ಬಂಡೀಪುರದಿಂದ ಆಡಳಿತ ಕಚೇರಿಗಳು ಮೇಲುಕಾಮನಹಳ್ಳಿಗೆ ಸ್ಥಳಾಂತರ?
ಚಾಮರಾಜನಗರ, ಜೂನ್ 08: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾವನದಲ್ಲಿ ಆಗಿಂದಾಗ್ಗೆ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ಸಫಾರಿಯನ್ನು ಬಂಡೀಪುರದಿಂದ ಸಮೀಪದ ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಮುಂದೆ ಇಲ್ಲಿರುವ ಎಲ್ಲ ಕಚೇರಿಗಳನ್ನು ಕೂಡ ಮೇಲುಕಾಮನಹಳ್ಳಿಗೆ ಸ್ಥಳಾಂತರಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇಷ್ಟಕ್ಕೂ ಬಂಡೀಪುರದಿಂದ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ನಿವಾಸ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ನಿವಾಸ ಹಾಗೂ ವಲಯಾರಣ್ಯಾಧಿಕಾರಿ ಕಚೆರಿ, ನಿವಾಸ ಹಾಗೂ ಎಲ್ಲ ರೀತಿಯ ಪ್ರವಾಸಿಗರ ವಸತಿಗೃಹಗಳನ್ನು ಸ್ಥಳಾಂತರಿಸುವ ಚಿಂತನೆ ನಡೆದಿದ್ದು, ಇದಕ್ಕಾಗಿ 25 ರಿಂದ 30 ಕೋಟಿ ವೆಚ್ಚದಲ್ಲಿ ನೀಲಿ ನಕ್ಷೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ಸಫಾರಿಗೆ ಸಿದ್ಧತೆ ಆರಂಭ
ಬಂಡೀಪುರದಲ್ಲಿ ವನ್ಯಪ್ರಾಣಿಗಳ ಭಯ
ಬಂಡೀಪುರದಲ್ಲಿ ಈಗಾಗಲೇ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳು ಮತ್ತು ವಸತಿಗೃಹಗಳಿದ್ದು, ಇವೆಲ್ಲವೂ ಅರಣ್ಯಕ್ಕೆ ಹೊಂದಿಕೊಂಡಿರುವ ಕಾರಣದಿಂದ ಸಂಜೆಯಾಗುತ್ತಿದ್ದಂತೆಯೇ ವನ್ಯಪ್ರಾಣಿಗಳು ಅದರಲ್ಲಿಯೂ ಚಿರತೆ, ಹುಲಿ, ಕಾಡಾನೆಗಳು ಬರುತ್ತಿದ್ದವು. ಇದು ಭಯವನ್ನುಂಟು ಮಾಡಿತ್ತು. ಜತೆಗೆ ಜನ ಇರುವುದು ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೂ ತೊಡಕಾಗಿದೆ.
ನೇರವಾಗಿ ಕಚೇರಿಗಳತ್ತ ಬರುವ ಕಾಡು ಪ್ರಾಣಿಗಳು
ಬಂಡೀಪುರದಲ್ಲಿದ್ದ ಸಫಾರಿಯನ್ನು ಮೆಲುಕಾಮನಹಳ್ಳಿಗೆ ಸ್ಥಳಾಂತರ ಮಾಡಿದ ನಂತರದ, ಅಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಡಾನೆಗಳು ನೇರವಾಗಿ ವಸತಿಗೃಹ, ಕಚೇರಿಯತ್ತ ಬರುತ್ತಿದ್ದು, ಅಲ್ಲಿರುವ ಪೈಪ್, ಕಟ್ಟಡಗಳಿಗೆ ಹಾನಿ ಮಾಡುತ್ತಿದ್ದರೆ, ಇನ್ನೊಂದೆಡೆ ಚಿರತೆ, ಹುಲಿ ಸಂಜೆ ಆರು ಗಂಟೆಗೆಲ್ಲ ಇತ್ತ ಆಗಮಿಸಿ ಭಯ ಹುಟ್ಟಿಸುತ್ತಿವೆ. ಇದು ಅವುಗಳ ಸ್ವಚ್ಛಂದ ವಿಹಾರದ ಜಾಗವಾಗಿವೆ. ಇದೆಲ್ಲವನ್ನು ಗಮನಿಸಿಯೇ ಸ್ಥಳಾಂತರದ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಳೆದ ವರ್ಷ ಸಫಾರಿ ಸ್ಥಳಾಂತರವಾಗಿತ್ತು
ಬಂಡೀಪುರದಲ್ಲಿ ಸಫಾರಿ ನಡೆಯುತ್ತಿದ್ದಾಗಲೂ ಇದೇ ಸಮಸ್ಯೆ ಎದುರಾಗುತ್ತಿತ್ತು. ಹೀಗಾಗಿ ಎನ್.ಟಿ.ಸಿ.ಎ ಮಾರ್ಗಸೂಚಿಯಂತೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಬಂಡೀಪುರದಲ್ಲಿದ್ದ ಸಫಾರಿಯನ್ನು ಮೇಲುಕಾಮನಹಳ್ಳಿ ಸಮೀಪ ಸ್ಥಳಾಂತರಿಸಲಾಗಿತ್ತು. ಇನ್ನು ಇಲ್ಲಿರುವ ಇತರೆ ಕಚೇರಿಗಳನ್ನು ಸ್ಥಳಾಂತರಿಸಿದರೆ ಬಂಡೀಪುರ ಜನ ಸಂಚಾರದಿಂದ ಮುಕ್ತವಾಗಿ ಪ್ರಶಾಂತ ವಾತಾವರಣ ನೆಲೆಗೊಳ್ಳಲಿದೆ. ಬಂಡೀಪುರ ಕಚೇರಿ ಸ್ಥಳಾಂತರಕ್ಕೆ ಸುಮಾರು 30 ಕೋಟಿಯಷ್ಟು ಹಣ ಖರ್ಚು ಆಗುವುದರಿಂದ ಅಷ್ಟೊಂದು ಅನುದಾನವನ್ನು ಸರ್ಕಾರ ನೀಡುವುದು ಕನಸಿನ ಮಾತು. ಹೀಗಾಗಿ ಎಲ್ಲವನ್ನು ಒಮ್ಮೆಗೆ ಮಾಡದೆ ಹಂತಹಂತವಾಗಿ ಸ್ಥಳಾಂತರದ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಮೂವತ್ತು ಕಟ್ಟಡ ನೆಲಸಮವಾಗಲಿದೆ
ಒಂದು ವೇಳೆ ಸರ್ಕಾರ ಅನುಮತಿ ನೀಡಿದ್ದೇ ಆದರೆ ಬಂಡೀಪುರದಲ್ಲಿರುವ ಸುಮಾರು ಮೂವತ್ತು ಕಟ್ಟಡಗಳನ್ನು ನೆಲಸಮ ಮಾಡಿ ಒಂದು ಕಟ್ಟಡವನ್ನು ಉಳಿಸಿಕೊಂಡು ಅದನ್ನು ಕಳ್ಳಬೇಟೆ ಶಿಬಿರಕ್ಕೆ ಬಳಸಿಕೊಳ್ಳುವ ಚಿಂತನೆಯೂ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಲ್ಲವೂ ಸರಿ ಹೋದರೆ ಮುಂದಿನ ದಿನಗಳಲ್ಲಿ ಬಂಡೀಪುರದ ಬದಲಿಗೆ ಮೇಲುಕಾಮನಹಳ್ಳಿ ಮುಂಚೂಣಿಗೆ ಬರಲಿದೆ ಎಂಬುದಂತು ನಿಜ.