ಗಿಡಗಳ ಹುಟ್ಟುಹಬ್ಬ: ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ವಿನೂತನ ಆಚರಣೆ
ಚಾಮರಾಜನಗರ, ಜುಲೈ 31: ಬೆಳೆಯುವ ಪೈರು ಮೊಳಕೆಯಲ್ಲೇ ಎಂಬ ಗಾದೆಯಿದೆ. ಅದರಂತೆ ಶಾಲೆಗಳಲ್ಲಿ ಕೇವಲ ಪಾಠ ಮಾತ್ರವಲ್ಲದೆ ಅದರ ಜತೆಗೆ ಪರಿಸರದ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಆ ಕೆಲಸವನ್ನು ಪಟ್ಟಣ ವ್ಯಾಪ್ತಿಯ 24ನೇ ವಾರ್ಡ್ ನ ಚೆನ್ನಿಪುರದಮೋಳೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಾಡುತ್ತಿದ್ದಾರೆ.
ಇಷ್ಟಕ್ಕೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದೊಂದಿಗೆ ಪರಿಸರದ ಪಾಠವನ್ನು ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಶಾಲೆಯ ಸುತ್ತ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿರುವುದಲ್ಲದೆ ಗಿಡಗಳಿಗೆ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸುತ್ತಿರುವುದು ಗಮನಾರ್ಹವಾಗಿದೆ.
ಉಡುಪಿ: ಕೃಷಿ ಉಳಿವಿಗೆ ಪಣತೊಟ್ಟ ಉದ್ಯಮಿ ವಿಶ್ವನಾಥ ಶೆಟ್ಟಿ
ಹಾಗೆನೋಡಿದರೆ ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳು ಸೆಡ್ಡು ಹೊಡೆಯುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಮುಖಮಾಡುವವರು ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಶಿಕ್ಷಕರು ಸ್ವಂತ ಜವಬ್ದಾರಿಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರ ಮನವೊಲಿಸಿ ಕರೆಯಿಸಿಕೊಂಡಿದ್ದಲ್ಲದೆ, ಸಾರೋಟ್ ನಲ್ಲಿ ಕರೆತಂದು ಭವ್ಯ ಸ್ವಾಗತ ನೀಡಿರುವುದು ಎಲ್ಲರ ನೆನಪಿನಲ್ಲಿ ಇನ್ನೂ ಹಸಿರಾಗಿದೆ.
ಇವತ್ತು ಗ್ರಾಮೀಣ ಪ್ರದೇಶದ ಹಲವು ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತೋ ನಾಳೆಯೋ ಬೀಳುವಂತಹ ಕಟ್ಟಡಗಳು, ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗೆ ಪಾಠಮಾಡಬೇಕಾದ ದುಸ್ಥಿತಿ, ಶೌಚಾಲಯಗಳ ಕೊರತೆ, ಶಿಕ್ಷಕರ ಕೊರತೆ ಹೀಗೆ ಹತ್ತಾರು ಸಮಸ್ಯೆಗಳಿದ್ದರೂ ಇದೆಲ್ಲದರ ನಡುವೆಯೂ ಖಾಸಗಿ ಶಾಲೆಗಳಿಗಿಂತ ತಾವೇನು ಕಡಿಮೆ ಇಲ್ಲ ಎಂಬಂತೆ ಶಿಕ್ಷಣ ಕಲಿಸುವತ್ತ ಚೆನ್ನಿಪುರದಮೋಳೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮುಂದಾಗಿದ್ದಾರೆ.
ಅಕ್ಷಯ ಪಾತ್ರೆ ಹುಡುಕಿದ ಶಿರಸಿ ಜೀವಜಲ ಕಾರ್ಯಪಡೆ ಯಶೋಗಾಥೆ
ಇದೆಲ್ಲದರ ನಡುವೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ನೆಟ್ಟುಬೆಳೆಸಿದ ಮರ ಗಿಡಗಳ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಎಸ್ ಡಿಎಂಸಿ ಅವರ ಸಹಕಾರದಿಂದ ಶಾಲೆಯಲ್ಲಿ 8ನೇ ಬಾರಿಗೆ ಮರಗಿಡಗಳನ್ನು ಬೆಳೆಸಿ ಹುಟ್ಟುಹಬ್ಬ ಆಚರಿಸಿರುವುದು ಇತರರಿಗೆ ಮಾದರಿಯಾಗಿದೆ.
ಆ ಮೂಲಕ ಪರಿಸರದ ಮೇಲೆ ಇರುವ ಕಾಳಜಿಯನ್ನು ಪ್ರಾಯೋಗಿಕವಾಗಿ ಕೆಲಸ ಮಾಡಿ ತೋರಿಸುವ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಎಲ್ಲರೂ ಖುಷಿಪಡುವಂತಾಗಿದೆ. ವಿದ್ಯಾರ್ಥಿಗಳು ಶಿಕ್ಷಕರು, ಎಸ್ ಡಿಎಂಸಿ ಸದಸ್ಯರು ಶಾಲೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ, ಶಾಲೆಯನ್ನು ಶುಚಿಗೊಳಿಸಿ ಗಿಡಮರಗಳಿಗೆ ದೀಪಲಂಕಾರ, ಹೂವಿನ ಅಲಂಕಾರ ಮಾಡಿ ಹುಟ್ಟು ಹಬ್ಬ ಆಚರಿಸಿದ್ದು ವಿಶೇಷವಾಗಿತ್ತಲ್ಲದೆ, ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ನೆನಪಿಸಿ ಕೊಳ್ಳಲು ಮರೆಯಲಿಲ್ಲ.