ಬಂಡೀಪುರದಲ್ಲಿ ಏಳು ಸಾವಿರ ಎಕರೆ ಅರಣ್ಯ ಒತ್ತುವರಿಯಾಗಿದೆಯೇ?
ಚಾಮರಾಜನಗರ, ಜುಲೈ 17: ಕರ್ನಾಟಕ, ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡಂತೆ ವಿಶಾಲವಾಗಿ ಹರಡಿಕೊಂಡಿರುವ ಬಂಡೀಪುರ ಅಭಯಾರಣ್ಯ ಪ್ರದೇಶದ ಸಾವಿರಾರು ಎಕರೆ ಪ್ರದೇಶಗಳು ಒತ್ತುವರಿಯಾಗಿವೆ ಎಂಬ ಆರೋಪಗಳು ಕೇಳಿಬಂದಿದೆ.
ಅರಣ್ಯದಂಚಿನಲ್ಲಿರುವ ಪ್ರದೇಶಗಳನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಫಾರ್ಮ್ ಹೌಸ್, ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ. ಬಹಳಷ್ಟು ಕಡೆಗಳಲ್ಲಿ ರೈತರು ಕೃಷಿಗಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ತೆರವುಗೊಳಿಸಿರುವ ಅರಣ್ಯ ಇಲಾಖೆ ಪ್ರಭಾವಿಗಳ ವಿಚಾರದಲ್ಲಿ ಮಾತ್ರ ಜಾಣಕುರುಡುತನ ತೋರುತ್ತಿರುವುದು ಎದ್ದು ಕಾಣುತ್ತಿದೆ.
6946 ಎಕರೆ ಅರಣ್ಯ ಪ್ರದೇಶ ಒತ್ತುವರಿ
ಮೂಲಗಳ ಪ್ರಕಾರ ಹಲವು ವರ್ಷಗಳ ಹಿಂದೆಯೇ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಸುಮಾರು 6946 ಎಕರೆ ಅರಣ್ಯ ಪ್ರದೇಶವು ಒತ್ತುವರಿಯಾಗಿದೆ ಎಂದು ಹೇಳಲಾಗುತ್ತಿದೆ. ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳೇ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಅಲ್ಲಿ ರೆಸಾರ್ಟ್, ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾನೂನು ಬಾಹಿರ ವ್ಯವಹಾರ ನಡೆಸುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ ತನ್ನ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆ ಮುಂದಾಗದೇ ಇರುವುದು ಅನುಮಾನ ಹುಟ್ಟಲು ಕಾರಣವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ ನೋಟಿಸ್
ಎಲ್ಲೆಲ್ಲಿ ಎಷ್ಟೆಷ್ಟು ಅರಣ್ಯ ಒತ್ತುವರಿ?
ಈ ಒತ್ತುವರಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಏಳು ವಲಯಗಳಲ್ಲಿಯೂ ನಡೆದಿದ್ದು, ಅತಿ ಹೆಚ್ಚು ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಓಂಕಾರ ವಲಯ ವ್ಯಾಪ್ತಿಯಲ್ಲಿ ಎಂದು ತಿಳಿದುಬಂದಿದೆ. ಇಲ್ಲಿನ 4372 ಎಕರೆ ಒತ್ತುವರಿಯಾಗಿದ್ದರೆ, ನಾಗಪುರ ಬ್ಲಾಕ್ ಮೂರರಲ್ಲಿ 15 ಎಕರೆ, ಬೊಳೇಗೌಡನಕಟ್ಟೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 3699 ಎಕರೆ, ದೇಶಿಪುರ ಮೀಸಲು ಅರಣ್ಯದಲ್ಲಿ 658 ಎಕರೆ, ನುಗು ವಲಯದಲ್ಲಿ ಲಕ್ಷ್ಮಣಪುರ ಮೀಸಲು ಅರಣ್ಯದಲ್ಲಿ 179 ಎಕರೆ, ಹೆಡಿಯಾಲ ವಲಯದಲ್ಲಿ ನಾಗಣಾಪುರ ಮೀಸಲು ಅರಣ್ಯ 1ರಲ್ಲಿ 31 ನಾಗಣಾಪುರ ಮೀಸಲು ಅರಣ್ಯದಲ್ಲಿ 2ರಲ್ಲಿ 803 ಎಕರೆ, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಸೋಮನಪುರ ಮೀಸಲು ಅರಣ್ಯದಲ್ಲಿ 12 ಎಕರೆ, ಮೊಳೆಯೂರು ವಲಯದಲ್ಲಿ 728 ಎಕರೆ ಹಾಗೂ ಕುಂದಕೆರೆ ವಲಯದಲ್ಲಿ ಹೆಗ್ಗವಾಡಿ ಮೀಸಲು ಅರಣ್ಯ 2ರಲ್ಲಿ 171ಎಕರೆ ಅರಣ್ಯ ಪ್ರದೇಶ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ನೇನೆಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ 395 ಎಕರೆ, ಭೀಮನಬೀಡು ಮೀಸಲು ಅರಣ್ಯದಲ್ಲಿ24 ಎಕರೆ, ಪುತ್ತನಪುರ ಮೀಸಲು ಅರಣ್ಯದಲ್ಲಿ 229 ಎಕರೆ ಒಟ್ಟು 648 ಎಕರೆ ಒತ್ತುವರಿಯಾಗಿದೆ.
31 ಎಕರೆ ಒತ್ತುವರಿ ತೆರವು ಮಾಡಲಾಗಿತ್ತು
ಇಷ್ಟೊಂದು ಪ್ರಮಾಣದ ಭೂಮಿ ಅರಣ್ಯ ಇಲಾಖೆಯ ಕೈಬಿಟ್ಟು ಹೋಗಿದ್ದರೂ ಆ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಏಕೆ ಎಂಬ ಪ್ರಶ್ನೆ ಪರಿಸರ ಪ್ರೇಮಿಗಳನ್ನೀಗ ಕಾಡುತ್ತಿದೆ. ಹಾಗೆಂದು ಇಲ್ಲಿನ ಅಧಿಕಾರಿಗಳು ಒತ್ತುವರಿಯನ್ನು ತಡೆದೇ ಇಲ್ಲ ಎನ್ನುವಂತೆಯೂ ಇಲ್ಲ. ಈ ಹಿಂದೆ ಅಂದರೆ 2018ರಲ್ಲಿ ಹೊಂಗಹಳ್ಳಿ ಸರ್ವೆ ನಂಬರ್ 78ರಲ್ಲಿ 31 ಎಕರೆ 38 ಗುಂಟೆ ಒತ್ತುವರಿ ಮಾಡಿಕೊಂಡಿದ್ದು, ಎಫ್.ಐ.ಆರ್ ದಾಖಲಿಸಲಾಗಿತ್ತು. ಆ ನಂತರ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತ್ತು.
ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ತಲೆ ಎತ್ತಿದ ಅಕ್ರಮ ಕಟ್ಟಡ
ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಆದೇಶ
ಇತ್ತೀಚೆಗೆ ಮದ್ದೂರು ವಲಯ ಅರಣ್ಯಾಧಿಕಾರಿಯಾಗಿ ಬಂದಂತಹ ಶೈಲೇಂದ್ರ ಕುಮಾರ್ ಅವರು ಮದ್ದೂರು ವಲಯ ವ್ಯಾಪ್ತಿಯಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಿದ್ದಾರೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕರಾದ ಟಿ.ಬಾಲಚಂದ್ರ ಈ ಕುರಿತಂತೆ ಪ್ರತಿಕ್ರಿಯಿಸಿ, "ಬಂಡೀಪುರ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಈಗಾಗಲೇ ಇದರ ಬಗ್ಗೆ ಕ್ರಮ ವಹಿಸುವಂತೆ ಆಯಾ ವಲಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಶೀಘ್ರ ಒತ್ತುವರಿ ತೆರವುಗೊಳಿಸಲಾಗುವುದು. ಹಾಗೆಯೇ ಮೂರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ದೂರು ದಾಖಲಿಸಲಾಗುವುದಾಗಿ ಹೇಳಿದ್ದಾರೆ.