ಚಾಮರಾಜನಗರದಲ್ಲಿ ಮುಜುಗರಕ್ಕೀಡಾದ ಸಚಿವ ಪುಟ್ಟರಂಗಶೆಟ್ಟಿ
ಚಾಮರಾಜನಗರ, ಜನವರಿ 27: ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ 70ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತಾದರೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಧ್ವಜಾರೋಹಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮುಜುಗರ ಅನುಭವಿಸುವಂತಾಯಿತು.
ಧ್ವಜಾರೋಹಣದ ವೇಳೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿರವರು ಧ್ವಜಾರೋಹಣ ಮಾಡಬಾರದು, ಭ್ರಷ್ಠಾಚಾರ ಆರೋಪ ಹೊತ್ತಿರುವ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರಲ್ಲದೆ, ಸಚಿವರ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.
70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ
ವಿಧಾನಸೌಧದಲ್ಲಿ ಸಚಿವರ ಆಪ್ತ ಮೋಹನ್ ಗುತ್ತಿಗೆದಾರರಿಂದ ವಸೂಲಿ ಮಾಡಿದ್ದ 25.76 ಲಕ್ಷರೂಪಾಯಿಗಳನ್ನು ಸಚಿವರಿಗೆ ತಲುಪಿಸಲು ಹೋಗುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಸಚಿವರ ಮೇಲೆ ಭ್ರಷ್ಟಚಾರದ ಆರೋಪವಿದ್ದು ಅಂತಹವರು ರಾಷ್ಟ್ರ ಧ್ವಜಾರೋಹಣ ಮಾಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯ ವಿಷಯ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಕಾರ್ಯಾಲಯದಲ್ಲಿದ್ದ ನಗರಸಭಾ ಸದಸ್ಯ ಸುದರ್ಶನಗೌಡ ಸೇರಿದಂತೆ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಪೊಲೀಸರು ಕಾರ್ಯಕ್ರಮ ನಡೆಯುವ ಮೈದಾನದಲ್ಲಿರುವಾಗಲೇ ಪೊಲೀಸರ ಕಣ್ತಪ್ಪಿಸಿ ಕೆಲವು ಬಿಜೆಪಿ ಕಾರ್ಯಕರ್ತರು ಸಚಿವರ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದ್ದು ಕಂಡು ಬಂದಿತು. ಬಳಿಕ ಕಾರ್ಯಕ್ರಮ ಮುಗಿಸಿದ ಸಚಿವರು ತಮ್ಮ ಪಾಡಿಗೆ ತಾವು ತೆರಳಿದ್ದು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಸಲ್ಲದು: ಯು ಟಿ ಖಾದರ್
ಒಟ್ಟಾರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಮ್ಮಸ್ಸಿನಿಂದಲೇ ಬಂದ ಸಚಿವರಿಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಮುಜುಗರ ತಂದಿದ್ದಂತು ಸತ್ಯ.