ರಾಹುಲ್ ಗಾಂಧಿ ಎದುರು ಬಿಜೆಪಿ ಹಾಗೂ ಪೊಲೀಸರಿಗೆ ವಾರ್ನಿಂಗ್ ಕೊಟ್ಟ ಸಿದ್ದರಾಮಯ್ಯ
ಚಾಮರಾಜನಗರ, ಸೆಪ್ಟೆಂಬರ್ 30: "ಕಾಂಗ್ರೆಸ್ ಫ್ಲೆಕ್ಸ್ಗಳನ್ನು ಹರಿಯುವ ರಾಜಕಾರಣ ಮಾಡಿದರೇ ಬಿಜೆಪಿ ನಾಯಕರುಗಳ್ಯಾರು ತಿರುಗಾಡದಂತೆ ಮಾಡುತ್ತೇವೆ," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪೋಸ್ಟರ್ ಹರಿದಿದ್ದರ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಇದು ಇದೇ ರೀತಿ ಮುಂದುವರೆದರೇ ಬಿಜೆಪಿಗರು ತಿರುಗಾಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಪೊಲೀಸಿನವರು ಅವರ ಜೊತೆ ಕೆಲವರು ಶಾಮೀಲಾಗಿದ್ದೀರಿ, ಇನ್ನು 6 ತಿಂಗಳು ಅಷ್ಟೇ ನಮ್ಮ ಸರಕಾರ ಬರಲಿದ್ದು ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ, ಮತ್ತೇ ನಾವೇ ಬರುತ್ತೇವೆ ಎಂದು ಪೊಲೀಸ್ನವರನ್ನು ನೋಡಿಕೊಂಡೇ ವಾರ್ನ್ ಮಾಡಿದರು.
ಕೇರಳ ಮತ್ತು ತಮಿಳುನಾಡಿನಲ್ಲಿ ಯಾತ್ರೆ ಮುಗಿಸಿ ಕರ್ನಾಟಕದಲ್ಲಿ ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ಆರಂಭವಾಗಿದ್ದು 7 ಜಿಲ್ಲೆಗಳಲ್ಲಿ 511 km ಇದು ಸಾಗಲಿದೆ, ಇಡೀ ದೇಶದಲ್ಲಿ ಸುಮಾರು 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ದೂರವನ್ನು ಪಾದಯಾತ್ರೆ ಮಾಡುತ್ತಿರುವುದು ಇದೇ ಮೊದಲು, ಮಾಡಿ ಬೇರೆ ಯಾವ ಪಕ್ಷಗಳು, ನಾಯಕರು ಕೂಡ ಮಾಡಿಲ್ಲ. ಬೇರೆ ಯಾವ ಪಕ್ಷಗಳು ಅಥವಾ ನಾಯಕರು ಈ ರೀತಿ ಮಾಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಆತಂಕದಿಂದ ಬದುಕುವ ಪರಿಸ್ಥಿತಿ
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಧರ್ಮ ರಾಜಕಾರಣ, ಕೋಮುವಾದಿ ರಾಜಕಾರಣ, ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಇಂದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಎಲ್ಲ ವರ್ಗದವರು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸದಾ ಪ್ರಜಾಪ್ರಭುತ್ವದ ಮೇಲೆ ಸಂವಿಧಾನದ ಮೇಲೆ ನಂಬಿಕೆ ಗೌರವ ಇಟ್ಟುಕೊಂಡಿಲ್ಲ. ಅವರು, ಒಬ್ಬ ನಾಯಕ, ಒಂದು ಸಿದ್ಧಾಂತ, ಒಂದು ಚಿಹ್ನೆ ಮೇಲೆ ನಂಬಿಕೆ ಇಟ್ಟುಕೊಂಡಿರುವವರು.
ಬಿಜೆಪಿಗೆ ಸಂವಿಧಾನ ಬದಲಿಸುವ ಬಯಕೆ
ಅಂಬೇಡ್ಕರ್ ಸಂವಿಧಾನ ರಚಿಸಿ ಅದನ್ನು ಜಾರಿಗೆ ತಂದ ದಿನದಿಂದಲೂ ಇದನ್ನು ಬಿಜೆಪಿಯವರು ವಿರೋಧಿಸುತ್ತಲೇ ಇದ್ದಾರೆ. ಅನೇಕ ಬಾರಿ ಮಂತ್ರಿಗಳು, ಸಂಸದರು, ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ, ಈ ಸಂವಿಧಾನ ಬೇಡ ಎಂದು ಹೇಳಿದ್ದಾರೆ. ಇದು ಬಿಜೆಪಿ ವರಿಷ್ಠರಿಗೆ ತಿಳಿದಿದೆ. ಹೀಗಾಗಿ ಬಿಜೆಪಿಗೆ ಪ್ರಜಾಪ್ರಭುತ್ವ, ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇಂತಹ ಮಾತನಾಡುತ್ತಾರೆ.
ಧರ್ಮಾಧಾರಿತ ರಾಜಕೀಯ ಹೆಚ್ಚಳ
ಹಿಂದೆ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಿಸಲು ಪ್ರಯತ್ನ ಮಾಡಿದ್ದರು. ಆಗ ರಾಷ್ಟ್ರಪತಿ ನಾರಾಯಣ್ ಅವರು ಇಲ್ಲದಿದ್ದರೆ ಬದಲಾವಣೆ ಆಗುತ್ತಿತ್ತೇನೋ. ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸಿ ರಾಜಕೀಯ ಲಾಭ ಮಾಡುವುದು ಬಿಜೆಪಿ ಉದ್ದೇಶ. ಇದು ಮೋದಿ ಪ್ರಧಾನಿ ಆದ ನಂತರ ದೇಶದಲ್ಲಿ ಹೆಚ್ಚುತ್ತಿದೆ. ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಾಗಿರಬೇಕು. ಅದಕ್ಕಾಗಿ ಇಂದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ನಾಗರಿಕ ವೇದಿಕೆಗಳು, ಬರಹಗಾರರು, ಚಿಂತಕರು, ರೈತ ಸಂಘಗಳು ಎಲ್ಲರೂ ದೇಶ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
ಕೋಮು ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ
ದೇಶದಲ್ಲಿ ಅಶಾಂತಿ ಜತೆಗೆ, ರೈತರು, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರು, ಬೆಲೆ ಏರಿಕೆ ಸಮಸ್ಯೆ ವಿರುದ್ಧ ಹೋರಾಡಲು ಈ ಪಾದಯಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರಕಾರ 40% ಸರಕಾರ ಎಂದು ಜನಜನಿತವಾಗಿದೆ. ಇಂದು ದೇಶ, ಪ್ರಜಾತಂತ್ರ, ಸಂವಿಧಾನ ಉಳಿಯಬೇಕಾದರೆ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಇದರ ನಾಯಕತ್ವವನ್ನು ರಾಹುಲ್ ಗಾಂಧಿ ಅವರು ವಹಿಸಿದ್ದು, ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆಗಳು. ಈ ಮಹತ್ವದ ಹೋರಾಟಕ್ಕೆ ಮುಂದಿನ 21 ದಿನಗಳಲ್ಲೂ ರಾಜ್ಯದ ಜನ ಬೆಂಬಲ ನೀಡಬೇಕು ಎಂದರು.