ಚಾಮರಾಜನಗರದಲ್ಲಿ ಬಿಜೆಪಿಯ ಕೆ.ಶಿವರಾಂಗೆ ಬಿಎಸ್ಪಿ ಕಾದಿದೆಯಾ?
ಚಾಮರಾಜನಗರ, ಮಾರ್ಚ್ 20:ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವರೂ ಆಗಿರುವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಸ್ವಲ್ಪ ಮಟ್ಟಿಗೆ ಆತಂಕಗೊಂಡಂತೆ ಕಂಡು ಬರುತ್ತಿದ್ದರೆ, ಇನ್ನೊಂದೆಡೆ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನದ ಲಾಭವನ್ನು ಪಡೆಯಲು ಬಿಎಸ್ಪಿ ಹವಣಿಸುತ್ತಿದೆ.
ಹಾಗೆ ನೋಡಿದರೆ ಧ್ರುವನಾರಾಯಣ್ ಗೆ ಚಾಮರಾಜನಗರದಲ್ಲಿ ಪ್ರತಿಸ್ಪರ್ಧೆ ಮಾಡುವಂತಹ ಪ್ರಬಲ ನಾಯಕರು ಇಲ್ಲ ಎಂಬಂತೆ ಕಂಡು ಬರುತ್ತಿತ್ತು. ಹೀಗಾಗಿ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಖಂಡರಿದ್ದರು.
ನನಗೆ ಟಿಕೆಟ್ ಸಿಗಬಹುದೆಂಬ ಭರವಸೆಯಿದೆ:ಕೆ.ಶಿವರಾಂ
ಆದರೆ ಯಾವಾಗ ವಿ.ಶ್ರೀನಿವಾಸ ಪ್ರಸಾದ್ ಅವರ ಹೆಸರು ಕೇಳಿ ಬಂತೋ ಕಾಂಗ್ರೆಸ್ ಮುಖಂಡರು ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಚಲಿತಗೊಂಡಿದ್ದಂತು ಸತ್ಯ. ಹೀಗಾಗಿಯೇ ಅವರು ಆತುರವಾಗಿ ಚಾಮರಾಜನಗರದಲ್ಲಿ ಸಮಾವೇಶ ಮಾಡಿ ಬಿಜೆಪಿಯನ್ನು ಒಂದಷ್ಟು ಹಿಗ್ಗಾಮುಗ್ಗಾ ಜಾಡಿಸಿ ತೆರಳಿದ್ದಾರೆ.
ಇದೀಗ ವಿ.ಶ್ರೀನಿವಾಸಪ್ರಸಾದ್ ಅವರು ಸ್ಪರ್ಧಿಸುವ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿಯಲ್ಲಿ ಸಣ್ಣದಾದ ಅಸಮಾಧಾನವೊಂದು ಸದ್ದಿಲ್ಲದೆ ಮೇಲೆದ್ದಿದೆ. ಹೌದು, ವರ್ಷದ ಹಿಂದೆಯೇ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರಿಗೆ ನಿರಾಸೆಯಾಗಿದೆ. ಯಾಕೆಂದು ಮುಂದೆ ಓದಿ...
ವಿ.ಶ್ರೀನಿವಾಸಪ್ರಸಾದ್ ನೆನಪು ಬಂದಿರಲಿಲ್ಲ
ಕೆ.ಶಿವರಾಂ ಅವರು ಕಳೆದ ಕೆಲವು ಸಮಯಗಳಿಂದ ಆಗಾಗ್ಗೆ ಚಾಮರಾಜನಗರಕ್ಕೆ ಭೇಟಿ ನೀಡಿ ಬಿಜೆಪಿ ಮುಖಂಡರ ವಿಶ್ವಾಸ ಪಡೆದು, ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರೊಂದಿಗೆ ಬೆರೆತು ಹೋಗಿದ್ದರು. ಹಲವು ಸಂದರ್ಭಗಳಲ್ಲಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ್ ಅವರಿಗೆ ಪ್ರಬಲವಾಗಿ ಪೈಪೋಟಿ ನೀಡುವ ನಾಯಕರು ಸ್ಥಳೀಯವಾಗಿ ಇಲ್ಲದ ಕಾರಣ ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಶಕ್ತಿ ಪ್ರದರ್ಶನ ಮಾಡುವ ನಿರೀಕ್ಷೆಯಲ್ಲಿದ್ದರು. ಬಹಳಷ್ಟು ಜನಕ್ಕೆ ಆ ವೇಳೆ ವಿ.ಶ್ರೀನಿವಾಸಪ್ರಸಾದ್ ಅವರ ನೆನಪು ಬಂದಿರಲಿಲ್ಲ. ಇದಕ್ಕೆ ಕಾರಣವೂ ಇತ್ತು. ಈ ಹಿಂದೆ ಕೆಲ ವರ್ಷಗಳ ಕೆಳಗೆ ತಾವು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ಹೀಗಾಗಿ ಚುನಾವಣೆಯಿಂದ ಸ್ವಲ್ಪ ದೂರವೇ ಉಳಿದಿದ್ದರು.
ಸಂಶೋಧಕ ಶಿವಕುಮಾರ್ ಆಯ್ಕೆ
ಶ್ರೀನಿವಾಸಪ್ರಸಾದ್ ಅವರ ಅಭಿಮಾನಿಗಳು ಚುನಾಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದರ ಪರಿಣಾಮ ಅವರು ಈಗ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಹೈವೊಲ್ಟೇಜ್ ಬಂದಂತಾಗಿದೆ. ತಾವು ಕಣ್ಣಿಟ್ಟಿದ್ದ ಕ್ಷೇತ್ರ ದಕ್ಕದೆ ಹೋದುದಕ್ಕೆ ಮುನಿಸಿಕೊಂಡು ಒಂದು ವೇಳೆ ಕೆ.ಶಿವರಾಂ ಅವರು ಬಿಜೆಪಿಯಿಂದ ಹೊರಬಂದಿದ್ದೇ ಆದರೆ ಅವರಿಗೆ ಬಿಎಸ್ಪಿಯಿಂದ ಟಿಕೆಟ್ ನೀಡಲು ಬಿಎಸ್ಪಿ ಮುಖಂಡರು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಆದರೂ ಸದ್ಯದ ಮಟ್ಟಿಗೆ ಚಾಮರಾಜನಗರ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸಂಶೋಧಕ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ಕೆ.ಶಿವರಾಂ ಅವರು ಬಿಜೆಪಿ ಬಿಟ್ಟು ಬಾರದೆ ಹೋದರೆ ಶಿವಕುಮಾರ್ ಅವರೇ ಅಭ್ಯರ್ಥಿಯಾಗಿ ಉಳಿದುಕೊಳ್ಳಲಿದ್ದಾರೆ.
ದಿನೇ ದಿನೇ ಕುತೂಹಲ ಕೆರಳಿಸಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ..!
ನಿರಾಸಕ್ತಿ ತೋರಿದ ಕೆ. ಶಿವರಾಂ
ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ರತ್ನಪ್ರಭಾ ಅವರನ್ನು ಚಾಮರಾಜನಗರಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕೆ.ಶಿವರಾಂ ಅವರನ್ನು ಸೆಳೆಯಲು ಬಿಎಸ್ಪಿ ಮುಂದಾಗಿದ್ದು, ಈ ಸಂಬಂಧ ಮಾತುಕತೆ ನಡೆಸುತ್ತಿದ್ದು ಮೂಲಗಳ ಪ್ರಕಾರ ಕೆ. ಶಿವರಾಂ ಪಕ್ಷಕ್ಕೆ ಬರುವ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಹೀಗಾಗಿ ಸಂಶೋಧಕ ಡಾ. ಶಿವಕುಮಾರ್ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಬದಲಾವಣೆಗಳಾದರೆ ಅಚ್ಚರಿಪಡಬೇಕಿಲ್ಲ
ಸಂಶೋಧಕ ಶಿವಕುಮಾರ್ ಅವರು ಬಹುಜನ ಚಳವಳಿ ಹಾಗೂ ಅಂಬೇಡ್ಕರ್ ಸಿದ್ಧಾಂತ ಕುರಿತ ವಾಗ್ಮಿಯಾಗಿದ್ದು, ಹೈದರಾಬಾದ್ ಮತ್ತು ದೆಹಲಿಯಲ್ಲಿ ಯುಪಿಎಸ್ ಸಿ ಪರಿಕ್ಷಾರ್ಥಿಗಳಿಗೆ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಾ.26ರವರೆಗೆ ಕಾಲಾವಕಾಶವಿರುವುದರಿಂದ ಬದಲಾಣೆಗಳು ಆದರೆ ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ.