ಬಂಡೀಪುರ ಅರಣ್ಯ ಸಂರಕ್ಷಣೆಗೆ ನಿವೃತ್ತ ಸೈನಿಕರ ನಿಯೋಜನೆ?
ಚಾಮರಾಜನಗರ, ಏಪ್ರಿಲ್ 21: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಕಾಪಾಡುವಲ್ಲಿ ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್ (ಎಸ್ಟಿಪಿಎಫ್) ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ನಿವೃತ್ತ ಯೋಧರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಎಲ್ಲವೂ ಸರಿ ಹೋದರೆ ಸುಮಾರು 25 ಮಂದಿ ನಿವೃತ್ತ ಸೈನಿಕರು ಎಸ್ಟಿಪಿಎಫ್ ಸೇರಲಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಸ್ಥಾಪಿಸಲಾಗಿರುವ ಎಸ್ಟಿಪಿಎಫ್ ಹುಲಿ ಸಂರಕ್ಷಿತ ಪ್ರದೇಶ ಮಾತ್ರವಲ್ಲದೆ ವಿವಿಧೆಡೆ ಹುಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸುವ ಮೂಲಕ ಅರಣ್ಯ ಇಲಾಖೆಗೆ ಒತ್ತಾಸೆಯಾಗಿ ನಿಂತಿದೆ.
ಅಕ್ರಮ ಚಟುವಟಿಕೆ ತಡೆಗೆ ಎಸ್ ಟಿಪಿಎಫ್ ಅಗತ್ಯ
ಈಗಾಗಲೇ ಎಸ್ಟಿಪಿಎಫ್ ನಲ್ಲಿ ನಿವೃತ್ತಿ ಹಾಗೂ ವರ್ಗಾವಣೆಯಿಂದಾಗಿ ಸುಮಾರು 60 ಹುದ್ದೆ ಖಾಲಿಯಿದೆ ಎನ್ನಲಾಗುತ್ತಿದ್ದು, ಇದು ಕಾರ್ಯ ನಿರ್ವಹಣೆಗೆ ಅಡಚಣೆಯಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಾದರೆ ಎಸ್ಟಿಪಿಎಫ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ನಿವೃತ್ತ ಯೋಧರನ್ನು ನಿಯೋಜಿಸಿದ್ದೇ ಆದರೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸುವ ಮತ್ತು ತುರ್ತು ಸಂದರ್ಭದಲ್ಲಿ ಎದೆಗುಂದದೆ ಕೆಲಸ ಮಾಡಲು ಸಾಧ್ಯವಾಗಲಿದೆ.
ಬಂಡೀಪುರದಲ್ಲಿ ಮನುಷ್ಯರ ಸುಳಿವಿಲ್ಲದೇ ಕಾಡುಪ್ರಾಣಿಗಳ ಸ್ವಚ್ಛಂದ ವಿಹಾರ
18 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದವರಿಗೆ ಆದ್ಯತೆ
ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್ನಲ್ಲಿ ಖಾಲಿಯಿರುವ ಹುದ್ದೆಗೆ ಹೊಸದಾಗಿ ನೇಮಕ ಮಾಡಿಕೊಂಡು ಅವರಿಗೆ ಮೂರು ತಿಂಗಳು ತರಬೇತಿ ನೀಡಿದರೂ ಇಲಾಖೆ ನಿರೀಕ್ಷಿಸಿದ ಪ್ರಮಾಣದಲ್ಲಿ ಸೇವೆ ಸಲ್ಲಿಸುವುದು ಅಸಾಧ್ಯ. ಪ್ರೊಟೆಕ್ಷನ್ ಫೋರ್ಸ್ಗೆ ಸೇರ್ಪಡೆ ನಂತರ ಆರ್ಎಫ್ಓ, ಡಿಆರ್ ಎಫ್ಓ ಹೇಳಿದಂತೆ ಕೆಲಸ ಮಾಡಲಷ್ಟೇ ಸೀಮಿತರಾಗಿರುತ್ತಾರೆ. ಎಷ್ಟೇ ತರಬೇತಿ ನೀಡಿದರೂ ಸೇನೆಯಲ್ಲಿ ಪಡೆದಷ್ಟು ಕಠಿಣ ತರಬೇತಿ ಅರಣ್ಯ ಇಲಾಖೆ ನೀಡಲು ಸಾಧ್ಯವಾಗದ ಕಾರಣ ಎಸ್ಟಿಪಿಎಫ್ ಗೆ ನಿವೃತ್ತ ಯೋಧರ ನೇಮಕ ಅಗತ್ಯ. ಏಕೆಂದರೆ ಭಾರತೀಯ ಭೂ ಸೇನೆಯಲ್ಲಿ ನಿಯಮಾನುಸಾರ 18 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧರಿಗಷ್ಟೇ ಆದ್ಯತೆ ನೀಡಲಾಗುತ್ತದೆ. ಅವರು ದೈಹಿಕವಾಗಿ ಸಮರ್ಥರಾಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ರಕ್ಷಣೆಗೆ ಮಾತ್ರ ಕಾರ್ಯ ವ್ಯಾಪ್ತಿ ಸೀಮಿತ
ಎಸ್ಟಿಪಿಎಫ್ ಪ್ರಸ್ತುತ ಆರ್ಎಫ್ಓ ಹಾಗೂ ಡಿಆರ್ ಎಫ್ ನಿಯಂತ್ರಣದಲಿದ್ದು, ಮುಂದೆ ನಿವೃತ್ತ ಯೋಧರು ಸೇರುವ ಹೊಸ ಪಡೆ ಸಿಸಿಎಫ್ ಸಿಎಫ್ ನಿಯಂತ್ರಣಕ್ಕೆ ಬರಲಿದೆ ಎನ್ನಲಾಗಿದೆ. ಇದನ್ನು ಪ್ರತ್ಯೇಕ ಫೋರ್ಸ್ ಆಗಿ ಪರಿಗಣಿಸಲಾಗುತ್ತದೆ ಕೇವಲ ಪ್ರೊಟೆಕ್ಷನ್ ಗೆ ಮಾತ್ರ ಇದರ ಕಾರ್ಯ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗುತ್ತದೆ ಎನ್ನಲಾಗಿದೆ.
ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆ; ಬಂಡೀಪುರದಲ್ಲಿ ಆನೆಗಳಿಂದ ಕಾರ್ಯಾಚರಣೆ
ಚರ್ಚೆ ನಂತರ ನೇಮಕ ಪ್ರಕ್ರಿಯೆ
ಈ ಕುರಿತು ಮಾತನಾಡಿರುವ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಅವರು, ಎಸ್ಟಿಪಿಎಫ್ ಸಿಬ್ಬಂದಿಗೆ ವೇತನ ನೀಡುವಂತೆ ಆಯಾ ಹುಲಿ ಸಂರಕ್ಷಿತ ಪ್ರದೇಶದ ಕಚೇರಿಯಿಂದಲೇ ವೇತನ ನೀಡಬಹುದಾಗಿದ್ದು, ಸೈನ್ಯದಲ್ಲಿ ಕಠಿಣ ತರಬೇತಿ ಪಡೆದಿರುವುದರಿಂದ ಅರಣ್ಯ ಪ್ರದೇಶದಲ್ಲಿ ಸರಾಗವಾಗಿ ನುಗ್ಗಲು ಸಾಧ್ಯವಿರುತ್ತದೆ. ಹೀಗಾಗಿ ನಿವೃತ್ತ ಯೋಧರ ನೇಮಕದ ಬಗ್ಗೆ ಆಲೋಚನೆ ಮಾಡಿದ್ದು ಎಚ್ ಒಪಿಸಿಸಿಎಫ್ ಹಾಗೂ ಪಿಸಿಸಿಎಫ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನೇಮಕ ಪ್ರಕ್ರಿಯೆ ಕುರಿತಂತೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.