OneIndia Exclusive ಸಂಸದ ಶ್ರೀನಿವಾಸ ಪ್ರಸಾದ್ ಹೆಸರಲ್ಲಿ ವರ್ಗಾವಣೆ ದಂಧೆ?
ಚಾಮರಾಜನಗರ, ಆಗಸ್ಟ್ 19: ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಹೆಸರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶ್ರೀನಿವಾಸ ಪ್ರಸಾದ್ ಅವರ ಲೆಟರ್ ಹೆಡ್ ಬಳಸಿಕೊಂಡು ಅವರ ಆಪ್ತ ಸಹಾಯಕರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಕ್ಷೇತ್ರದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ.
ಶ್ರೀನಿವಾಸ ಪ್ರಸಾದ್ ಅವರ ಆಪ್ತ ಸಹಾಯಕರಾಗಿರುವ ಪ್ರಸನ್ನ ಶ್ರೀಕಂಠದತ್ತ ಎಂಬುವವರು ಸಂಸದರ ಗಮನಕ್ಕೆ ಬಾರದಂತೆಯೇ ಅವರ ಹೆಸರಿನಲ್ಲಿ ವರ್ಗಾವಣೆಗೆ ಶಿಫಾರಸುಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಶ್ರೀನಿವಾಸ್ ಪ್ರಸಾದ್ ಅವರ ಲೆಟರ್ ಹೆಡ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ರಬರೆದರೂ ಅದು ಅವರನ್ನು ತಲುಪುತ್ತಿಲ್ಲ. ಅವರ ಆಪ್ತ ಸಹಾಯಕರೇ ಅದನ್ನು ಪಡೆದುಕೊಂಡು ನಾಶಪಡಿಸುತ್ತಿದ್ದಾರೆ ಎಂದು ದೂರಲಾಗಿದೆ.
ದೇವೇಗೌಡರಿಗೆ ಸಿದ್ದರಾಮಯ್ಯ ದುಷ್ಮನ್: ಶ್ರೀನಿವಾಸ್ ಪ್ರಸಾದ್
'ಶ್ರೀನಿವಾಸ ಪ್ರಸಾದ್ ಅವರು ಮುಗ್ಧರು. ಅವರಿಗೆ ತಮ್ಮ ಹಿಂದೆ ಈ ರೀತಿ ಅಕ್ರಮಗಳು ನಡೆಯುತ್ತಿರುವುದು ತಿಳಿಯುತ್ತಿಲ್ಲ. ಅವರಿಗೆ ಇದರ ಬಗ್ಗೆ ವಿವರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಶ್ರೀನಿವಾಸ ಪ್ರಸಾದ್ ಅವರು ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಇದೇ ಅವರ ಕೊನೆಯ ಚುನಾವಣೆಯಾಗಿದೆ. ಅವರು ಶುದ್ಧ ಹಸ್ತರು. ಆದರೆ, ಸುತ್ತಲಿನ ಜನರಿಂದ ಅವರಿಗೆ ಕಳಂಕ ಬರುತ್ತಿದೆ. ಅವರು ತಮ್ಮ ರಾಜಕೀಯ ಬದುಕಿನಲ್ಲಿ ಈ ರೀತಿ ಕೆಟ್ಟ ಹೆಸರು ಪಡೆದುಕೊಂಡು ನಿವೃತ್ತರಾಗುವುದು ನಮಗೆ ಇಷ್ಟವಿಲ್ಲ. ಅವರ ಆಪ್ತ ಸಹಾಯಕರ ಆಟಾಟೋಪಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ' ಎಂದು 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರ ಆಪ್ತರ ವಲಯದಲ್ಲಿರುವ ಕೆಲವರು ಬೇಸರ ಹಂಚಿಕೊಂಡರು.
ಶ್ರೀನಿವಾಸ ಪ್ರಸಾದ್ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಈ ಕುರಿತು ಫೇಸ್ಬುಕ್ನಲ್ಲಿ ವಿರೋಧಗಳನ್ನು ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ಕೆಟ್ಟ ಹೆಸರು ಬಾರದಂತೆ ತಡೆಯುವುದು ತಮ್ಮ ಉದ್ದೇಶವಾಗಿದೆ. ಅವರು ಬೇಗನೆ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.
ಅವರು ಗೆದ್ದಿರುವುದು ಅಭಿಮಾನದಿಂದ
'ಶ್ರೀನಿವಾಸ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಿಂದಲೂ ಈ ರೀತಿಯ ಅಕ್ರಮಗಳು ನಡೆಯುತ್ತಿವೆ. ಅವರು ಗೆದ್ದಿದ್ದು ಅಭಿಮಾನದ ಕಾರಣದಿಂದಲೇ ಹೊರತು, ಅಭಿವೃದ್ಧಿ ಕಾರ್ಯಗಳಿಂದಾಗಿ ಅಲ್ಲ. ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿಲ್ಲ ಎಂಬ ಆರೋಪವಿದೆ. ಅವರು ಈ ಹಿಂದೆ ನಂಜನಗೂಡಿನಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಆ ಸೋಲಿಗೆ ಜನರಿಗೆ ಸ್ಪಂದಿಸದೆ ಇರುವ ಅವರ ನಡೆ ಪ್ರಮುಖ ಕಾರಣವಾಗಿದ್ದರೂ, ಅವರ ಆಪ್ತ ಸಹಾಯಕರ ಅಕ್ರಮ ಚಟುವಟಿಕೆಗಳು ಸಹ ಕಾರಣಗಳಲ್ಲಿ ಒಂದು' ಎಂದು ಅವರು ಆರೋಪಿಸಿದರು.
ಪ್ರಸಾದ್ ಸೋಲಿಗೆ ಪ್ರಯತ್ನಿಸಿದ್ದ ಆರೋಪ
ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸೋಲಿಸಲು ಆಪ್ತ ಸಹಾಯಕರೇ ಕುತಂತ್ರ ನಡೆಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅನೇಕರು ಆರೋಪಿಸಿದ್ದಾರೆ.
'ಸಂಸದರ ಆಪ್ತ ಸಹಾಯಕರು ಎದುರಾಳಿ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ನ ಆರ್. ಧ್ರುವನಾರಾಯಣ್ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿ ಇದ್ದರು. ಬಿಜೆಪಿಯ ಸಭೆಗಳು, ಶ್ರೀನಿವಾಸ ಪ್ರಸಾದ್ ಅವರು ಚುನಾವಣೆಯನ್ನು ಎದುರಿಸಲು ನಡೆಸುತ್ತಿರುವ ಕಾರ್ಯತಂತ್ರಗಳ ಬಗ್ಗೆ ಅವರು ಮಾಹಿತಿ ನೀಡುತ್ತಿದ್ದರು. ಸಂಸದರಾಗಿ ಆಯ್ಕೆಯಾದರೆ ನಿಮ್ಮನ್ನು ಆಪ್ತ ಸಹಾಯಕರನ್ನಾಗಿ ತೆಗೆದುಕೊಳ್ಳುತ್ತೇನೆ ಎಂದು ಧ್ರುವನಾರಾಯಣ್ ಭರವಸೆ ನೀಡಿದ್ದರು. ಆದರೆ ಇದಾವುದರ ಅರಿವಿಲ್ಲದ ಸಂಸದರು ಪ್ರಸನ್ನ ಅವರನ್ನೇ ತಮ್ಮ ಆಪ್ತ ಸಹಾಯಕರನ್ನಾಗಿ ಮುಂದುವರಿಸಿದ್ದಾರೆ' ಎಂದು ದೂರಲಾಗಿದೆ.
ಕಾಂಗ್ರೆಸ್ ಸೋಲು ಸುಲಭವಾಗಿರಲಿಲ್ಲ: ಶ್ರೀನಿವಾಸ್ ಪ್ರಸಾದ್
ಸಹಾಯಕರ ನೇಮಕಕ್ಕೆ ಅವಕಾಶವೇ ಇಲ್ಲ
ಸಂಸದರಿಂದ ಸರ್ಕಾರದಿಂದ ಅಧಿಕೃತವಾಗಿ ಒಬ್ಬ ಸಹಾಯಕರನ್ನು ನೇಮಿಸಲಾಗುತ್ತದೆ. ಅದಲ್ಲದೆ, ಬೇರೊಬ್ಬರನ್ನು ವೈಯಕ್ತಿಕವಾಗಿ ಸಂಸದರು ಸಹಾಯಕರನ್ನಾಗಿ ನೇಮಿಸಿಕೊಂಡಿರುತ್ತಾರೆ. ಆದರೆ, ಕಾನೂನಿನ ಪ್ರಕಾರ ಸರ್ಕಾರಿ ಸೇವೆಯಿಂದ ನಿವೃತ್ತರಾದ ಯಾವುದೇ ಅಧಿಕಾರಿಗಳನ್ನು ಈ ರೀತಿಯ ಹುದ್ದೆಗಳಿಗೆ ನೇಮಿಸಿಕೊಳ್ಳುವಂತಿಲ್ಲ. ಏಕೆಂದರೆ ಅವರು ಸರ್ಕಾರದ ಪಿಂಚಣಿ ಪಡೆಯುತ್ತಿರುತ್ತಾರೆ. ಪ್ರಸನ್ನ ಅವರು ನಿವೃತ್ತ ಎಸ್ಡಿಎ ಆಗಿದ್ದಾರೆ. ಹೀಗಾಗಿ ಅವರ ನೇಮಕವೇ ಕಾನೂನುಬಾಹಿರವಾಗಿದೆ. ಇಷ್ಟಲ್ಲದೆ, ಮೈಸೂರಿನ ಕಾಡಾದ ಕಟ್ಟಡದಲ್ಲಿ ಆಪ್ತ ಸಹಾಯಕ ಕಚೇರಿಯನ್ನು ಸಹ ಆರಂಭಿಸಲಾಗಿದೆ. ಇದು ಕೂಡ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಪ್ತ ಸಹಾಯಕರ ನೇಮಕದ ಕುರಿತು ಜಿಲ್ಲಾಧಿಕಾರಿಗಳಿಂದ ಅಧಿಕೃತ ಪತ್ರ ಬರಬೇಕು. ಆದರೆ, ಇಲ್ಲಿ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಅನುಮೋದನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಸಂಸದರ ಲೆಟರ್ಹೆಡ್ನಲ್ಲಿ ವರ್ಗಾವಣೆ ಶಿಫಾರಸು
ಕೊಳ್ಳೇಗಾಲದ ಕೆಸಿಸಿಯಲ್ಲಿ ಕ್ಲೀನರ್ ಕಾರ್ಯ ನಿರ್ವಹಿಸುತ್ತಿದ್ದ ಎಚ್.ಎಚ್. ಕಾಮರಾಜು ಅವರನ್ನು ಟಿ.ನರಸೀಪುರದ ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ವರ್ಗಾವಣೆ ಮಾಡುವಂತೆ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ಗೆ ಅವರು ಶ್ರೀನಿವಾಸ ಪ್ರಸಾದ್ ಅವರ ಲೆಟರ್ ಹೆಡ್ನಲ್ಲಿ ಶಿಫಾರಸು ಮಾಡಲಾಗಿದೆ.
ಹಾಗೆಯೇ ಚಾಮರಾಜನಗರ ಘಟಕದ ಕೆಎಸ್ಆರ್ಟಿಸಿ ಬಸ್ ಚಾಲಕ ಅಲ್ತಾಫ್ ಖಾನ್ ಎಂಬುವವರನ್ನು ಕೊಳ್ಳೇಗಾಲ ಘಟಕಕ್ಕೆ ವರ್ಗಾವಣೆ ಮಾಡುವಂತೆ ಚಾಮರಾಜನಗರ ಜಿಲ್ಲಾ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಈ ಎರಡು ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ರೀತಿ ಆದೇಶ ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ? ಮುಂದಿನ ದಿನಗಳಲ್ಲಿ ಈ ತರಹದ ಅಧಿಕಾರ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡು ಸಂಸದರ ಹೆಸರಿಗೆ ಚ್ಯುತಿ ತರಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಗೆ ಗೌರವ ಕೊಡದ ಸಿದ್ದರಾಮಯ್ಯ ಒಬ್ಬ ಅನಾಗರಿಕ: ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್ಗೆ ಜನತೆಯ ಪತ್ರ
ಸಂಸದರ ಜತೆಗಿದ್ದೇ ಅವರಿಗೆ ದ್ರೋಹ ಬಗೆಯಲಾಗುತ್ತಿದೆ. ಅವರು ಆಪ್ತ ಸಹಾಯಕರು ಮೀರ್ ಸಾದಕ್ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಚಾಮರಾಜನಗರದ ಕೆಲವು ಜನರು ಶ್ರೀನಿವಾಸ ಪ್ರಸಾದ್ ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಪ್ರಸನ್ನ ಶ್ರೀಕಂಠದತ್ ಅವರು ಸಿ.ಎಸ್. ಬಸವರಾಜು ಎಂಬುವವರ ಮೂಲಕ ಧ್ರುವನಾರಾಯಣ್ಗೆ ಪಕ್ಷದೊಳಗಿನ ವಿಚಾರಗಳನ್ನು ತಿಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಅವರನ್ನು ಸಹಾಯಕ ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಮನವಿ ಮಾಡಿದ್ದಾರೆ. ಆ ಪತ್ರದ ಪ್ರತಿ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ.