ಒಣಗಿದ ಬಂಡೀಪುರ ಅರಣ್ಯ: ಕಾಳ್ಗಿಚ್ಚಿನ ಭಯ, ನೀರಿನ ಚಿಂತೆ!
ಚಾಮರಾಜನಗರ, ಮಾರ್ಚ್ 15: ಹಚ್ಚ ಹಸಿರಿನಿಂದ ಕೂಡಿ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದ್ದ ಬಂಡೀಪುರ ಅರಣ್ಯ ಬೇಸಿಗೆ ಬರುತ್ತಿದ್ದಂತೆಯೇ ಒಣಗಿ ಬೋರಲಾಗುತ್ತಿದೆ. ಜತೆಗೆ ಕುರುಚಲು ಕಾಡುಗಳು ಒಣಗಿ ನಿಂತಿದ್ದು, ಕೆರೆಗಳಲ್ಲಿ ನೀರು ಬತ್ತುತ್ತಿರುವುದರಿಂದ ಮುಂದಿನ ಬೇಸಿಗೆಯ ದಿನಗಳನ್ನು ನೆನಪಿಸಿಕೊಂಡರೆ ಭಯವುಂಟಾಗುತ್ತಿದೆ.
ಬಂಡಿಪುರಕ್ಕೊಂದು ಸುತ್ತು ಹೊಡೆದು ಬಂದರೆ ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಬಂಡೀಪುರ ಅಭಯಾರಣ್ಯದ ಮರಗಿಡಗಳು ಸಂಪೂರ್ಣ ಒಣಗಿ ನಿಂತಿರುವುದು, ಹಸಿರು ಮೇವು, ನೀರಿಗಾಗಿ ಜಿಂಕೆಗಳು ಸೇರಿದಂತೆ ಹಲವು ಪ್ರಾಣಿಗಳು ಅಲೆಯುತ್ತಿರುವುದು ಕಂಡುಬರುತ್ತಿದೆ. ಬಹಳಷ್ಟು ಪ್ರಾಣಿಗಳಿಗೆ ಹಸಿರು ಮೇವಿನ ಸಮಸ್ಯೆ ಉಂಟಾಗಿದ್ದು, ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗೆ ಹಸಿರು ಮೇವು ದೊರೆಯುವ ಕಾರಣ ಅಂತಹ ಪ್ರದೇಶಗಳನ್ನು ಹುಡುಕಿಕೊಂಡು ಹೋಗುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಸಫಾರಿಗೆ ತೆರಳುವ ಮಂದಿಗೆ ಹೆಚ್ಚಿನ ಪ್ರಾಣಿಗಳು ಕಾಣಸಿಗುವುದು ಕಷ್ಟವಾಗಬಹುದು.
ಕಾವೇರಿ ನದಿಯಲ್ಲಿ ಕ್ಷೀಣಿಸುತ್ತಿದೆ ನೀರಿನ ಮಟ್ಟ
ಕಳೆದ ಒಂದೆರಡು ತಿಂಗಳ ಹಿಂದೆ ಬಂದು ಹೋದ ಪ್ರವಾಸಿಗರು ಮತ್ತೆ ಬಂದರೆ ಅಚ್ಚರಿಗೊಳ್ಳುವುದು ಖಚಿತ. ಏಕೆಂದರೆ ಈಗಿನ ರಣಬಿಸಿಲು ಹಸಿರನ್ನೇ ಬಲಿತೆಗೆದುಕೊಂಡಿದೆ. ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹಸಿರು ಹೊದ್ದುಕೊಂಡಿದ್ದ ಈ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಜಿಂಕೆ ಕಡವೆ, ಕಾಡೆಮ್ಮೆ, ಆನೆ, ಹುಲಿ, ಚಿರತೆಗಳು ಕಾಣುತ್ತಿದ್ದವು. ಜತೆಗೆ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ರಾಚುತ್ತಿತ್ತು. ಶುದ್ಧ ಗಾಳಿ, ತಂಪು ವಾತಾವರಣ, ಮನಕ್ಕೆ ಮುದ ನೀಡುತ್ತಿತ್ತು. ಈಗ ನೆತ್ತಿಸುಡುವ ಬಿಸಿಲು, ಒಣಗಿ ನಿಂತ ಅರಣ್ಯ, ಅಸಹಾಯಕ ಪ್ರಾಣಿಗಳು ಎಲ್ಲವೂ ಪ್ರವಾಸಿಗರನ್ನು ನಿರಾಸೆಗೆ ತಳ್ಳುತ್ತಿದೆ.
ಈಗಾಗಲೇ ಅರಣ್ಯದಲ್ಲಿ ಹಸಿರು ಮೇವು ಸಿಗದ ಕಾರಣ ಕಾಡು ಪ್ರಾಣಿಗಳು ರೈತರ ಜಮೀನಿನತ್ತ ಮುಖ ಮಾಡಿದ್ದು ಪ್ರಾಣಿ ಮತ್ತು ಮಾನವ ಸಂಘರ್ಷಗಳು ಆರಂಭವಾಗ ತೊಡಗಿದೆ. ಈ ಬಾರಿ ಅರಣ್ಯದತ್ತ ಇಲಾಖೆ ನಿಗಾವಹಿಸಿದ್ದು, ಕಾಡ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸಿದೆ. ಇದಲ್ಲದೆ, ವನ್ಯ ಜೀವಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕೆರೆಗಳಿಗೆ ಸೋಲಾರ್ ಮೋಟಾರ್ ಮೂಲಕ ನೀರನ್ನು ತುಂಬಿಸಲಾಗುತ್ತಿದೆ.
ಬಂಡೀಪುರ: ಆಹಾರವಿಲ್ಲದೆ ಪರಿತಪಿಸುತ್ತಿರುವ ಸಾಕಾನೆಗಳು
ಇನ್ನು ಬಹಳಷ್ಟು ಪ್ರಾಣಿಗಳು ನೀರು ಆಹಾರ ಹುಡುಕಿಕೊಂಡು ಹೋದರೂ ಮಳೆ ಬರುತ್ತಿದ್ದಂತೆಯೇ ಇತ್ತ ಬರಲಿವೆ ಎನ್ನುತ್ತಾರೆ ಅರಣ್ಯ ಸಿಬ್ಬಂದಿ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ಬಂದರೆ ಪ್ರಾಣಿ ಪಕ್ಷಿ ಮತ್ತು ಗಿಡ ಮರಗಳು ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ. ಸದ್ಯಕ್ಕೆ ಹುಯ್ಯೋ ಹುಯ್ಯೋ ಮಳೆರಾಯ ಎಂದು ಪ್ರಾರ್ಥಿಸುವುದಷ್ಟೆ ನಮ್ಮಿಂದ ಸಾಧ್ಯ.