ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಪ್ರಾಣಿ ಬಲಿ"ಯಿಂದ ದೂರ ಈ ಚಿಕ್ಕಲ್ಲೂರು ಜಾತ್ರೆ

|
Google Oneindia Kannada News

ಚಾಮರಾಜನಗರ, ಜನವರಿ 04: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಭಕ್ತರು ಹಬ್ಬದ ಸಡಗರದಲ್ಲಿದ್ದರೆ, ಜಿಲ್ಲಾಡಳಿತ ಜಾತ್ರೆ ಕುರಿತಂತೆ ಹತ್ತು ಹಲವು ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದೆ.

ಹಿಂದಿನಿಂದಲೂ ಈ ಜಾತ್ರೆಯಲ್ಲಿ ಕೋಳಿ ಮತ್ತು ಕುರಿಗಳ ಬಲಿ ನಡೆಯುತ್ತಿತ್ತು. ಆದರೆ ಕೆಲವು ವರ್ಷಗಳಿಂದೀಚೆ ಇಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ. ಹೀಗಾಗಿ ಪ್ರಾಣಿ ಬಲಿ ನಡೆಸದಂತೆ ತಿಳಿವಳಿಕೆ ನೀಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಕಾವೇರಿಯವರು ಸ್ಥಳಕ್ಕೆ ಭೇಟಿ ನೀಡಿ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನಡೆಯದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಐದು ದಿನಗಳ ಕಾಲ ನಡೆಯುವ ಜಾತ್ರೆ

ಐದು ದಿನಗಳ ಕಾಲ ನಡೆಯುವ ಜಾತ್ರೆ

ಕೊಳ್ಳೆಗಾಲ ಪಟ್ಟಣದಿಂದ 26 ಕಿ.ಮೀ ದೂರದಲ್ಲಿರುವ ಚಿಕ್ಕಲ್ಲೂರಿನಲ್ಲಿ ಪ್ರತಿ ವರ್ಷವೂ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಬಾರಿ ಜನವರಿ 10 ರಿಂದ ಜಾತ್ರೆ ಆರಂಭವಾಗಿ 15ರವರೆಗೆ ನಡೆಯಲಿದೆ. ಇಲ್ಲಿನ ದೇಗುಲಕ್ಕೆ ಸುಮಾರು ಆರು ಕಿ.ಮೀ. ದೂರದಲ್ಲಿ ಕಾವೇರಿ ನದಿ ಹರಿಯುತ್ತದೆ. ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಲು ಭಕ್ತರು ಇಲ್ಲಿಗೆ ಬರುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲದೆ, ಹೊರ ಜಿಲ್ಲೆ, ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.

ರಂಗೋಲಿಗಳೇ ಈ ಜಾತ್ರೆಯ ಸ್ಪೆಷಲ್; ಅನ್ಯ ರಾಜ್ಯದವರಿಂದಲೂ ವೀಕ್ಷಣೆರಂಗೋಲಿಗಳೇ ಈ ಜಾತ್ರೆಯ ಸ್ಪೆಷಲ್; ಅನ್ಯ ರಾಜ್ಯದವರಿಂದಲೂ ವೀಕ್ಷಣೆ

 ಮಂಟೇಸ್ವಾಮಿಗಳ ಶಿಷ್ಯ ನೆಲೆಸಿದ್ದ ತಾಣ

ಮಂಟೇಸ್ವಾಮಿಗಳ ಶಿಷ್ಯ ನೆಲೆಸಿದ್ದ ತಾಣ

ಮಾದೇಶ್ವರರ ಸಮಕಾಲೀನರಾದ ಮಂಟೇಸ್ವಾಮಿಗಳ ಶಿಷ್ಯ ಸಿದ್ದಪ್ಪಾಜಿ ದೇವರು ನೆಲೆಸಿದ ತಾಣ ಚಿಕ್ಕನಲ್ಲೂರಾಗಿದ್ದು ಇಲ್ಲಿ ಸಿದ್ದಪ್ಪಾಜಿಗೆ ದೇಗುಲ ಕಟ್ಟಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ವರ್ಷಕ್ಕೊಮ್ಮೆ ಐದು ದಿನಗಳ ಜಾತ್ರೆಯನ್ನು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಜಾತ್ರೆಯಲ್ಲಿ ಮೊದಲ ದಿನ ಚಂದ್ರ ಮಂಡಲ, ಎರಡನೇ ದಿನ ದೊಡ್ಡವರ ಸೇವೆ, ಮೂರನೇ ದಿನ ಮುಡಿಸೇವೆ, ನಾಲ್ಕನೇ ದಿನ ಸಿದ್ದರ ಸೇವೆ (ಪಂಕ್ತಿ ಸೇವೆ) ಐದನೇ ದಿನ ಮುತ್ತತ್ತಿರಾಯನ ಸೇವೆಗಳು ನಡೆಯುತ್ತವೆ.

 ಕೋಳಿ, ಕುರಿ, ಮೇಕೆ ವಶಪಡಿಸಿಕೊಂಡಿದ್ದ ಪೊಲೀಸರು

ಕೋಳಿ, ಕುರಿ, ಮೇಕೆ ವಶಪಡಿಸಿಕೊಂಡಿದ್ದ ಪೊಲೀಸರು

ಐದನೇ ದಿನ ದೇವರಿಗೆ ಪ್ರಾಣಿ ಬಲಿ ನೀಡಿ ಬಳಿಕ ಅಲ್ಲಿಯೇ ಅಡುಗೆ ಮಾಡಿ ಪಂಕ್ತಿಯಲ್ಲಿ ಕುಳಿತು ಮಾಂಸಾಹಾರ ಸೇವಿಸುವ ಸಂಪ್ರದಾಯ ಹಿಂದೆ ಇತ್ತು. ಆ ನಂತರ ತಡೆಯೊಡ್ಡಿದ್ದರೂ 2017ರಲ್ಲಿ ದೇಗುಲದಿಂದ ಒಂದು ಕಿ.ಮೀ. ದೂರದಲ್ಲಿ ಭಕ್ತರು ಪಂಕ್ತಿಯಲ್ಲಿ ಕುಳಿತು ಮಾಂಸದೂಟ ಮಾಡುವ ಮೂಲಕ ಸಂಭ್ರಮಿಸಿದ್ದರು. ಇದಾದ ಬಳಿಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಪೊಲೀಸರು ಅರ್ಧ ದಾರಿಯಲ್ಲಿಯೇ ಭಕ್ತರನ್ನು ತಪಾಸಣೆ ನಡೆಸಿ ಕೋಳಿ, ಕುರಿ, ಮೇಕೆಗಳನ್ನು ವಶಪಡಿಸಿಕೊಂಡು ಜಾತ್ರೆ ಮುಗಿದ ಬಳಿಕ ಬಿಟ್ಟು ಕಳುಹಿಸಿದ್ದರು. ಆದ್ದರಿಂದ ಜಾತ್ರೆ ಸಂದರ್ಭ ಲಿಂಗೈಕ್ಯ ಸಿದ್ದಪ್ಪಾಜಿ ಗದ್ದುಗೆಗೆ ಕಜ್ಜಾಯ, ಕಡಲೆಪುರಿ ಅರ್ಪಿಸುತ್ತಾರೆ. ದೇವಾಲಯದ ಮುಂದೆ ಹಾಗೂ ಚಂದ್ರಮಂಡಲದ ಕಟ್ಟೆಯಲ್ಲಿ ಕಾಯಿ ಒಡೆದು, ಧೂಪ, ದೀಪ ಬೆಳಗಿ ಪೂಜೆ ಸಲ್ಲಿಸುತ್ತಾರೆ.

ಮಾರ್ಚ್ 3ರಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭಮಾರ್ಚ್ 3ರಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ

 ಮೆರವಣಿಗೆಯೊಂದಿಗೆ ಜಾತ್ರೆಗೆ ತೆರೆ

ಮೆರವಣಿಗೆಯೊಂದಿಗೆ ಜಾತ್ರೆಗೆ ತೆರೆ

ಹುಲಿವಾಹನವನ್ನು ಹೂವಿನಿಂದ ಅಲಕರಿಸಿ, ಮಠದ ಬಸವನನ್ನು ಮುಂದೆ ಬಿಟ್ಟುಕೊಂಡು ಸತ್ತಿಗೆ ಸೂರಪಾನಿ, ಕೊಂಬುಕಹಳೆ, ಜಾಗಟೆ, ತಮಟೆಯೊಂದಿಗೆ ದೇವಾಲಯದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ವಿಭೂತಿ ಧರಿಸಿ ಸಿದ್ದಪ್ಪಾಜಿ ಸೇವೆ ಮಾಡುವ ನೀಲಗಾರರು ಕೊನೆಯ ದಿನ ನಾಮಧರಿಸಿ ಮುತ್ತತ್ತಿರಾಯನ ಸೇವೆಯನ್ನು ಮಾಡುವುದರೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

ಇತರೆ ಕಡೆಗಳಲ್ಲಿ ನಡೆಯುವ ಜಾತ್ರೆಗಳಿಗೆ ಹೋಲಿಸಿದರೆ ಚಿಕ್ಕಲ್ಲೂರು ಜಾತ್ರೆ ವಿಭಿನ್ನ ಮತ್ತು ವಿಶಿಷ್ಟ. ಹೀಗಾಗಿ ಯಾವುದೇ ರೀತಿಯ ತೊಂದರೆಗಳಾಗದಂತೆ ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಕ್ರಮ ಕೈಗೊಂಡಿದೆ.

English summary
Preperations has begun for the famous Chikkallur Fair at kollegala Taluk in Chamarajanagar district. Animal sacrifice has been banned for some years in this fair,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X