ಬಂಡೀಪುರಕ್ಕೆ ಸಂದ "ಬೆಸ್ಟ್ ನ್ಯಾಷನಲ್ ಪಾರ್ಕ್" ಪ್ರಶಸ್ತಿ
ಚಾಮರಾಜನಗರ, ಫೆಬ್ರವರಿ 24: ವನ್ಯಜೀವಿ ಮತ್ತು ಅರಣ್ಯ ಪ್ರೇಮಿಗಳನ್ನು ಸದಾ ಸೂಜಿಗಲ್ಲಿನಂತೆ ಸೆಳೆಯುವ ಬಂಡೀಪುರ ಇತ್ತೀಚೆಗಿನ ವರ್ಷಗಳಲ್ಲಿ ಹಲವು ವಿಚಾರಗಳಿಗೆ ಹೆಸರುವಾಸಿಯಾಗಿದೆ. ಇದೀಗ ಬೆಸ್ಟ್ ನ್ಯಾಷನಲ್ ಪಾರ್ಕ್ ಎಂಬ ಪ್ರಶಸ್ತಿ ಬಂದಿರುವುದು ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಿದಂತಾಗಿದೆ.
ಬಂಡೀಪುರದ ಸೌಂದರ್ಯ ಸವಿಯಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಲೇ ಇರುತ್ತಾರೆ. ಅದರಲ್ಲೂ ಹುಲಿಗಳ ತಾಣವಾಗಿರುವ ಕಾರಣಕ್ಕೆ ಹೆಚ್ಚಿನವರು ಹುಲಿಗಳನ್ನು ನೋಡುವ ಸಲುವಾಗಿ ಬರುತ್ತಾರೆ. ಹೀಗೆ ಬಂದವರು ಸಫಾರಿ ವೇಳೆ ಕಾಣಸಿಗುವ ಹುಲಿಗಳನ್ನು ಹತ್ತಿರದಿಂದ ಕಂಡು ಖುಷಿಪಡುತ್ತಾರೆ. ಇದೀಗ ಬಂಡೀಪುರಕ್ಕೆ ಬೆಸ್ಟ್ ನ್ಯಾಷನಲ್ ಪಾರ್ಕ್ ಎಂಬ ಪ್ರಶಸ್ತಿ ಬಂದಿರುವುದು ಇದರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಬಂಡೀಪುರದಲ್ಲಿ ಸುಸೂತ್ರ ಸಫಾರಿಗೆ ಹೀಗೊಂದು ಹೊಸ ಕ್ರಮ
ಪ್ರತಿಷ್ಠಿತ ರಾಷ್ಟ್ರೀಯ ನಿಯತಕಾಲಿಕೆ ಔಟ್ ಲುಕ್ ಟ್ರಾವೆಲರ್ ಈ ಪ್ರಶಸ್ತಿಯನ್ನು ನೀಡಿದೆ. ಇಪ್ಪತ್ತೈದು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಆ ಪೈಕಿ ಬೆಸ್ಟ್ ನ್ಯಾಷನಲ್ ಪಾರ್ಕ್ ವಿಭಾಗದಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಪ್ರಶಸ್ತಿ ಬಂದಿರುವುದು ಅರಣ್ಯ ಇಲಾಖೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಂತಾಗಿದೆ.
ಹಾಗೆ ನೋಡಿದರೆ ಬಂಡೀಪುರ ಅರಣ್ಯವು ಹಲವು ಅನಾಹುತಗಳನ್ನು ಎದುರಿಸಿದೆ. ಪ್ರತಿವರ್ಷವೂ ಬೇಸಿಗೆ ಬಂತೆಂದರೆ ಅಗ್ನಿ ಅವಘಡದ ಭಯ ಕಾಡುತ್ತದೆ. ಕೆಲವು ವರ್ಷಗಳಿಂದ ಬೆಂಕಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಎರಡು ವರ್ಷಗಳ ಹಿಂದೆ ಕಾಡಿದ ಭಾರಿ ಬರದಿಂದ ಕೆರೆ ಕಟ್ಟೆಗಳು ಒಣಗಿ ನೀರಿಲ್ಲದೆ ಪ್ರಾಣಿ, ಪಕ್ಷಿಗಳು ಕಂಗಾಲಾಗಿದ್ದವು. ಅದರಿಂದ ನೀರಿನಾಸರೆ ಹುಡುಕಿಕೊಂಡು ವಲಸೆ ಹೋಗಿದ್ದವು.
ಈ ವೇಳೆ ಬೋರ್ ವೆಲ್ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸಿ ಪ್ರಾಣಿ ಪಕ್ಷಿಗಳ ದಾಹ ತೀರಿಸುವ ಪ್ರಯತ್ನ ಮಾಡಲಾಗಿತ್ತು. ಅದಾದ ನಂತರ ಕಳೆದ ವರ್ಷವಂತೂ ಭಾರೀ ಅಗ್ನಿ ಅವಘಡ ಸಂಭವಿಸಿ ಸಾವಿರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗುವುದರೊಂದಿಗೆ ಪ್ರಾಣಿ ಪಕ್ಷಿಗಳು ದಹನವಾಗಿದ್ದವು. ಕೊನೆಗೆ ಹೆಲಿಕಾಪ್ಟರ್ ಗಳ ಸಹಾಯದಿಂದ ನೀರು ಹಾಯಿಸಿ ಬೆಂಕಿ ನಂದಿಸಿದ್ದು ಇತಿಹಾಸ. ಈ ವರ್ಷ ಅಂತಹ ಅನಾಹುತಗಳಿಗೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ಅರಣ್ಯ ಸಿಬ್ಬಂದಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಗ್ನಿ ಅನಾಹುತ ತಡೆಗೆ ಸಜ್ಜಾಗಿ ನಿಂತಿದ್ದಾರೆ.
ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್
ಇತ್ತೀಚೆಗೆ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಬಂಡೀಪುರದಲ್ಲಿ ಬೀಡುಬಿಟ್ಟು ಪ್ರಕೃತಿಯ ಸೊಬಗನ್ನು ಸೆರೆ ಹಿಡಿದುಕೊಂಡು ಹೋಗಿದ್ದಾರೆ. ಇದರಿಂದಲೂ ಬಂಡೀಪುರದ ಹೆಸರು ಇನ್ನಷ್ಟು ಖ್ಯಾತಿ ಪಡೆಯಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.