ಚಾಮರಾಜನಗರ: ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ, ಪ್ರತಿಭಟನೆ
ಚಾಮರಾಜನಗರ, ಜುಲೈ 4: ಸಿದ್ದ ಉಡುಪು ತಯಾರಿಸುವ ಗಾರ್ಮೆಂಟ್ಸ್ ನ ಮಹಿಳಾ ಸಿಬ್ಬಂದಿ ಮೇಲೆ ಆಡಳಿತ ವರ್ಗದ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನು ಖಂಡಿಸಿ ಮಹಿಳಾ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಉತ್ತುವಳ್ಳಿ ಗ್ರಾಮದ ಬಳಿಯಿರುವ ಗಿರೀಶ್ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲ್ಲಿ ಈ ಘಟನೆ ನಡೆದಿದೆ. ಆಡಳಿತ ಮಂಡಳಿಯ ಮಂಜು ಎಂಬಾತ ಮಂಗಲ ಗ್ರಾಮದ ಲಕ್ಷ್ಮಿ ಎಂಬುವರ ಮೇಲೆ ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ವಿಚಾರ ಬುಧವಾರ ಬೆಳಕಿಗೆ ಬಂದಿದ್ದು, ಇದರಿಂದ ಆಕ್ರೋಶಗೊಂಡ ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಮುಂದೆ ಜಮಾಯಿಸಿ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಗಿರೀಶ್ ಗಾರ್ಮೆಂಟ್ಸ್ ನಲ್ಲಿ ಸುಮಾರು 900 ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಳೆದ ಏಳೆಂಟು ತಿಂಗಳಿಂದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಕಾರ್ಮಿಕರೊಂದಿಗೆ ಅಲ್ಲಿನ ಆಡಳಿತ ಮಂಡಳಿಯ ಕೆಲವರು ಅಸಭ್ಯವಾಗಿ ವರ್ತಿಸುವುದು, ಹಲ್ಲೆ ನಡೆಸುವುದು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅದರಂತೆ ಮಂಗಳವಾರ ಸಂಜೆ ಆಡಳಿತ ಮಂಡಳಿಯ ಮಂಜು ಎಂಬಾತ ಮಂಗಲ ಗ್ರಾಮದ ಲಕ್ಷ್ಮಿರವರ ಮೇಲೆ ಹಲ್ಲೆ ನಡೆಸಿದ್ದು, ಅವರು ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಾಗ ಹಲ್ಲೆ ನಡೆಸಿರುವ ವಿಚಾರ ಬಹಿರಂಗವಾಗಿದೆ.
ಇದರಿಂದ ಆಕ್ರೋಶಗೊಂಡ ಮಂಗಲ ಗ್ರಾಮಸ್ಥರು ಮತ್ತು ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ನಡೆಸಿ ಹಲ್ಲೆ ನಡೆಸಿದ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, "ಗಾರ್ಮೆಂಟ್ಸ್ ನಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ ದುಡಿಯಿರಿ ಅಂತ ಒತ್ತಡ ತರುತ್ತಿದ್ದಾರೆ. ಅಸಭ್ಯವಾಗಿ ವರ್ತಿಸುತ್ತಾರೆ," ಎಂದು ಆರೋಪಿಸಿದರು.
ಗಿರೀಶ್ ಗಾರ್ಮೆಂಟ್ಸ್ ಮೂಲತಃ ಬೆಂಗಳೂರಿನ ವಿಜಯನಗರದ ಲಕ್ಷ್ಮಿಕಾಂತ್ರವರ ಒಡೆತನದ್ದಾಗಿದೆ. ಗಡಿ ಭಾಗದಲ್ಲಿ ಗಾರ್ಮೆಂಟ್ ಆರಂಭಿಸಿ, ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದೇವೆ. ಇಲ್ಲಿ ಯಾರೋ ಮಾಡಿದ ತಪ್ಪಿಗೆ ಎಲ್ಲರಿಗೂ ತೊಂದರೆಯಾಗೋದು ಬೇಡ. ತಪ್ಪಿತಸ್ಥರನ್ನು ಕೆಲಸದಿಂದ ವಜಾಗೊಳಿಸಿದ್ದು, ಕಾರ್ಮಿಕರ ಹಿತವೇ ನಮಗೆ ಮುಖ್ಯವಾಗಿದೆ ಎಂದು ಗಾರ್ಮೆಂಟ್ಸ್ ನ ಶಿವಪ್ರಸಾದ್ ಹೇಳಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ, ಉಪವಿಭಾಗಾಧಿಕಾರಿ ಫೌಜಿಯಾ ತರುನ್ನುಂ, ತಹಸೀಲ್ದಾರ್ ಪುರಂದರ, ಡಿವೈಎಸ್ಪಿ ಜಯಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ.