ಪಾಳುಬಿದ್ದಿದ್ದ ಬಾವಿಯನ್ನು ಪುನಶ್ಚೇತನಗೊಳಿಸಿದ ಹಂಗಳ ಗ್ರಾಮಸ್ಥರು!
ಚಾಮರಾಜನಗರ, ಅಕ್ಟೋಬರ್.03: ಪಾಳುಬಿದ್ದು ಅವನತಿಯತ್ತ ಸಾಗುತ್ತಿದ್ದ ಪುರಾತನ ಕಾಲದ ಬಾವಿಯೊಂದನ್ನು ಶುಚಿಗೊಳಿಸುವ ಮೂಲಕ ಜನಬಳಕೆಗೆ ಅನುಕೂಲವಾಗುವಂತೆ ಮಾಡಿ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಲ್ಲಿ ಬರುವ ಹಂಗಳ ಗ್ರಾಮದಲ್ಲಿ ದೊಡ್ಡಕೆರೆಯಿದೆ. ಕೆರೆಯು ಈ ಬಾರಿ ಸುರಿದ ಮಳೆಗೆ ತುಂಬಿ ನಳನಳಿಸುತ್ತಿದೆ. ಕೆರೆ ತುಂಬಿರುವುದು ಗ್ರಾಮದ ಜನರಿಗೆ ಹರ್ಷತಂದಿದೆ.
ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ
ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಈ ವ್ಯಾಪ್ತಿಯಲ್ಲಿ ಕೆರೆಗಳಲ್ಲಿ ನೀರಿಲ್ಲದೆ ಜನ ಜಾನುವಾರು ಪರದಾಡುವಂತಾಗಿತ್ತು. ಆದರೆ ಈ ಬಾರಿ ದೇವರ ಅನುಗ್ರಹದಿಂದ ಕೆರೆಗಳು ತುಂಬಿದ್ದು ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದಲ್ಲಿರುವ ದೊಡ್ಡಕೆರೆಯ ಪಕ್ಕದಲ್ಲಿಯೇ ಪುರಾತನ ಕಾಲದ್ದು ಎನ್ನಲಾದ ಸಿಹಿನೀರಿನ ಬಾವಿಯಿದೆ. ಈ ಬಾವಿಯನ್ನು ತೆಗೆದಿರುವ ರೀತಿಯನ್ನು ನೋಡಿದರೆ ಪುರಾತನದು ಎನ್ನುವುದು ಮನದಟ್ಟಾಗುತ್ತದೆ.
ಶ್ರಮದಾನ ಮಾಡುವ ಮೂಲಕ ಗಮನಸೆಳೆದ ಮಡಿಕೇರಿ ಪೊಲೀಸರು
ಈ ಬಾವಿಯಲ್ಲಿ ಸದಾ ನೀರಿದ್ದು ಇದನ್ನು ಜನ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚೆಗೆ ಮನೆಮನೆಗೆ ನೀರಿನ ನಲ್ಲಿ ಬಂದಿದ್ದರಿಂದ ಇಲ್ಲಿಂದ ನೀರನ್ನು ಕೊಂಡೊಯ್ಯಲು ಜನ ಯಾರೂ ಬರುತ್ತಿರಲಿಲ್ಲ.
ಒಂದು ಕಾಲದಲ್ಲಿ ಜನರ ದಾಹ ತೀರಿಸುತ್ತಿದ್ದ ಮತ್ತು ಗ್ರಾಮದಲ್ಲಿ ಯಾವುದೇ ರೀತಿಯ ಶುಭಕಾರ್ಯಗಳಿಗೆ ಹೊಸನೀರು ಬೇಕೆಂದರೆ ಇದೇ ಬಾವಿಗೆ ಜನ ಕೊಡ ಹಿಡಿದು ಬರುತ್ತಿದ್ದರು ಇಂತಹ ಬಾವಿ ಇಂದು ಅವನತಿಯತ್ತ ಸಾಗುತ್ತಿರುವುದನ್ನು ಗಮನಿಸಿದ ಗ್ರಾಮದ ಜನ ಅದನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಪಣತೊಟ್ಟು ನಿಂತರು.
ಜನ ಯಾರೂ ಇದನ್ನು ಉಪಯೋಗಿಸದಿದ್ದ ಕಾರಣ ಬಾವಿಯ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದವು. ಮೊದಲು ಬಾವಿಯಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಿದ ಜನರು ಬಳಿಕ ಬಾವಿಯನ್ನು ಶುದ್ಧಗೊಳಿಸುವ ಕಾರ್ಯಕ್ಕೆ ಮುಂದಾದರು.
ಬಾವಿಯೊಳಗೆ ಎಸೆದಿದ್ದ ಪ್ಲಾಸ್ಟಿಕ್ ವಸ್ತುಗಳು, ಕಸ ಕಡ್ಡಿ, ಚಪ್ಪಲಿ, ಸೇರಿದಂತೆ ಅದರ ಒಡಲಲ್ಲಿ ಇದ್ದ ತ್ಯಾಜ್ಯ ವಸ್ತುಗಳನ್ನೆಲ್ಲ ತೆಗೆಯುವ ಕಾರ್ಯಕ್ಕೆ ಮುಂದಾದರು.
ಪ್ಲಾಸ್ಟಿಕ್ ವಿರುದ್ಧ ಗಾಂಧಿಗಿರಿ: ಪ್ಲಾಗ್ ರನ್ಗೆ ನೀವೂ ಹೆಜ್ಜೆ ಹಾಕಿ
ಡೀಸೆಲ್ ಮೋಟಾರ್ ಮೂಲಕ ಬಾವಿಯಲ್ಲಿದ್ದ ನೀರನ್ನು ಹೊರಹಾಕಿ ಬಳಿಕ ಬಾವಿಯೊಳಗೆ ಇಳಿದು ಅಲ್ಲಿದ್ದ ಕಸವನ್ನು ತೆಗೆದಿದ್ದಲ್ಲದೆ, ಬಾವಿಯ ಗೋಡೆಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಸುಮಾರು ಎಂಟು ಗಂಟೆಗಳ ಕಾಲ ಶ್ರಮದಾನ ಮಾಡಿದ ಜನರು ಕೊನೆಗೂ ಅವನತಿಯತ್ತ ತಲುಪಲಿದ್ದ ಪುರಾತನ ಬಾವಿಗೆ ಪುನಶ್ಚೇತನ ನೀಡುವಲ್ಲಿ ಯಶಸ್ವಿಯಾದರು. ಬಾವಿಯನ್ನು ಶುದ್ಧಿಗೊಳಿಸಿ ಅದಕ್ಕೆ ಸುಣ್ಣತುಂಬಿ ಬಳಿಕ ಮೇಲ್ಭಾಗವನ್ನು ಹಾಸು ಕಲ್ಲಿನಿಂದ ಮುಚ್ಚಿದರು.
ಸುಮಾರು ಎಂಟುಗಂಟೆಗಳ ಕಾಲ ನಡೆದ ಗ್ರಾಮಸ್ಥರ ಶ್ರಮದಾನ ಫಲಿಸಿದೆ. ಗ್ರಾಮದ ಜನ ಖುಷಿಪಡುತ್ತಿದ್ದಾರೆ.