ಬಂಡೀಪುರ ಸಫಾರಿಗೆ ಮತ್ತೆ ನಿರ್ಬಂಧ... ರೆಸಾರ್ಟ್ಗಳು ಖಾಲಿ
ಚಾಮರಾಜನಗರ, ಜುಲೈ 7: ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿನ ರೆಸಾರ್ಟ್ಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಬಂದ್ ಮಾಡಿರುವ ಕಾರಣ ಬಹುತೇಕ ರೆಸಾರ್ಟ್ಗಳು ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟದಿಂದ ತೊಳಲಾಡುತ್ತಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗುತ್ತಿತ್ತು. ದೇಶ, ವಿದೇಶಗಳ ಪ್ರವಾಸಿಗರು ಇತ್ತ ಮುಖ ಮಾಡಿದ್ದರು. ಹೀಗಾಗಿ ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದವು. ಪ್ರಭಾವಿಗಳು ರೆಸಾರ್ಟ್ ನಿರ್ಮಾಣ ಮಾಡುವ ಮೂಲಕ ಹಣ ಸಂಪಾದನೆಗೆ ಇಳಿದಿದ್ದರು. ಆದರೆ ಕೊರೊನಾ ಮಹಾಮಾರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಪ್ರವಾಸಿಗರು ಇತ್ತ ಸುಳಿದಿರಲಿಲ್ಲ.
ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ
ಲಾಕ್ ಡೌನ್ ಆರಂಭವಾಗುತ್ತಿದ್ದಂತೆಯೇ ರೆಸಾರ್ಟ್ಗಳಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರನ್ನು ಕಳುಹಿಸಿಕೊಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಾಣಿಸಿಕೊಳ್ಳದೆ ಹಸಿರು ವಲಯದಲ್ಲಿತ್ತು. ಈಗ ಎಲ್ಲವೂ ಬದಲಾಗಿದೆ.
ಅನ್ ಲಾಕ್ 1.0: ಇಂದಿನಿಂದ ಬಂಡೀಪುರದಲ್ಲಿ ಸಫಾರಿ ಆರಂಭ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟಿವ್ ಹರಡುವುದನ್ನು ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅದರಂತೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್ ಹಾಗೂ ರೆಸಾರ್ಟ್ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಮಾಡಿದ್ದಾರೆ.
ಜೂನ್ 8ರಿಂದ ಆರಂಭಗೊಂಡಿದ್ದ ಸಫಾರಿ
ಈ ಹಿಂದೆಯೂ ಸಾರ್ವಜನಿಕರ ಮತ್ತು ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 15ರಿಂದ 22ರ ವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನಂತರ ಜೂನ್ 8ರಿಂದ ಬಂಡೀಪುರ ಸಫಾರಿ ಪ್ರಾರಂಭವಾಗಿತ್ತು. 22 ದಿನಗಳಲ್ಲಿ 850 ಪ್ರವಾಸಿಗರು ಆಗಮಿಸಿ 8 ಲಕ್ಷ ರೂಪಾಯಿ ಸಫಾರಿಯಲ್ಲಿ ಆದಾಯ ಬಂದಿತ್ತು. ಈಗ ಮತ್ತೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್, ರೆಸಾರ್ಟ್ಗಳನ್ನು ಮುಚ್ಚಲು ಡಿಸಿ ಆದೇಶ ನೀಡಿದ್ದಾರೆ.
ರೆಸಾರ್ಟ್ಗಳು ಪ್ರವಾಸಿಗರಿಲ್ಲದೆ ಬಣಬಣ
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬಂಡೀಪುರ ಸಫಾರಿಗೆ ಪ್ರವಾಸಿಗರು ಆಗಮಿಸುತ್ತಿದ್ದರು. ಈಗ ಕೊರೊನಾ ವೈರಸ್ ಭೀತಿಯಿಂದ ಸಫಾರಿ ಕೌಂಟರ್ ನಲ್ಲಿ ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ. ಕಳೆದ 23 ವರ್ಷಗಳ ನಂತರ ಬಂಡೀಪುರ ಸಫಾರಿಗೆ ಬಂದ್ ಮಾಡಲಾಗಿದೆ. 1997 ಅಕ್ಟೊಬರ್ 9ರಂದು ಕಾಡುಗಳ್ಳ ವೀರಪ್ಪನ್ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ, ಡಾ.ಮೈತ್ರಿ ಹಾಗೂ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಬಂಡೀಪುರದ ಹುಲಿಕಟ್ಟೆ ಹತ್ತಿರ ಅಪಹರಣ ಮಾಡಿಕೊಂಡು ಹೋಗಿದ್ದ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಬಂಡೀಪುರ ಸಫಾರಿ ಬಂದ್ ಮಾಡಲಾಗಿತ್ತು. ಇದೀಗ ಬಂಡೀಪುರ ಸುತ್ತಮುತ್ತಲಿನ ಹಲವು ರೆಸಾರ್ಟ್ಗಳು ಪ್ರವಾಸಿಗರಿಲ್ಲದೇ ಬಣಗುಡುತ್ತಿವೆ. ಎಲ್ಲ ಆನ್ ಲೈನ್ ಬುಕಿಂಗ್ ರದ್ದುಪಡಿಸಲಾಗಿದೆ. ಇದರಿಂದಾಗಿ ರೆಸಾರ್ಟ್ಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಬಂಡೀಪುರದಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಾಣ
ಬಂಡೀಪುರದಲ್ಲಿ ಸದ್ಯಕ್ಕಿಲ್ಲ ಸಫಾರಿ
ಈ ಕುರಿತಂತೆ ಮಾತನಾಡಿರುವ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯ ಆರ್.ಎಫ್.ಓ ಎನ್.ಎಂ.ನವೀನಕುಮಾರ್, ಜಿಲ್ಲಾಧಿಕಾರಿಗಳ ಆದೇಶದಂತೆ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ಸಫಾರಿ ನಿರ್ಬಂಧಿಸಲಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಕಂಟ್ರಿ ಕ್ಲಬ್ ರೆಸಾರ್ಟ್ ಜನರಲ್ ಮ್ಯಾನೇಜರ್ ಗುರುರಾಜ್ ಆಚಾರ್ ಅವರು ಮಾತನಾಡಿ ಕೊರೊನಾ ವೈರಸ್ನಿಂದಾಗಿ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು.