ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಸೆಲ್ಫೀ ಕಡ್ಡಾಯ?
ಗುಂಡ್ಲುಪೇಟೆ, ಫೆಬ್ರವರಿ 05: ಇಂದಿನಿಂದ ಕಲಬುರಗಿಯಲ್ಲಿ ಪ್ರಾರಂಭವಾಗಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಶಿಕ್ಷಕರಿಗೆ ಬಿಇಓ ಶಿವಮೂರ್ತಿ ಷರತ್ತು ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಕೆಲವು ಶಾಲೆಗಳಲ್ಲಿ ಶಿಕ್ಷಕರು ಸಾಹಿತ್ಯ ಸಮ್ಮೇಳನಕ್ಕೆ ತೆರಳಲೆಂದು ರಜೆ ಪಡೆಯುತ್ತಾರೆ. ಹೀಗೆ ರಜೆ ಪಡೆಯುವ ಶಿಕ್ಷಕರ ಪೈಕಿ ಕೆಲವರು ಮಾತ್ರ ಸಮ್ಮೇಳನಕ್ಕೆ ಹೋದರೆ, ಹೆಚ್ಚಿನವರು ರಜಾ ಪಡೆದು ಸಮ್ಮೇಳನಕ್ಕೆ ಹೋಗದೆ ಕಾಲ ಕಳೆಯುತ್ತಿದ್ದರು. ಈ ಬಗ್ಗೆ ಆರೋಪಗಳು ಅಲ್ಲಲ್ಲಿ ಕೇಳಿ ಬಂದಿದ್ದವು.
ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷ ಎಚ್ಎಸ್ವಿಗೆ ಅದ್ದೂರಿ ಸ್ವಾಗತ
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ರಜಾ ಪಡೆದುಕೊಂಡು ಸಮ್ಮೇಳನದಲ್ಲಿ ಭಾಗವಹಿಸದೆ ಮನೆಯಲ್ಲಿ ಉಳಿಯುವ ಶಿಕ್ಷಕರಿಗೆ ಗುಂಡ್ಲುಪೇಟೆ ಬಿಇಓ ಶಿವಮೂರ್ತಿ ಅವರು ಒಂದಿಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದೇನೆಂದರೆ, ಸಮ್ಮೇಳನದಲ್ಲಿ ಭಾಗವಹಿಸಿರುವ ಶಿಕ್ಷಕರು ಕಡ್ಡಾಯವಾಗಿ ಬಸ್ ಅಥವಾ ರೈಲ್ವೆ ಟಿಕೆಟ್ ತರಬೇಕು. ಜೊತೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿರುವ ಸೆಲ್ಫಿ ಫೋಟೊ ನೀಡಬೇಕು ಎಂದು ಮೌಖಿಕವಾಗಿ ತಿಳಿಸಿದ್ದಾರೆ.
ಶಿಕ್ಷಕರು ಐದು ದಿನಗಳು ಒಒಪಿ ಪಡೆದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತೇವೆ ಎಂದು ರಜೆ ಪಡೆದು ಕೆಲವೊಮ್ಮೆ ಮನೆಯಲ್ಲೆ ಉಳಿದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಬಿಇಓ ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.