ಬಂಡೀಪುರದ ಹೊಸ ಸಫಾರಿ ಗೇಟ್; ತಿಂಗಳು ಕಳೆದರೂ ಇಲ್ಲ ಮೂಲಸೌಲಭ್ಯ
ಚಾಮರಾಜನಗರ, ಜುಲೈ17: ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಅನುಕೂಲಕ್ಕೆಂದು ಗುಂಡ್ಲುಪೇಟೆಯ ಮೇಲುಕಾಮನಹಳ್ಳಿ ಗೇಟ್ ಬಳಿ ಅರಣ್ಯ ಇಲಾಖೆ ತಿಂಗಳ ಹಿಂದಷ್ಟೇ ಹೊಸ ಕೇಂದ್ರ ಆರಂಭಿಸಿದೆ. ಆದರೆ ಈ ಹೊಸ ಕೇಂದ್ರದಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂಬ ವಿಷಯವೇ ಹೆಚ್ಚಾಗಿದೆ. ಕಾರ್ಯಾರಂಭ ಮಾಡಿ ತಿಂಗಳು ಕಳೆದರೂ ಹಲವು ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ದೂರದ ಊರಿಂದ ಬಂಡೀಪುರಕ್ಕೆ ಸಫಾರಿಗೆಂದು ಬರುವ ಪ್ರವಾಸಿಗರಿಗೆ ಮೊದಲು ಎದುರಾಗುವುದೇ ಕ್ಯಾಂಟೀನ್ ಅಭಾವ. ಸಫಾರಿಯ ಹೊಸ ಕೌಂಟರ್ ಬಳಿ ಯಾವುದೇ ಹೋಟೆಲ್ ವ್ಯವಸ್ಥೆ ಇಲ್ಲ. ಕ್ಯಾಂಪಸ್ ನಿಂದ ಐದು ಕಿಲೋಮೀಟರ್ ಹಿಂದೆ ಹೊಸ ಸಫಾರಿ ಕೌಂಟರ್ ಆರಂಭವಾಗಿದ್ದು, ಕೌಂಟರ್ ನ ಸ್ವಾಗತ ಕಮಾನಿನ ನಿರ್ಮಾಣ ಕೂಡ ಇನ್ನೂ ಸಂಪೂರ್ಣವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಕೌಂಟರ್ ತೋರಿಸುವ ಫಲಕಗಳನ್ನು ಹಾಕಲಾಗಿದೆ. ಆದರೆ ಅದು ಪ್ರವಾಸಿಗರಿಗೆ ಗೋಚರಿಸದಿರುವುದರಿಂದ ವಾಹನ ಚಾಲಕರು ನೇರ ಬಂಡೀಪುರಕ್ಕೆ ಹೋಗಿ ಅಲ್ಲಿ ವಿಚಾರಿಸಿ ಹಿಂತಿರುಗಿ ಬರುವಂತಾಗಿದೆ.
ಬಂಡೀಪುರದಲ್ಲಿ ಸಮಸ್ಯೆಯಾಗಿ ಹಬ್ಬುತ್ತಿದೆ ಪಾರ್ಥೇನಿಯಂ
ಬಂಡೀಪುರ ಪ್ರವೇಶದ್ವಾರವೂ ಜಿ.ಎಸ್.ಬೆಟ್ಟ ವಲಯಾರಣ್ಯಾಧಿಕಾರಿ ಕಚೇರಿ ಬಳಿ ಇರುವ ಕಾರಣ ನಾನಾ ಕಡೆಗಳಿಂದ ಬರುವ ವಾಹನ ಚಾಲಕರು ಫಲಕ ಗಮನಿಸುತ್ತಿಲ್ಲ. ಮೇಲುಕಾಮನಹಳ್ಳಿ ಬಳಿ ಸಫಾರಿ ಕೌಂಟರ್ ಇದೆ ಎಂಬುದು ಗೊತ್ತಾಗುವುದಿಲ್ಲ. ಸಫಾರಿ ಕೌಂಟರ್ ಆವರಣದ ಹೊರಗೆ ಲಂಟನಾ ಇತ್ಯಾದಿ ಕಳೆಗಿಡಗಳು ಬೆಳೆದು ನಿಂತಿವೆ. ಇದು ಇಡೀ ಕ್ಯಾಂಪಸ್ ಅನ್ನು ಮರೆಮಾಚಿದೆ. ರಸ್ತೆಯಲ್ಲಿ ಉಬ್ಬುಗಳಿಲ್ಲ. ಹಾಗಾಗಿ, ವಾಹನಗಳು ವೇಗವಾಗಿ ಚಲಿಸುವುದರಿಂದ ಬದಿಯಲ್ಲಿ ಅಳವಡಿಸಿರುವ ಸ್ವಾಗತ ಕಮಾನು ಕಾಣಿಸುತ್ತಿಲ್ಲ. ಸಂರಕ್ಷಿತ ಪ್ರದೇಶಕ್ಕೆ ಪ್ರವೇಶ ನೀಡುವಾಗ ಇರುವಂತೆ ರಸ್ತೆಯ ಮಧ್ಯಭಾಗದಲ್ಲಿ ಸ್ವಾಗತ ಕಮಾನು ಅಳವಡಿಸಬೇಕು ಎಂಬುದು ಪ್ರವಾಸಿಗರ ಆಗ್ರಹ.
"ಕೌಂಟರ್ ನಲ್ಲಿ ಪ್ರಯಾಣಿಕರು ಸರದಿಗಾಗಿ ಕೂರಲು ಕಾಂಕ್ರೀಟ್ ಬೆಂಚ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಟಾಯ್ಲೆಟ್, ಸಫಾರಿ ವಾಹನಗಳು ಹೋಗಿ ಬರಲು ಗ್ರಾವೆಲ್ ಹಾಗೂ ರಸ್ತೆಯ ನಿರ್ಮಾಣ ಮಾಡಲಾಗಿದೆ. ಇದರೊಟ್ಟಿಗೆ ಆಲಂಕಾರಿಕ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವಾಗತ ಕಮಾನು ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದೇವೆ. ಈ ಜಾಗದಿಂದ ಬಸ್ ಪ್ರಯಾಣಿಕರಿಗೆ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಮಾಡಲಾಗಿದೆ" ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.
ಇನ್ನಾದರೂ ಈಕೂಡಲೇ ಪ್ರವಾಸಿಗರ ಅಗತ್ಯತೆ ಅರಿತು ಕೆಲ ಮೂಲಸೌಕರ್ಯವನ್ನು ಪೂರೈಸಬೇಕಾದ ಅವಶ್ಯಕತೆ ಇದೆ.