ಟ್ರಾಕ್ಟರ್ ಸಾಲ ಪಡೆಯದವನ ಮನೆಗೆ 10 ವರ್ಷಗಳ ನಂತರ ಬಂತು ಬ್ಯಾಂಕ್ ನೋಟಿಸ್
ಚಾಮರಾಜನಗರ, ಮಾರ್ಚ್ 12: ಟ್ರಾಕ್ಟರ್ ಖರೀದಿಗಾಗಿ ಸಾಲಕ್ಕೆ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ರೈತರೊಬ್ಬರಿಗೆ ಟ್ರಾಕ್ಟರ್ ನೀಡದೇ ಶೋರೂಂ ಮಾಲೀಕರೊಬ್ಬರು ವಂಚಿಸಿದ ಪ್ರಕರಣ ಅವರು ಮೃತರಾದ ನಂತರ ಬೆಳಕಿಗೆ ಬಂದಿದೆ.
ಸಾಲ ಕಟ್ಟದಿದ್ದ ಕಾರಣಕ್ಕೆ ಇತ್ತೀಚೆಗೆ ಬ್ಯಾಂಕಿನಿಂದ ಒಟಿಎಸ್ (ಒನ್ ಟೈಮ್ ಸೆಟಲ್ಮೆಂಟ್) ಮಾಡಿಕೊಳ್ಳುವಂತೆ ರೈತರ ಮನೆಗೆ ಬ್ಯಾಂಕ್ ಕಳಿಸಿದ ನೋಟಿಸ್ನಿಂದ ಈ ವಂಚನೆ ಪ್ರಕರಣ ಬಯಲಾಗಿದೆ.
ಚಾಮರಾಜನಗರ ತಾಲೂಕಿನ ಯರಿಯೂರು ಗ್ರಾಮದ ರೈತರಾದ ಮಲ್ಲಪ್ಪ ಟ್ರಾಕ್ಟರ್ ಖರೀದಿಸುವ ಸಂಬಂಧ ಪಟ್ಟಣದ ಊಟಿ ರಸ್ತೆಯಲ್ಲಿರುವ ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಶಾಖೆಗೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.
2010, ನ.16ರಂದು ಸಾಲ ಮಂಜೂರು ಮಾಡಿದ್ದ ಬ್ಯಾಂಕ್ ಅಧಿಕಾರಿಗಳು ಅಂದೇ ಚಾಮರಾಜನಗರದ ನಂದಿ ಟ್ರಾಕ್ಟರ್ ಶೋರೂಂ ಹೆಸರಿಗೆ 6.12 ಲಕ್ಷ ರೂ. ಡಿಡಿಯನ್ನು ಸಹ ನೀಡಿದ್ದಾರೆ. ಆದರೆ ಶೋ ರೂಂನವರು ರೈತ ಹತ್ತಾರು ಬಾರಿ ಹೋಗಿ ಕೇಳಿದಾಗಲೂ ಡಿಡಿ ಬಂದಿಲ್ಲ ಎಂದು ಟ್ರಾಕ್ಟರ್ ನೀಡಲೇ ಇಲ್ಲ. ಇದರಿಂದ ಬೇಸತ್ತ ಮಲ್ಲಪ್ಪ ಸಾಲವೇ ಬೇಡ ಎಂದು ಸುಮ್ಮನಾಗಿದ್ದಾರೆ. ನಂತರ 2012ನೇ ಇಸವಿಯಲ್ಲಿ ಮಲ್ಲಪ್ಪ ಮೃತಪಟ್ಟಿದ್ದಾರೆ.
ದೀರ್ಘ ಕಾಲದ ಕೃಷಿ ಸಾಲ ಮತ್ತು ಬಡ್ಡಿಯ ಶೇ.10 ಮೊತ್ತ ಕಟ್ಟಿಸಿಕೊಂಡು ಸಾಲವನ್ನು ಮುಕ್ತಾಯಗೊಳಿಸಲು ಈಗ ಬ್ಯಾಂಕ್ ಗಳು ಒಟಿಎಸ್ ಸೌಲಭ್ಯ ನೀಡುತ್ತಿವೆ. ಇದರ ಅಂಗವಾಗಿ ಕಳೆದ ವಾರ ಮೃತ ರೈತ ಮಲ್ಲಪ್ಪ ಅವರ ಮಗ ಮಹೇಶ್ ಅವರಿಗೆ 1.60 ಲಕ್ಷ ರೂ. ಕಟ್ಟಿದರೆ ನಿಮ್ಮ ಸಾಲವನ್ನು ಮುಕ್ತಾಯಗೊಳಿಸಲಾಗುವುದು ಎಂದು ಬ್ಯಾಂಕ್ ನೋಟಿಸ್ ಬಂದಿದೆ. ಇದನ್ನು ಕಂಡು ಮನೆಯವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ಏಕೆಂದರೆ, ರೈತ ಮಲ್ಲಪ್ಪ ಅವರು ಯಾವುದೇ ಸಾಲ ಮಾಡಿರಲಿಲ್ಲ, ಮಾಡಿದ್ದರೂ ಮನೆಯವರಿಗೆ ತಿಳಿಸುತ್ತಿದ್ದರು. ಈ ನೋಟಿಸ್ ಪಡೆದ ಮಹೇಶ್ ಅವರು, ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಅಂದಿನ ಬ್ಯಾಂಕ್ ಅಧಿಕಾರಿಗಳು ಹಾಗೂ ಶೋರೂಂನವರು ಸೇರಿ ಮಾಡಿದ್ದ ಅವ್ಯವಹಾರ ಬಯಲಾಗಿದೆ.
Recommended Video
ಬ್ಯಾಂಕ್ ಅಧಿಕಾರಿಗಳು ಹಾಗೂ ಶೋರೂಂನವರು ಸೇರಿ ರೈತರಿಗೆ ಅನ್ಯಾಯ ಎಸಗಿದ್ದಾರೆ. ಈ ಕುರಿತು ಸಂತ್ರಸ್ತ ರೈತನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಬ್ಯಾಂಕ್ ಅಧಿಕಾರಿಗಳು ಹಾಗೂ ಶೋರೂಂ ಮಾಲೀಕರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತ ಸಂಘಟನೆ ವ್ಯಾಪಕ ಹೋರಾಟ ಆರಂಭಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.