ಚಾಮರಾಜನಗರ: ಮಗುವಿಗೆ ಬರೆ ಹಾಕಿದ ಅಂಗನವಾಡಿ ಸಹಾಯಕಿ
ಚಾಮರಾಜನಗರ, ನವೆಂಬರ್ 21 : ಅಂಗನವಾಡಿ ಕೇಂದ್ರದ ಅಡುಗೆ ಮನೆಗೆ ನುಗ್ಗಿತೆಂಬ ಕೋಪದಲ್ಲಿ ಮಗುವಿಗೆ ಅಂಗನವಾಡಿ ಸಹಾಯಕಿ ಬಿಸಿ ಸೌಟಿನಿಂದ ಬರೆ ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಅಂಗನವಾಡಿಯ ಸಹಾಯಕಿ ಶಿವಮಲ್ಲಮ್ಮ ಎಂಬಾಕೆಯೇ ಮಗುವಿಗೆ ಬರೆ ಎಳೆದಾಕೆ. ಇದರಿಂದ ಮಗು ಹರ್ಷಿತ್ ನ ಕುತ್ತಿಗೆಯ ಭಾಗ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸೋಮವಾರವೇ ನಡೆದಿದ್ದರೂ ಮಂಗಳವಾರ ಬೆಳಕಿಗೆ ಬಂದಿದೆ.
ಮಗುವಿನ ಪೋಷಕರು ಅಂಗನವಾಡಿ ಸಹಾಯಕಿ ಶಿವಮಲ್ಲಮ್ಮ ವಿರುದ್ದ ದೂರು ದಾಖಲಿಸಿದ್ದಾರೆ. ಮಗು ದಲಿತ ಸಮುದಾಯಕ್ಕೆ ಸೇರಿದ್ದರಿಂದ ಅಂಗನವಾಡಿಗೆ ನುಗ್ಗಿದಕ್ಕೆ ಶಿವಮಲ್ಲಮ್ಮ ಬರೆಹಾಕಿದ್ದಾರೆ ಎಂದು ಮಗುವಿನ ಪೋಷಕರು ದೂರಿದ್ದಾರೆ.
ಮಕ್ಕಳನ್ನು ನೋಡಲೆಂದೇ ಸರ್ಕಾರ ಸಹಾಯಕಿಯನ್ನು ನೇಮಿಸಿದೆ. ಆದರೆ, ಮಕ್ಕಳು ಗಲಾಟೆ ಮಾಡಿದ್ದಾರೆಂದು ಬರೆ ಹಾಕುವುದೆಷ್ಟು ಸರಿ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಮಲ್ಲಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.