ಗುಂಡ್ಲುಪೇಟೆ; ಹೊಸ ರಾಹುಲ್-ಹೊಸ ಕಾಂಗ್ರೆಸ್ ಎಂದ ಜೈರಾಮ್ ರಮೇಶ್
ಚಾಮರಾಜನಗರ, ಸೆ.30: ಭಾರತ್ ಜೋಡೋ ಯಾತ್ರೆಯ ಪಕ್ಷಕ್ಕೆ ಸಂಜೀವಿನಿಯಾಗಿದೆ ಎಂದು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ವರಿಷ್ಠ ಜೈ ರಾಮ್ ರಮೇಶ್ ಹೇಳಿದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ, ಈ ಯಾತ್ರೆ ಮೂಲಕ ಹೊಸ ಕಾಂಗ್ರೆಸ್ ಹಾಗೂ ಹೊಸ ರಾಹುಲ್ ಉದಯಿಸಿದ್ದಾರೆ' ಎಂದು ವ್ಯಾಖ್ಯಾನಿಸಿದ್ದಾರೆ.
'ಮೋದಿ, ಒಂದು ರೀತಿಯಲ್ಲಿ ಸರ್ವಜ್ಞಾನಿ, ಸರ್ವವ್ಯಾಪಿ, ಸರ್ವಶಕ್ತಿ ಅಂದುಕೊಂಡಿದ್ದು ಆರ್ಥಿಕ ಅಸಮಾನತೆ, ಅಧಿಕಾರ ಕೇಂದ್ರೀಕರಣ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ. ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಿ ಎಲ್ಲದಕ್ಕೂ ಕೇಂದ್ರದ ಬಳಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.
'ಭಾರತ್ ಜೋಡೋ ಅಲ್ಲಾ ತೋಡೋ ಭಾರತ್ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿರುವುದು ಬಿಜೆಪಿಗರು ನಮ್ಮ ಯಾತ್ರೆಯಿಂದ ಆತಂಕಗೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ಗೆ ಇದು ಬೂಸ್ಟರ್ ಡೋಸ್ ಕೊಡುತ್ತಿದ್ದರೇ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಬಿಜೆಪಿ ಈ ರಾಜಕಾರಣವನ್ನು ಎದುರಿಸಲು ಸಜ್ಜಾಗುತ್ತಿದೆ' ಎಂದಿದ್ದಾರೆ.
'ಹೈಕಮಾಂಡ್ ಸಂಸ್ಕೃತಿ ಎಂದು ಬಿಜೆಪಿ ಟೀಕಿಸುತ್ತಿದೆ. ನಮ್ಮದು ಬಿಜೆಪಿಗಿಂತ ಹೆಚ್ಚು ಆಂತರಿಕ ಪ್ರಜಾಪ್ರಭುತ್ವ ಹೊಂದಿದೆ. ನಮ್ಮದು ಹೈಕಮಾಂಡ್ ಸಂಸ್ಕೃತಿಯಾದರೇ ಬಿಜೆಪಿ ಅವರದ್ದು ಸೂಪರ್ ಹೈಕಮಾಂಡ್ ಸಂಸ್ಕೃತಿಯಾಗಿದೆ. ಎಲ್ಲವನ್ನೂ ಜೆ.ಪಿ. ನಡ್ಡಾ ಮೇಲಿನವರನ್ನು ಕೇಳಿಕೊಂಡು ಆದೇಶಿಸುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.
ಭಾರತ್ ಜೋಡೊ ಯಾತ್ರೆ ಅತಿದೊಡ್ಡ ಯಾತ್ರೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಪರಿವರ್ತನೆ ತರಲಿದೆ, ಯಾತ್ರೆ ಮೂಲಕ ಹತ್ತಾರು ವಿಚಾರ, ಅಭಿಪ್ರಾಯ, ಸಂಸ್ಕೃತಿ ಒಂದಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, "ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ, ವಿಪಕ್ಷಗಳ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳಲಾಗುತ್ತಿದೆ'' ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿ ಆರೋಪಿಸಿದ್ದಾರೆ.