ಬಂಡೀಪುರದಲ್ಲಿ ವನ್ಯ ಪ್ರಾಣಿಗಳದ್ದೇ ಕಾರುಬಾರು:ಪ್ರಯಾಣಿಕರಿಗೆ ರಸ್ತೆ ಬದಿಯಲ್ಲೇ ದರ್ಶನ
ಚಾಮರಾಜನಗರ, ಮೇ.11:ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲೀಗ ವನ್ಯ ಪ್ರಾಣಿಗಳದ್ದೇ ಕಾರುಬಾರು. ಇತ್ತೀಚೆಗೆ ಸುರಿದ ಮಳೆಗೆ ನಿಸರ್ಗ ಹಚ್ಚ ಹಸಿರಿನಿಂದ ಕೂಡಿದ್ದು ಇಡೀ ಅರಣ್ಯಕ್ಕೆ ಜೀವ ಕಳೆ ಬಂದಿದೆ. ಅರಣ್ಯದಲ್ಲಿ ಜಿಂಕೆಗಳು ಹಿಂಡು ಹಿಂಡಾಗಿ ಓಡಾಡಿಕೊಂಡಿದ್ದರೆ, ಕಾಡೆಮ್ಮೆ, ಕೋಣ, ಕಾಡಾನೆಗಳು ಎಲ್ಲೆಂದರಲ್ಲಿ ಸಂಚರಿಸುತ್ತಿವೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಕೆ
ಇನ್ನು ಜನರ ಕಣ್ಣಿಗೆ ಬೀಳದೆ, ಸಫಾರಿಗೆ ತೆರಳಿದವರಿಗೆ ಮಾತ್ರ ಕಾಣಿಸುತ್ತಿದ್ದ ಹುಲಿಗಳು ಈಗ ಅರಣ್ಯದಲ್ಲಿ ಅಡ್ಡಾಡುತ್ತಿವೆ. ಅರಣ್ಯದ ನಡುವೆ ಹಾದು ಹೋದ ಹೆದ್ದಾರಿಗಳಲ್ಲಿ ಸಾಗುವ ಪ್ರಯಾಣಿಕರಿಗೆ ರಸ್ತೆ ಬದಿಯಲ್ಲೇ ದರ್ಶನ ನೀಡುತ್ತಿವೆ.
ಮಳೆ ಸುರಿದ ಬಳಿಕ ಕುರುಚಲು ಕಾಡು, ಹುಲ್ಲು ಚಿಗುರಿದ್ದರಿಂದ ಸಸ್ಯಹಾರಿ ಪ್ರಾಣಿಗಳು ಖುಷಿ ಖುಷಿಯಾಗಿ ಮೇಯುತ್ತಿದ್ದರೆ, ಅವುಗಳನ್ನು ಹೊಂಚು ಹಾಕಿ ಬೇಟೆಯಾಡಿ ತಿನ್ನಲು ಚಿರತೆ, ಹುಲಿಯಂತಹ ಪ್ರಾಣಿಗಳು ಸದಾ ಕಾಯುತ್ತಿರುತ್ತವೆ. ಸಾಮಾನ್ಯವಾಗಿ ಅರಣ್ಯದೊಳಗೆ ನಡೆಯುವ ಈ ಸಂಘರ್ಷ ಹೊರಗಿನವರಿಗೆ ಗೊತ್ತೇ ಆಗುವುದಿಲ್ಲ.
ಸಹಜ ಸ್ಥಿತಿಯತ್ತ ಬಂಡೀಪುರದ ಕಾಡು;ಅಪಾಯದಿಂದ ಪಾರಾದ ಪ್ರಾಣಿಗಳು
ಆದರೆ ಅರಣ್ಯ ಪ್ರದೇಶದ ಅಂಚಿನಲ್ಲಿ ಕೆಲವು ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದು, ಅವುಗಳನ್ನು ನೋಡಲೆಂದೇ ಬಹಳಷ್ಟು ಪ್ರವಾಸಿಗರು ಇತ್ತ ಬರುತ್ತಿದ್ದಾರೆ. ಇನ್ನೊಂದೆಡೆ ಕಾಡೆಮ್ಮೆ ಸ್ವಚ್ಛಂದ ವಿಹಾರ ನಡೆಸುತ್ತಿದ್ದ ಸಂದರ್ಭ ಹುಲಿಯೊಂದು ಅಲ್ಲಿಗೆ ಬಂದ ವೇಳೆ ನಡೆದ ಎರಡರ ನಡುವಿನ ಜಟಾಪಟಿಯ ದೃಶ್ಯಗಳು ಇದೀಗ ಸೆರೆ ಸಿಕ್ಕಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದೊಳಗೆ ಸಫಾರಿಗೆ ತೆರಳುವ ವೇಳೆ ಕಾಡೆಮ್ಮೆಯೊಂದನ್ನು ಹುಲಿಯೊಂದು ಬೇಟೆಯಾಡಲು ಯತ್ನಿಸಿದೆ. ಈ ವೇಳೆಗೆ ತಿರುಗಿ ಬಿದ್ದ ಕಾಡೆಮ್ಮೆ ಹುಲಿಯನ್ನು ಹಿಮ್ಮಟ್ಟಿಸಿದೆ. ಈ ದೃಶ್ಯವನ್ನು ಗುಂಡ್ಲುಪೇಟೆಯ ಛಾಯಾಗ್ರಾಹಕ ಪಂಕಜ್ ಎಂಬುವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಅದು ಈಗ ವೈರಲ್ ಆಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಪರಿಸ್ಥಿತಿ ಹೇಗಿದೆ ಗೊತ್ತಾ?
ಹುಲಿ ಕಾಡೆಮ್ಮೆಯನ್ನು ಬೇಟೆಯಾಡಲು ಹೊಂಚುಹಾಕಿ ದಾಳಿ ನಡೆಸಿದ ಸಂದರ್ಭದಲ್ಲಿ ಹುಲಿಗೆ ಹೆದರದ ಕಾಡೆಮ್ಮೆ ಹುಲಿಗೆ ತಿರುಗಿ ನಿಂತು ಹಿಮ್ಮೆಟ್ಟಿಸುವ ಮೂಲಕ ತನ್ನ ಪ್ರಾಣವನ್ನು ಉಳಿಸಿಕೊಂಡಿದೆ. ಈ ಅಪರೂಪದ ದೃಶ್ಯ ಸಫಾರಿಗೆ ತೆರಳಿದ ಕೆಲವೇ ಕೆಲವು ಪ್ರವಾಸಿಗರಿಗೆ ಮಾತ್ರ ದೊರೆತಿದ್ದು, ಎಲ್ಲರನ್ನು ರೋಮಾಂಚನಗೊಳಿಸಿದ್ದಂತು ಸತ್ಯ.