ಚಾಮರಾಜನಗರ: ಬೂದಂಬಳ್ಳಿ ಅಂಗನವಾಡಿ ಶಿಥಿಲ, ಜೀವಭಯದಲ್ಲಿ ಮಕ್ಕಳು
ಚಾಮರಾಜನಗರ, ಜೂ 4: ಶಾಲೆಗಳು ಪ್ರಾರಂಭವಾಗಿ ಮಕ್ಕಳು ಸಂಭ್ರಮ-ಸಡಗರದಿಂದ ತರಗತಿಗೆ ಹಾಜರಾಗುತ್ತಿದ್ದರೇ ಇಲ್ಲಿನ ಮಕ್ಕಳು ಭಯದಿಂದಲೇ ಅಂಗನವಾಡಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ ತಾಲೂಕಿನ ಬೂದಂಬಳ್ಳಿ ಗ್ರಾಮದ ಅಂಗನವಾಡಿ ಕೇಂದ್ರವು ಶಿಥಿಲಗೊಂಡು ಛಾವಣಿಯ ಕಾಂಕ್ರೀಟ್ ಪದರಗಳು ಉದುರಿ ಬೀಳುತ್ತಿರುವುದರಿಂದ ಗ್ರಾಮದ ಮಾರಿಗುಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ಆಟ-ಪಾಠ ಹೇಳಿಕೊಡಲಾಗುತ್ತಿದೆ. ಇನ್ನು, ಈ ಬಗ್ಗೆ ಗ್ರಾಮದ ವೀರಭದ್ರಸ್ವಾಮಿ ಪ್ರತಿಕ್ರಿಯಿಸಿ, ಅಂಗನವಾಡಿ ದುರಸ್ತಿಗೆ ಹಲವು ಬಾರಿ ಅನುದಾನ ನೀಡಿ ದುರಸ್ತಿ ಮಾಡಿದ್ದರೂ ಕಳಪೆ ಕಾಮಗಾರಿಯಿಂದ ಈ ಅವ್ಯವಸ್ಥೆ ನಿರ್ಮಾಣವಾಗಿದೆ. ಜೀವದ ಜೊತೆ ಆಟ ಆಡುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.
ಬಯಲಲ್ಲಿ ಪಾಠ:
ಇನ್ನು, ಚಾಮರಾಜನಗರ ತಾಲೂಕಿನ ಮೇಲಾಜಿಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಆರನೇ ತರಗತಿ ವರೆಗೆ ಕೇವಲ ಎರಡು ಕೊಠಡಿಗಳಿವೆ. ಅದರಲ್ಲಿ ಒಂದು ಕೊಠಡಿ ಮುಖ್ಯೋಪಾಧ್ಯಾಯರ ಕಚೇರಿ ಹಾಗು ಸ್ಟೋರ್ ರೂಂ ಸಹ ಆಗಿದೆ. ಮೂವರು ಶಿಕ್ಷಕರಿದ್ದು ಇರುವ ಎರಡು ಕೊಠಡಿಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಕೂರಿಸಿ ಪಾಠ ಮಾಡಲಾಗದ ದುಸ್ಥಿತಿ ಇದೆ. ಇಬ್ಬರು ಶಿಕ್ಷಕರು ಎರಡು ಕೊಠಡಿಯೊಳಗೆ ಪಾಠ ಮಾಡಿದರೆ ಇನ್ನೊಬ್ಬ ಶಿಕ್ಷಕರು ಬಯಲಿನಲ್ಲಿ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ. ಮಳೆ ಬಂದಂತಹ ಸಂದರ್ಭದಲ್ಲಿ ಶಾಲೆಯ ಹೊರಾಂಗಣದ ಆವರಣದಲ್ಲಿ ಪಾಠ ಮಾಡಲಾಗುತ್ತದೆ. ಆರನೇ ತರಗತಿವರೆಗೆ ಮಂಜೂರಾಗಿರುವ ತರಗತಿಗಳಿಗೆ ತಕ್ಕಂತೆ ಶಾಲಾ ಕೊಠಡಿಗಳು ಇಲ್ಲದಿರುವುದು ಶಿಕ್ಷಕರಲ್ಲಿ ಹಾಗು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.
Recommended Video
ಹೊರಗಡೆ ಮೈದಾನದಲ್ಲಿ ಮರದ ಕೆಳಗೆ ಪಾಠ ಮಾಡುವುದರಿಂದ ಮಕ್ಕಳ ಏಕಾಗ್ರತೆಗೆ ಭಂಗವಾಗಿ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ತಮ್ಮ ಅಳಲನ್ನು ವಿದ್ಯಾರ್ಥಿಗಳು ತೋಡಿಕೊಳ್ಳುತ್ತಾರೆ. ಜಿಲ್ಲೆಯ ಹಲವು ಶಾಲೆಗಳು ಶಿಥಿಲಗೊಂಡಿದ್ದು ಕೆಲವೆಡೆ ಮಳೆ ಬಂದಾಗ ಕೊಠಡಿಗೆ ನೀರು ತುಂಬಿಕೊಂಡು ಅವಾಂತರ ಸೃಷ್ಟಿಸುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಕಲಿಕಾ ವಾತಾವರಣ ಸೃಷ್ಟಿಸಬೇಕಿದೆ.