ಬಂಡೀಪುರದಲ್ಲಿ ಮನುಷ್ಯರ ಸುಳಿವಿಲ್ಲದೇ ಕಾಡುಪ್ರಾಣಿಗಳ ಸ್ವಚ್ಛಂದ ವಿಹಾರ
ಚಾಮರಾಜನಗರ, ಏಪ್ರಿಲ್ 02: ಕೊರೊನಾ ವೈರಸ್ ಹರಡುವಿಕೆ ಭೀತಿಯಿಂದ ಲಾಕ್ ಡೌನ್ ಮಾಡಿರುವ ಕಾರಣ ಬಂಡೀಪುರದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಇಲ್ಲಿನ ವನ್ಯಪ್ರಾಣಿಗಳು ನಿರ್ಭಯವಾಗಿ ಸಂಚರಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ, ಮದ್ದೂರು, ಮೂಲೆಹೊಳೆ ಹಾಗೂ ಊಟಿ ರಸ್ತೆಯಲ್ಲಿ ಅಗತ್ಯ ವಸ್ತುಗಳ ವಾಹನಗಳ ಓಡಾಟ ಬಿಟ್ಟರೆ ಇನ್ಯಾವುದೇ ವಾಹನಗಳಿಗೆ ಸಂಚರಿಸಲು ಅವಕಾಶ ನೀಡದ ಕಾರಣದಿಂದಾಗಿ ಈ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಹೀಗಾಗಿ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡಿಕೊಂಡಿವೆ.
ಕೊರೊನಾದಿಂದ ಬಂಡೀಪುರ ಪ್ರವೇಶಕ್ಕೆ ನಿರ್ಬಂಧ
ಅಲ್ಲದೆ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಿರುವುದರಿಂದ ವಾಯು ಮಾಲಿನ್ಯವೂ ಇಲ್ಲದಾಗಿದೆ. ಪ್ರವಾಸಿಗರ ಅಬ್ಬರವಿಲ್ಲದೆ ಇರುವುದರಿಂದ ಪ್ರಾಣಿಗಳೆಲ್ಲವೂ ನಿರಾಳವಾಗಿವೆ. ಹಿಂದೆ ಸಾಲುಗಟ್ಟಲೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಅವುಗಳ ಶಬ್ದಕ್ಕೆ ಹೆದರಿ ಅರಣ್ಯ ಸೇರಿದ್ದ ಜಿಂಕೆ, ಕಾಡೆಮ್ಮೆ, ಕಡವೆಗಳಂತೂ ಇದೀಗ ರಸ್ತೆಬದಿಯತ್ತ ಬರುತ್ತಿವೆ.
ಮೊದಲು ಬಂಡೀಪುರ ಅರಣ್ಯದೊಳಕ್ಕೆ ಹಾದು ಹೋದ ರಸ್ತೆಗಳಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುವುದು, ಅರಣ್ಯ ಪ್ರವೇಶಿಸುವುದು ಮಾಡುತ್ತಿದ್ದರು. ಇದು ಪ್ರಾಣಿಗಳ ಏಕಾಂತತೆಗೆ ಅಡ್ಡಿಯಾಗುತ್ತಿತ್ತು. ಹಾಗಾಗಿ ಸಣ್ಣ ಪುಟ್ಟ ಪ್ರಾಣಿಗಳು ಅವಿತುಕೊಳ್ಳುತ್ತಿದ್ದವು. ಈಗ ವಾಹನಗಳನ್ನು ಬಿಡದ ಕಾರಣ ರಸ್ತೆಗಳು ಪ್ರಶಾಂತವಾಗಿವೆ.
ಬಂಡೀಪುರದ ರೆಸಾರ್ಟ್ಗಳಲ್ಲಿ ವಿದೇಶಿಗರು; ಭಯ ಬೇಡ ಎಂದ ಡಿಸಿ
ಬಂಡೀಪುರ, ಮದ್ದೂರು, ಮೂಲೆಹೊಳೆಯ ರಸ್ತೆಗಳಲ್ಲಿ ಜಿಂಕೆ, ಕಾಡೆಮ್ಮೆ, ನವಿಲು, ಕಾಡಾನೆಗಳು ಹಾದು ಹೋಗುತ್ತಿವೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಯಾವುದೂ ಇಲ್ಲದೆ ಎಲ್ಲವೂ ಸುಂದರವಾಗಿದೆ. ಇಲ್ಲಿರುವ ಪ್ರಾಣಿಗಳು ಕೂಡ ಈಗ ನೆಮ್ಮದಿಯಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಾ ಖುಷಿಯಾಗಿರುವುದು ಕಂಡು ಬರುತ್ತಿದೆ.