ಕಾಡು ಪ್ರಾಣಿ ನಾಡಿಗೆ ಬರುವುದ ತಡೆಯುವುದೇ ಈ ಆಸ್ಟ್ರೇಲಿಯಾ ತಂತ್ರಜ್ಞಾನ?
ಚಾಮರಾಜನಗರ, ನವೆಂಬರ್ 11: ಅರಣ್ಯ ಇಲಾಖೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಬಂಡೀಪುರ ಅರಣ್ಯದಂಚಿನಲ್ಲಿ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷ ನಿಂತ ಹಾಗೆ ಕಾಣುತ್ತಿಲ್ಲ. ಜಿಲ್ಲೆಯ ಕಾಡಂಚಿನ ಜನ ಒಂದಲ್ಲ ಒಂದು ರೀತಿಯಲ್ಲಿ ಕಾಡು ಪ್ರಾಣಿಗಳಿಂದ ತೊಂದರೆ ಅನುಭವಿಸುತ್ತಲೇ ಇದ್ದಾರೆ.
ಕಾಡುಪ್ರಾಣಿಗಳು ಅರಣ್ಯದಿಂದ ನಾಡಿನತ್ತ ಬರದಂತೆ ಮಾಡಲು ಇದೀಗ ವಿನೂತನ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಕುತೂಹಲ ಕೆರಳಿಸಿದ ಆಸ್ಟ್ರೇಲಿಯಾ ತಂತ್ರಜ್ಞಾನ
ಈಗಾಗಲೇ ಬಂಡೀಪುರ ಅರಣ್ಯದಂಚಿನಲ್ಲಿ ಪ್ರಾಣಿಗಳು ನಾಡಿನೊಳಗೆ ಬರುವುದನ್ನು ತಪ್ಪಿಸಲು ಕಂದಕ, ಸೋಲಾರ್ ಬೇಲಿ, ರೈಲ್ವೆ ಕಂಬಿಯ ತಡೆಗೋಡೆ ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಅವು ನಿರೀಕ್ಷಿತ ಫಲ ನೀಡಿಲ್ಲ. ಇದು ಆಗಾಗ್ಗೆ ನಡೆಯುತ್ತಿರುವ ಘಟನೆಗಳಿಂದ ರುಜುವಾತಾಗಿದೆ. ಹೀಗಾಗಿ ಇದೀಗ ಆಸ್ಟ್ರೇಲಿಯಾ ತಂತ್ರಜ್ಞಾನವನ್ನು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ.
ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೈಟೆಕ್ ಕಣ್ಗಾವಲು
ಫಾಕ್ಸ್ ಲೈಟ್ ಪ್ರಯೋಗ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು, ನಾಡಿನತ್ತ ಮುಖ ಮಾಡಿರುವ ಪ್ರಾಣಿಗಳು ರೈತರ ಬೆಳೆಯನ್ನು ನಾಶ ಮಾಡುವುದಲ್ಲದೆ, ಪ್ರಾಣಕ್ಕೂ ಸಂಚಕಾರ ತರುತ್ತಿವೆ. ಇವುಗಳು ನಾಡಿನತ್ತ ಬಾರದೆ ಅರಣ್ಯದಲ್ಲಿಯೇ ಉಳಿಯುವಂತೆ ಮಾಡುವ ಸಲುವಾಗಿ ಆಸ್ಟ್ರೇಲಿಯಾದ ತಂತ್ರಜ್ಞಾನವಾದ ಫಾಕ್ಸ್ ಲೈಟ್ ಅನ್ನು ಪ್ರಯೋಗ ಮಾಡಲಾಗುತ್ತಿದೆ.
ಪ್ರಾಯೋಗಿಕವಾಗಿ ಎರಡು ಕಡೆ ಫಾಕ್ಸ್ ಲೈಟ್ ಅಳವಡಿಕೆ
ಈ ಸಂಬಂಧ ಬಂಡೀಪುರಕ್ಕೆ ಭೇಟಿ ನೀಡಿದ ಆಸ್ಟ್ರೇಲಿಯಾದ ಫಾಕ್ಸ್ ಲೈಟ್ ಕಂಪನಿಯ ಸಿಇಒ ಐಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಚಂದ್ರ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ಲೈಟ್ ಗಳನ್ನು ಅಳವಡಿಸಿದ್ದೇ ಆದರೆ ಅದು ರಾತ್ರಿ ಸಮಯದಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ಬೆಳಕನ್ನು ಹೊರ ಚೆಲ್ಲುವುದರಿಂದ ಇದರಿಂದ ಬೆದರುವ ವನ್ಯ ಪ್ರಾಣಿಗಳು ಕಾಡಿನ ಅಂಚಿಗೆ ಬರಲು ಹಿಂದೇಟು ಹಾಕುವುದಲ್ಲದೆ, ಕಾಡಿನೊಳಕ್ಕೆ ಹೋಗುತ್ತವೆಯಂತೆ. ಈಗಾಗಲೇ ಗೋಪಾಲಸ್ವಾಮಿ ಬೆಟ್ಟ ವಲಯದ ಹುಂಡೀಪುರ ವ್ಯಾಪ್ತಿಯ ಆಂಜನೇಯ ದೇವಸ್ಥಾನದ ಎರಡು ಕಡೆ ಈ ಫಾಕ್ಸ್ ಲೈಟ್ ಗಳನ್ನು ಅಳವಡಿಸಿದ್ದು ಈ ಲೈಟ್ ಗಳು ರಾತ್ರಿ ಸಮಯದಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ಬೆಳಕನ್ನು ಹೊರಚೆಲ್ಲುತ್ತಿವೆ. ಇವುಗಳಿಗೆ ಸೋಲಾರ್ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಕತ್ತಲು ಆವರಿಸುತ್ತಿದ್ದಂತೆ ಸ್ವಯಂ ಆಗಿ ಚಾಲಿತವಾಗಿ ಆನ್ ಆಗಿ ಬೆಳಗಿನ ಸಮಯದಲ್ಲಿ ಬಂದ್ ಆಗಲಿವೆ.
ಬಂಡೀಪುರದ ಹೊಸ ಸಫಾರಿ ಗೇಟ್; ತಿಂಗಳು ಕಳೆದರೂ ಇಲ್ಲ ಮೂಲಸೌಲಭ್ಯ
ಹದಿನಾಲ್ಕು ಸಾವಿರ ವೆಚ್ಚ
ಒಂದು ಲೈಟಿಗೆ ಹದಿನಾಲ್ಕು ಸಾವಿರ ವೆಚ್ಚವಾಗಲಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಷ್ಟರ ಮಟ್ಟಿಗೆ ವನ್ಯಪ್ರಾಣಿಗಳು ಅರಣ್ಯದಿಂದ ಹೊರ ಬರದಂತೆ ಕಾಯುತ್ತವೆ ಮೊದಲಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ನವೀನ್ಕುಮಾರ್, "ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸುವ ಉದ್ದೇಶದಿಂದ ಈ ಫಾಕ್ಸ್ ಲೈಟ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಪ್ರಯೋಗಾತ್ಮಕವಾಗಿ ಎರಡು ಸ್ಥಳಗಳಲ್ಲಿ ಫಾಕ್ಸ್ ಲೈಟ್ ಗಳನ್ನು ಅಳವಡಿಸಲಾಗಿದ್ದು, ಇದರ ಕಾರ್ಯವೈಖರಿ ಹೇಗಿದೆ ಎಂಬುದನ್ನು ನೋಡಿಕೊಂಡು ಪೂರ್ಣ ಪ್ರಮಾಣದಲ್ಲಿ ಅಳವಡಿಸುವ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದರು.