ಗುಂಡ್ಲುಪೇಟೆಯಲ್ಲಿ ಉದ್ಘಾಟನೆ ಭಾಗ್ಯ ಕಾಣದ ಆಸ್ಪತ್ರೆ ಕಟ್ಟಡ
ಚಾಮರಾಜನಗರ, ನವೆಂಬರ್ 28 : ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ ಎಂಬ ಕೊರಗನ್ನು ರಾಜ್ಯ ಸರ್ಕಾರ ನಿವಾರಿಸಿದೆ.
ಆದರೆ, ಗುಂಡ್ಲುಪೇಟೆ ಪಟ್ಟಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಿ ಆರು ತಿಂಗಳುಗಳು ಕಳೆದರೂ ಉದ್ಘಾಟನೆಗೊಳ್ಳದೆ ಬಿಕೋ ಎನ್ನುತ್ತಿದೆ.
ಚಾಮರಾಜನಗರದಲ್ಲಿ ಜೆಎಸ್ಎಸ್ ಆಸ್ಪತ್ರೆ ಆರಂಭ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 1017.30 ಲಕ್ಷ ರೂ. ವೆಚ್ಚದಲ್ಲಿ 60 ಹಾಸಿಗೆಗಳ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಟ್ಟಲಾಗಿದೆ. ಸಿಬ್ಬಂದಿಗೆ ವಸತಿಗೃಹ ಎಲ್ಲವೂ ಇದ್ದರೂ ಆಸ್ಪತ್ರೆಗೆ ಬೇಕಾದ ಸಮರ್ಪಕ ಸಿಬ್ಬಂದಿ ಇಲ್ಲದೆ ನೂತನವಾಗಿ ಕಟ್ಟಿದ ಆಸ್ಪತ್ರೆ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ.
ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ನರ್ಸ್ ಹಾಗೂ ವೈದ್ಯರ ವಸತಿಗೃಹಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇಲ್ಲಿ ಎಲ್ಲ ರೀತಿಯ ಕಾಮಗಾರಿಗಳನ್ನು ಮುಗಿಸಿ ಆರು ತಿಂಗಳಾಗಿದ್ದರೂ ಇಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ.
ಅಷ್ಟೇ ಅಲ್ಲದೆ ನೂತನ ಕಟ್ಟಡವನ್ನು ಉದ್ಘಾಟಿಸುವ ಗೋಜಿಗೂ ಹೋಗಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಕಟ್ಟಡವು ಸೇವೆಗೆ ಲಭ್ಯವಾಗದೆ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿಯೇ ಹೆರಿಗೆ, ಲಸಿಕೆ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತಿದೆ.
ನೂತನ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಿದ ಬಳಿಕ ಇನ್ನಷ್ಟು ಹೆಚ್ಚುವರಿ ಸಿಬ್ಬಂದಿಗ ನೇಮಕ ಮಾಡಬೇಕಾಗುತ್ತದೆ. ಜತೆಗೆ ಇಬ್ಬರು ಪ್ರಸೂತಿ, ಸ್ತ್ರೀರೋಗ, ಅರಿವಳಿಕೆ, ಶಿಶು ತಜ್ಞರ ಅಗತ್ಯವಿದೆ.
ಇದಲ್ಲದೆ ಮಕ್ಕಳ ವೈದ್ಯರು ಎಂಟು ಮಂದಿ ದಾದಿಗಳು, ತಲಾ ಒಬ್ಬರು ಫಾರ್ಮಾಸಿಸ್ಟ್, ಟೆಕ್ನಿಷಿಯನ್, ಪ್ರಥಮದರ್ಜೆ ಹಾಗೂ ಎರಡನೇ ದರ್ಜೆಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್, ಎಂಟು ಮಂದಿ ನಾಲ್ಕನೇ ದರ್ಜೆ ನೌಕರರು, ನಾಲ್ಕು ಪೌರಕಾರ್ಮಿಕರ ಅಗತ್ಯವಿದ್ದು, ಇವರನ್ನು ನೇಮಕ ಮಾಡಿದರೆ ಮಾತ್ರ ಆಸ್ಪತ್ರೆ ನಿರ್ಮಿಸಿದಕ್ಕೆ ಅರ್ಥ ಬರಲಿದೆ.
ಇಲ್ಲದೆ ಹೋದರೆ ನಿರ್ಮಿಸಿಯೂ ಪ್ರಯೋಜನ ಇಲ್ಲದಂತಾಗಲಿದೆ. ಆದರೆ ಸಿಬ್ಬಂದಿ ನೇಮಕಕ್ಕೆ ಇನ್ನೂ ಕೂಡ ಮೀನಾ ಮೇಷ ಎಣಿಸುತ್ತಿರುವ ಕಾರಣ ಸದ್ಯಕ್ಕೆ ಹೊಸ ಕಟ್ಟಡ ಸಾರ್ವಜನಿಕ ಸೇವೆಗೆ ದೊರಕಲು ಇನ್ನಷ್ಟು ಸಮಯ ಬೇಕಾಗಬಹುದೇನೋ?
ನೂತನ ಕಟ್ಟಡದ ಕಾಮಗಾರಿ ಮುಗಿಸಿ ಪೀಠೋಪಕರಣಗಳು ಹಾಗೂ ಕೆಲವು ಯಂತ್ರೋಪಕರಣಗಳನ್ನೂ ಜೋಡಿಸಲಾಗಿದೆ. ಆಸ್ಪತ್ರಗೆ ಬೇಕಾದ ಸೌಲಭ್ಯಗಳನ್ನು ಕೂಡ ಅಳವಡಿಸಲಾಗಿದೆ.
ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಗೃಹವೂ ಸಿದ್ಧವಾಗಿದೆ. ಆದರೆ ಇನ್ನೂ ಕೂಡ ಉದ್ಘಾಟನೆ ಮಾಡಲು ಸಂಬಂಧಿಸಿದವರು ಮುಂದಾಗದಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.