ಬಂಡೀಪುರದಿಂದ ರಾಂಪುರಕ್ಕೆ ಸಾಕಾನೆಗಳನ್ನು ಕಳುಹಿಸಿದ್ಯಾಕೆ?
ಗುಂಡ್ಲುಪೇಟೆ ಫೆಬ್ರವರಿ 12: ಬಂಡೀಪುರದ ಆನೆ ಶಿಬಿರದಲ್ಲಿರುವ ಹೆಣ್ಣಾನೆಗಳು ಮರಿಹಾಕಿದ್ದು, ಈಗಾಗಲೇ ಮರಿಗಳು ದಷ್ಠಪುಷ್ಠವಾಗಿ ಬೆಳೆದು ತಮ್ಮದೇ ತುಂಟಾಟದಿಂದ ಎಲ್ಲರ ಗಮನಸೆಳೆಯುತ್ತಿವೆ.
ತಾಯಿಯ ಮಗ್ಗುಲಲ್ಲೇ ಇರುವ ಈ ಮರಿಯಾನೆಗಳು ಹಾಲುಕುಡಿಯುತ್ತಾ, ಮಾವುತರು ನೀಡುವ ಆಹಾರವನ್ನು ಸೇವಿಸುತ್ತಾ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಖುಷಿಯಾಗಿವೆ. ಆದರೆ ಈ ಮರಿಯಾನೆಗಳು ಇತರೆ ಆಹಾರವನ್ನು ಸೇವಿಸಲು ಕಲಿತಿರುವುದರಿಂದಾಗಿ ಇನ್ನು ಮುಂದೆ ತಾಯಿಯ ಹಾಲಿನ ಅಗತ್ಯವಿಲ್ಲ. ಆದರೆ ತಾಯಿಯ ಹಾಲನ್ನು ಕುಡಿಯುವುದನ್ನು ಬಿಡಿಸಬೇಕಾದರೆ ಮರಿಗಳನ್ನು ತಾಯಿಯಿಂದ ಬೇರ್ಪಡಿಸುವುದು ಅನಿವಾರ್ಯವಾಗಲಿದೆ.
ಬಂಡೀಪುರ ಶಿಬಿರದಿಂದ ಸಾಕಾನೆಗಳ ಸ್ಥಳಾಂತರ?
ಮರಿಯಾನೆಗಳು ತಾಯಿಯ ಹಾಲು ಕುಡಿಯುವುದನ್ನು ಮರೆಸುವ ಸಲುವಾಗಿ ಬಂಡೀಪುರ ಆನೆಶಿಬಿರದಲ್ಲಿದ್ದ ಎರಡು ಮರಿಯಾನೆಗಳ ತಾಯಿ ಸೇರಿದಂತೆ ಐದು ಸಾಕಾನೆಗಳನ್ನು ರಾಂಪುರ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ರಾಂಪುರ ಆನೆ ಶಿಬಿರದಲ್ಲಿ ಮರಿಯಾನೆಗಳನ್ನು ತಾಯಿ ಆನೆಯಿಂದ ಬೇರ್ಪಡಿಸಿ ಹಾಲು ಕುಡಿಯುವುದನ್ನು ಮರೆಯಿಸಲಾಗುತ್ತದೆ.
ಆ ನಂತರ ಮರಿಯಾನೆಗಳಿಗೆ ಹಸಿರು ಮೇವು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಸುಮಾರು ಒಂದು ವಾರಗಳ ಕಾಲ ತಾಯಿಯಾನೆಗಳು ರಾಂಪುರ ಆನೆ ಶಿಬಿರದಲ್ಲಿದ್ದು, ಆ ನಂತರ ಮತ್ತೆ ಬಂಡೀಪುರಕ್ಕೆ ಕರೆ ತರಲಾಗುತ್ತದೆ ಎಂದು ಹೇಳಲಾಗಿದೆ.
ಅರಣ್ಯ ಮೂಲದ ಪ್ರಕಾರ ತಾಯಿ ಆನೆಗಳು ರಾಂಪುರ ಶಿಬಿರದಿಂದ ಬಂಡೀಪುರ ಆನೆ ಶಿಬಿರಕ್ಕೆ ಹಿಂತಿರುಗಿದ ಬಳಿಕ ಕೆಲ ದಿನಗಳ ಕಾಲ ಅವುಗಳಿಗೆ ತರಬೇತಿ ನೀಡಿ ಆನೆ ಸಫಾರಿಗೆ ಬಳಸಿಕೊಳ್ಳಲಾಗುತ್ತದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಬಂಡೀಪುರಕ್ಕೆ ತೆರಳುವ ಪ್ರವಾಸಿಗರಿಗೆ ಆನೆ ಮೇಲೆ ಸವಾರಿ ಮಾಡುವ ಅವಕಾಶ ದೊರೆಯಲಿದೆ. ಈಗಾಗಲೇ ಹಲವೆಡೆ ಆನೆಸಫಾರಿ ನಡೆಸಲಾಗುತ್ತಿದ್ದು, ಅದರಿಂದ ಆದಾಯವೂ ಬರುತ್ತಿದೆ.
ಬಂಡೀಪುರದಲ್ಲಿ ಪ್ರಾಣಿಗಳ ವೀಕ್ಷಣೆ ಮಾಡಲು ವಾಹನಗಳಲ್ಲಿ ಸಫಾರಿ ವ್ಯವಸ್ಥೆ ಇದೆಯಾದರೂ ಆನೆ ಮೇಲೆ ಸವಾರಿ ಮಾಡಲು ಅವಕಾಶ ಇದುವರೆಗೆ ಇರಲಿಲ್ಲ. ಇದೀಗ ಆ ಸೌಲಭ್ಯ ಮಾಡಿಕೊಟ್ಟಿದ್ದೇ ಆದರೆ ಪ್ರವಾಸಿಗರನ್ನು ಇನ್ನು ಹೆಚ್ಚು ಸೆಳೆಯಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.