ವಿಶೇಷ ವರದಿ: ಜುಲೈ 5ರಿಂದ ಆನ್ಲೈನ್ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಲಭ್ಯ!
ಚಾಮರಾಜನಗರ, ಜುಲೈ 2: ಕೊರೊನಾ ಕಾರಣದಿಂದಾಗಿ ಬೇಸಿಗೆಯ ದಿನಗಳಲ್ಲಿ ಸ್ಥಗಿತಗೊಂಡಿದ್ದ ಬಂಡೀಪುರದ ಸಫಾರಿ ಈಗಾಗಲೇ ಆರಂಭವಾಗಿದೆಯಾದರೂ, ಸಫಾರಿ ಟಿಕೆಟ್ ಮತ್ತು ಪ್ರವಾಸೋದ್ಯಮದ ಚಟುವಟಿಕೆಗಳ ಬಗ್ಗೆ ಜುಲೈ 5ರ ನಂತರ ಆನ್ಲೈನ್ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ತಡೆಯುವ ಸಲುವಾಗಿ ಲಾಕ್ಡೌನ್ ಜಾರಿ ಮಾಡಿದ್ದರಿಂದ ಬೇಸಿಗೆಯ ದಿನಗಳಲ್ಲಿಯೇ ಬಂಡೀಪುರ ಸಫಾರಿ ಬಂದ್ ಆಗುತ್ತಿದ್ದು, ಪರಿಣಾಮ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಆದರೆ ಬಂಡೀಪುರ ಅರಣ್ಯಕ್ಕೆ ಮಾತ್ರ ವರದಾನವಾಗಿದೆ. ಲಾಕ್ಡೌನ್ ಕಾರಣದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರಿಂದ ಎರಡು ವರ್ಷಗಳಲ್ಲಿ ಅಗ್ನಿ ಅನಾಹುತ ಕಡಿಮೆಯಾಗಿದೆಯಲ್ಲದೆ, ಹಸಿರು ಹಚ್ಚಡದಲ್ಲಿ ಪ್ರಾಣಿ ಪಕ್ಷಿಗಳು ನಿರ್ಭಯವಾಗಿ ಅಡ್ಡಾಡುವಂತಾಗಿದೆ.
ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್ಗಾಗಿ ಹುಡುಕಾಟ!
ನೆಮ್ಮದಿಯಾಗಿ ವಿಹರಿಸುತ್ತಿರುವ ಪ್ರಾಣಿಗಳು
ಈ ಬಾರಿ ಮಾ.28ರಿಂದ ಲಾಕ್ಡೌನ್ ಜಾರಿ ಮಾಡಿದ್ದರಿಂದ ಮತ್ತು ಸಫಾರಿ ಸೇರಿದಂತೆ ಎಲ್ಲ ರೀತಿಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ, ಅರಣ್ಯದೊಳಗೆ ವಾಹನ ದಟ್ಟಣೆಯಿಲ್ಲದೆ ಪ್ರಶಾಂತವಾಗಿತ್ತು. ಜತೆಗೆ ಕಿಡಿಗೇಡಿಗಳಿಂದ ಸಂಭವಿಸುತ್ತಿದ್ದ ಕಾಡ್ಗಿಚ್ಚಿಗೂ ತಡೆಬಿದ್ದಿತು. ಇದರಿಂದ ಗಿಡ- ಮರಗಳು ಹಸಿರಾಗಿ ಉಳಿದವಲ್ಲದೆ, ಪ್ರಾಣಿ ಪಕ್ಷಿಗಳು ನೆಮ್ಮದಿಯಾಗಿ ವಿಹರಿಸುವಂತಾಯಿತು.
ಕೋವಿಡ್ ನಿಯಮ ಪಾಲಿಸುವುದು ಅಗತ್ಯ
ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಜೂನ್ 30ರಿಂದ ಆರಂಭಗೊಂಡಿದೆ. ಆದರೆ ಮೈಸೂರು ವ್ಯಾಪ್ತಿಯಲ್ಲಿ ಅನ್ಲಾಕ್ ಆಗದ ಕಾರಣ, ಜತೆಗೆ ಕೊರೊನಾ ಭಯ ಇನ್ನೂ ಕೂಡ ಕಾಡುತ್ತಿರುವುದರಿಂದ ಪ್ರವಾಸಿಗರು ಸಫಾರಿಯತ್ತ ಹೆಚ್ಚು ಒಲವು ತೋರಿದಂತೆ ಕಾಣುತ್ತಿಲ್ಲ. ಆದರೂ ಸಫಾರಿಗೆ ಆಗಮಿಸುವ ಪ್ರವಾಸಿಗರು ಕೋವಿಡ್ ನಿಯಮ ಪಾಲಿಸುವುದು ಅಗತ್ಯವಾಗಿದೆ. ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸ್ವಯಂ ಪ್ರೇರಿತ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಸಫಾರಿಗೆ ಆನ್ಲೈನ್ನಲ್ಲಿ ಟಿಕೆಟ್ ಪಡೆಯಲು ಅವಕಾಶ ಮಾಡಿಕೊಟ್ಟಿಲ್ಲದ ಕಾರಣ ಕೌಂಟರ್ನಲ್ಲಿಯೇ ಟಿಕೆಟ್ ಪಡೆದು ಸಫಾರಿಗೆ ತೆರಳುವುದು ಅನಿವಾರ್ಯವಾಗಿದೆ.
ಸಫಾರಿಯಿಲ್ಲದೆ ಕೋಟ್ಯಂತರ ರೂ. ನಷ್ಟ
ಇನ್ನು ಕೊರೊನಾ ಸೋಂಕಿನ ಭಯದಿಂದಾಗಿ ಹೆಚ್ಚಿನ ಜನರು ಅನಗತ್ಯವಾಗಿ ಮನೆಯಿಂದ ಹೊರಬರುತ್ತಿಲ್ಲ ಅದರಲ್ಲೂ ಪ್ರವಾಸ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಮುಂದಿನ ದಿನಗಳು ಮಳೆಗಾಲವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ನಿರೀಕ್ಷೆ ಮಾಡುವುದು ಕಷ್ಟವೇ. ಆದರೂ ಪ್ರಕೃತಿ ಪ್ರೇಮಿಗಳು ಅದರಲ್ಲೂ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲಿದ್ದು ಅಥವಾ ಕೆಲಸದ ಒತ್ತಡದಲ್ಲಿದ್ದವರು ಒಂದಷ್ಟು ಸಮಯವನ್ನು ನಿಸರ್ಗದ ಸುಂದರ ಪರಿಸರದಲ್ಲಿ ಕಳೆದು ರಿಲ್ಯಾಕ್ಸ್ ಆಗುವ ಸಲುವಾಗಿ ಬಂಡೀಪುರದತ್ತ ಬಂದರೂ ಅಚ್ಚರಿ ಪಡಬೇಕಾಗಿಲ್ಲ.
Recommended Video
ವಿವಿಧ ಜಾತಿಯ ವನ್ಯಪ್ರಾಣಿಗಳ ದರ್ಶನ ಖಚಿತ
ಲಾಕ್ಡೌನ್ ಕಾರಣದಿಂದ ಬಂಡೀಪುರದಲ್ಲಿ ಸಫಾರಿ ಬಂದ್ ಆಗಿದ್ದರಿಂದ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರು ಬಂಡೀಪುರದತ್ತ ಮುಖ ಮಾಡುವುದರಿಂದ ಒಂದಷ್ಟು ಆದಾಯವನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜತೆಗೆ ಈ ಬಾರಿ ಬೇಸಿಗೆಯಲ್ಲಿ ಮಳೆ ಸುರಿದ ಕಾರಣ ಸುಮಾರು 1024 ಸಾವಿರ ಚದರ ಕಿ.ಮೀ ವಿಸ್ತೀರ್ಣದ ಬಂಡೀಪುರ ಹಸಿರಿನಿಂದ ಕಂಗೊಳಿಸುತ್ತಿದ್ದು, ವನ್ಯಪ್ರಾಣಿಗಳು ನೆಮ್ಮದಿಯಾಗಿ ಓಡಾಡುತ್ತಿವೆ. ಹಾಗಾಗಿ ಈ ಸಮಯದಲ್ಲಿ ಸಫಾರಿಗೆ ತೆರಳುವವರಿಗೆ ಹುಲಿ, ಚಿರತೆ, ಕಾಡಾನೆ ಸೇರಿದಂತೆ ಹಲವು ರೀತಿಯ ವನ್ಯಪ್ರಾಣಿಗಳು ದರ್ಶನ ನೀಡುವುದರಲ್ಲಿ ಎರಡು ಮಾತಿಲ್ಲ.