ಕನಕಗಿರಿಯ ಬಾಹುಬಲಿಗೆ ಮಹಾಮಸ್ತಾಭಿಷೇಕ
ಚಾಮರಾಜನಗರ, ಫೆಬ್ರವರಿ 2: ಚಾಮರಾಜನಗರ ಜಿಲ್ಲೆಯ ಕನಕಗಿರಿ ಅತಿಶಯ ಸಿದ್ದ ಕ್ಷೇತ್ರದಲ್ಲಿ ನೂತನ ಬಾಹುಬಲಿಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, 1108 ಕಳಸದಿಂದ ಮಹಾಮಸ್ತಾಭಿಷೇಕ ಮಾಡುವ ಮೂಲಕ ಜೈನ ಸಮುದಾಯದವರು ಭಕ್ತಿಭಾವ ಮೆರೆದರು.
ಮಲೆಯೂರು ಗ್ರಾಮದ ಬಳಿಯಿರುವ ಜೈನ ಕಾಶಿ ಎಂದೇ ಖ್ಯಾತಿ ಪಡೆದ ಕನಕಗಿರಿ ಅತಿಶಯ ಸಿದ್ದ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಬಾಹುಬಲಿಗೆ ಘೋಷಣೆ ಕೂಗುತ್ತಾ ಹರ್ಷ ವ್ಯಕ್ತಪಡಿಸಿದರು. ನೂತನವಾಗಿ 18 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರೊಂದಿಗೆ ಮಹಾಮಸ್ತಾಭಿಷೇಕ ನೆರವೇರಿಸಿ, ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.[ಗೊಮ್ಮಟಗಿರಿಯ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ]
ಬಳಿಕ ಬಾಹುಬಲಿ ಮೂರ್ತಿಗೆ 1108 ತುಂಬು ಕಳಸದ ನೀರು, ಹಾಲು, ಚಂದನ, ಅರಿಶಿನ- ಕುಂಕುಮ ಹೀಗೆ ಹಲವು ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಮಾಡಲಾಯಿತು. ಕನಕಗಿರಿ ಸಿದ್ದಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮಹಾಮಸ್ತಾಭಿಷೇಕದಲ್ಲಿ ಹಲವು ಗಣ್ಯರು, ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.