23 ವರ್ಷಗಳ ಬಳಿಕ ಬಂದ್ ಆಯ್ತು ಬಂಡೀಪುರ ಸಫಾರಿ! ಹಿಂದೆ ಯಾಕಾಗಿತ್ತು?
ಚಾಮರಾಜನಗರ, ಮಾರ್ಚ್ 16: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್ ಹಾಗೂ ರೆಸಾರ್ಟ್ಗಳನ್ನು ಬಂದ್ ಮಾಡಲಾಗಿದೆ. 23 ವರ್ಷಗಳ ನಂತರ ಬಂಡೀಪುರ ಸಫಾರಿಗೆ ಇದೇ ಮೊದಲ ಬಾರಿಗೆ ಬಂದ್ ಆಗಿದೆ.
ಹಾಗಾದರೆ ಇದಕ್ಕೂ ಮೊದಲು ಏಕೆ ಆಗಿತ್ತು ಎಂಬುದನ್ನು ನೋಡುವುದಾದರೆ, ಸುಮಾರು 23 ವರ್ಷಗಳ ಹಿಂದಕ್ಕೆ ಹೋಗಬೇಕು. 1997 ಅಕ್ಟೊಬರ್ 9ರಂದು ಕಾಡುಗಳ್ಳ ವೀರಪ್ಪನ್ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮತ್ತು ಸೇನಾನಿ, ಡಾ.ಮೈತ್ರಿ ಹಾಗೂ ಅರಣ್ಯ ಇಲಾಖೆ ಮೂವರು ಸಿಬ್ಬಂದಿಯನ್ನು ಬಂಡೀಪುರದ ಹುಲಿಕಟ್ಟೆ ಹತ್ತಿರ ಅಪಹರಣ ಮಾಡಿಕೊಂಡು ಹೋಗಿದ್ದ ಈ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಬಂಡೀಪುರದ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಇದೀಗ ಕೊರೊನಾದ ಭೀತಿಯಿಂದ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕಾರಣದಿಂದ ಬಂದ್ ಮಾಡಲಾಗಿದೆ.
ಕೊರೊನಾದಿಂದ ಬಂಡೀಪುರ ಪ್ರವೇಶಕ್ಕೆ ನಿರ್ಬಂಧ
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶದಂತೆ ಕ್ರಮ ಕೈಗೊಳ್ಳಲಾಗಿದ್ದು, ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಇದೀಗ ಬಣಗುಟ್ಟುತ್ತಿದೆ. ಸಾರ್ವಜನಿಕರ ಮತ್ತು ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಮಾರ್ಚ್ 15ರಿಂದ 22ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜತೆಗೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್, ರೆಸಾರ್ಟ್ಗಳನ್ನು ಮುಚ್ಚಲಾಗಿದೆ.
ಇದರ ಪರಿಣಾಮ ಬಂಡೀಪುರ ಸುತ್ತಮುತ್ತಲಿನ ಕಂಟ್ರಿ ಕ್ಲಬ್, ಸೆರಾಯ್, ವಿಂಡ್ಲ್ ಪವರ್, ಜಂಗಲ್ ಲಾಡ್ಜ್, ಅಂಜುಜ ಫಾರ್ ಇನ್ನೂ ಮುಂತಾದ ರೆಸಾರ್ಟ್ನಲ್ಲಿ ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಈಗಾಗಲೇ ಎಲ್ಲ ಆನ್ ಲೈನ್ ಬುಕಿಂಗ್ ರದ್ದುಪಡಿಸಲಾಗಿದೆ. ಇದರಿಂದಾಗಿ ರೆಸಾರ್ಟ್ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.