿಪಕ್ಷ ಕಾಂಗ್ರೆಸ್ ಜಯ ಸಾಧಿಸಿದೆ. ಜೆಡಿಎಸ್ ತನ್ನ 2 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಪಶ್ಚಿಮ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ ಮತ್ತು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕೆ. ಟಿ. ಶ್ರೀಕಂಠೇಗೌಡ ಜೆಡಿಎಸ್ನಿಂದ ಆಯ್ಕೆಯಾಗಿದ್ದರು. ಈ ಬಾರಿ ಹೊರಟ್ಟಿ ಬಿಜೆಪಿಯಲ್ಲಿ ಗೆದ್ದರೆ, ಮಧು ಮಾದೇಗೌಡ ಕಾಂಗ್ರೆಸ್ನಲ್ಲಿ ಜಯ ಸಾಧಿಸಿದ್ದಾರೆ. ಬಿಜೆಪಿ ವಾಯುವ್ಯ ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಿದೆ. ಕಳೆದ 2 ಬಾರಿ ಇಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಮತ್ತೊಮ್ಮೆ ಹಣಮಂತ ನಿರಾಣಿ ಜಯ ಸಾಧಿಸಿದ್ದಾರೆ.