ಚಾಮರಾಜನಗರ: ಅರಣ್ಯದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್
ಚಾಮರಾಜನಗರ, ನವೆಂಬರ್ 22: ಬಂಡೀಪುರ ಅರಣ್ಯ ವ್ಯಾಪ್ತಿಯ ಗಡಿಪ್ರದೇಶದಲ್ಲಿ ಆಗಾಗ್ಗೆ ಕಾಣಸಿಗುತ್ತಿರುವ ಆಗುಂತಕರು ನಕ್ಸಲರಾ ಅಥವಾ ಕಳ್ಳ ಬೇಟೆಗಾರರ ಎಂಬ ಜಿಜ್ಞಾಸೆ ಅರಣ್ಯ ಇಲಾಖೆಯನ್ನು ಕಾಡುತ್ತಿದ್ದು, ಇದೆಲ್ಲದಕ್ಕೂ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಇಂದು(ನ.22) ಮತ್ತು ನಾಳೆ(ನ.23) ನಕ್ಸಲ್ ನಿಗ್ರಹ ದಳ ಕೂಂಬಿಂಗ್ ನಡೆಸಲು ಸಜ್ಜಾಗಿದೆ.
ಚಾಮರಾಜನಗರಕ್ಕೆ ನಕ್ಸಲರ ಆಗಮನ?, ಪರಿಶೀಲನೆ
ಬಂಡೀಪುರ ಕಾಡಂಚಿನ ಕಾರ್ರಾಗಿಹುಂಡಿ ಗ್ರಾಮದಲ್ಲಿ ಮಂಗಲ ಗ್ರಾಮಪಂಚಾಯಿತಿ ಸದಸ್ಯ ಮಾದೇಶ್ ಎಂಬುವರ ಜಮೀನಿಗೆ ಆಗಮಿಸಿದ ಮೂವರು ಮುಸುಕುಧಾರಿಗಳು ಅಲ್ಲಿ ಕೆಲಸಮಾಡುತ್ತಿದ್ದ ಗಿರಿಜನ ಮಹಿಳೆ ಶಾಂತಿ ಎಂಬಾಕೆಯನ್ನು ಮನೆಯ ಬೀಗದ ಕೀಲಿಕೈಕೊಡುವಂತೆ ಕೇಳಿದ್ದ ಪ್ರಕರಣ ಒಂದೆಡೆಯಾದರೆ, ಮತ್ತೊಂದೆಡೆ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಜಮೀನು ಹೊಂದಿರುವ ಈಶ್ವರ ಎಂಬ ರೈತನಿಗೆ ಎದುರಾದ ಅರಣ್ಯ ಇಲಾಖೆಯ ಸಮವಸ್ತ್ರ ಧರಿಸಿದ್ದ 8ಜನ ಕಾಡಾ ಅಧ್ಯಕ್ಷ ನಂಜಪ್ಪ ಅವರ ಮನೆ ಎಲ್ಲಿದೆ ಎಂದು ಪ್ರಶ್ನಿಸಿದ್ದಲ್ಲದೆ, ಆತನ ಜೇಬಿನಿಂದ 1500 ರೂಪಾಯಿ ಕಸಿದುಕೊಂಡಿದ್ದರು ಎನ್ನಲಾಗಿದೆ.
ಗುಂಡ್ಲುಪೇಟೆಯ ಅರಣ್ಯದಂಚಿನಲ್ಲಿ ಪ್ರತ್ಯಕ್ಷರಾಗಿದ್ದು ನಕ್ಸಲರಾ?
ಈ ಸುದ್ದಿಯ ಬಳಿಕ ಎಲ್ಲೆಡೆ ಆತಂಕ ಶುರುವಾಗಿದ್ದು, ನಕ್ಸಲರು ಇಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರತೊಡಗಿದೆ. ಇದೆಲ್ಲದರ ನಡುವೆ ಬಂಡೀಪುರದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿರುವ ಕಾರಣ ಅವುಗಳ ಬೇಟೆಗೆ ಕಾಡುಗಳ್ಳರು ಬಂದಿದ್ದಾರಾ? ಎಂಬ ಸಂಶಯವೂ ಇಲ್ಲದಿಲ್ಲ. ಏಕೆಂದರೆ ಕೆಲವು ದಿನಗಳ ಹಿಂದೆ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬ ಅರಣ್ಯಪ್ರದೇಶದೊಳಗೆ ಪ್ರವೇಶಿಸಿದ್ದ ಘಟನೆ ನಡೆದಿತ್ತು. ಇದಾದ ಬಳಿಕ ಬಂಡೀಪುರ ಗಡಿಯಲ್ಲಿರುವ ತೆಪ್ಪಕಾಡು ವಲಯದಲ್ಲಿ ತಂತಿಯ ಉರುಳಿಗೆ ಸಿಲುಕಿ ಹುಲಿಮರಿಯೊಂದು ಸಾವನ್ನಪ್ಪಿತ್ತು. ಹೀಗಾಗಿ ಕಾಡುಗಳ್ಳರು ಕೂಡ ಸಕ್ರಿಯರಾಗಿರುವ ಅನುಮಾನವಿದೆ.
ಇದೆಲ್ಲದಕ್ಕೂ ಇತಿಶ್ರೀ ಹಾಡಬೇಕಾದರೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವವರು ನಕ್ಸಲರಾ ಎಂಬುದರ ಬಗ್ಗೆ ತಿಳಿಯಬೇಕಾದರೆ ನಕ್ಸಲ್ ಕೂಂಬಿಂಗ್ ಅನಿವಾರ್ಯವಾಗಿದೆ. ಹೀಗಾಗಿ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಹೆಚ್.ಡಿ.ಕೋಟೆ ಬೀಚನಹಳ್ಳಿ ಹಾಗೂ ಕೊಡಗಿನ ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಕ್ಸಲ್ ಪಡೆಯ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಸಿಬ್ಬಂದಿಗಳು ಆಗಮಿಸಿದ್ದು, ಇವರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆಯನ್ನು ಗುಂಡ್ಲುಪೇಟೆ ಪಟ್ಟಣ ಪೊಲೀಸರು ಮಾಡಿದ್ದಾರೆ.
ಈ ನಡುವೆ ಬಂಡೀಪುರ ಹುಲಿಯೋಜನೆಯ ಕುಂದಕೆರೆ, ಬಂಡೀಪುರ, ಮದ್ದೂರು ಹಾಗೂ ಮೂಲೆಹೊಳೆ ವಲಯಗಳಲ್ಲಿನ ಎಲ್ಲ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗಳಿಗೆ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ, ಪೊಲೀಸ್ ತರಬೇತಿ ಸಂಸ್ಥೆಯ ಅಧಿಕಾರಿಗಳಿಂದ ಬಂದೂಕು ಬಳಕೆ ಬಗ್ಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ.