16 ವರ್ಷ ಬಳಿಕ ತಮ್ಮ ನಿವೇಶನಕ್ಕೆ ಮರಳಿದ ದಲಿತರು
ಚಾಮರಾಜನಗರ, ಜೂನ್ 14:ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದಲ್ಲಿ 12 ದಲಿತ ಕುಟುಂಬಗಳು ಸರ್ಕಾರ ನೀಡಿದ್ದ ಉಚಿತ ನಿವೇಶನವನ್ನು ಕುಟುಂಬವೊಂದಕ್ಕೆ ಹೆದರಿ ಬಿಟ್ಟು ಹೋಗಿ ಮೂಲಭೂತ ಸೌಕರ್ಯ ವಂಚಿತರಾಗಿ ಬದುಕುತ್ತಿದ್ದರು. ಇದೀಗ 16 ವರ್ಷಗಳ ಬಳಿಕ ಪೊಲೀಸರ ರಕ್ಷಣೆಯಲ್ಲಿ ತಮ್ಮ ನಿವೇಶನಕ್ಕೆ ಹಿಂದಿರುಗಿದ್ದಾರೆ.
ಸರ್ಕಾರ ನೀಡಿದ್ದ ಉಚಿತ ನಿವೇಶನದ ಹಕ್ಕು ಪತ್ರಗಳು ಗ್ರಾಮದ 12 ದಲಿತ ನಿವಾಸಿಗಳ ಹೆಸರಿನಲ್ಲಿತ್ತಾದರೂ ಇದೇ ಗ್ರಾಮದ ಬೇರೆ ಸಮುದಾಯಕ್ಕೆ ಸೇರಿದ ರತ್ನಸ್ವಾಮಿ ಹಾಗೂ ಈತನ ಪುತ್ರ ಅವರನ್ನು ಬೆದರಿಸಿ ನಿವೇಶನಕ್ಕೆ ಬಾರದಂತೆ ತಡೆದಿದ್ದರು. ಹೀಗಾಗಿ ಕಳೆದ 16 ವರ್ಷಗಳಿಂದ ಇದು ವಿವಾದವಾಗಿ ಮಾರ್ಪಟ್ಟಿತ್ತು. ತಮಗೆ ನ್ಯಾಯ ಒದಗಿಸಬೇಕೆಂದು ದಲಿತ ಕುಟುಂಬಗಳು ಇತ್ತೀಚೆಗೆ ಬಂದ ಡಿವೈಎಸ್ಪಿ ಪುಟ್ಟಮಾದಯ್ಯ ಅವರಿಗೆ ಮನವಿ ಮಾಡಿದ್ದರು.
ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ
ಈ ಸಂಬಂಧ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಾರ್ಕಿಕ ಅಂತ್ಯ ಕಂಡಿದ್ದು ಈಗಾಗಲೇ ನಿವೇಶನವನ್ನು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇದರಿಂದ ಇದುವರೆಗೆ ಇದ್ದ ಸಮಸ್ಯೆ ಬಗೆಹರಿದಂತಾಗಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸಂದನ ಪಾಳ್ಯ ಗ್ರಾಮದ ನಂಬರ್ ಎಲ್ಎಕ್ಯೂ, ಎಚ್ಎಸ್ಎಲ್ಎಸ್ಆರ್ 538/78-79 510/4ಎ ಸರ್ವೆ ನಂ 35 ಸೆಂಟ್ ಜಮೀನು (ದಿನಾಂಕ 30-01-1979 ಆರ್ಟಿಸಿಸಿಯಲ್ಲಿ) ಕೊಳ್ಳೇಗಾಲ ಉಪವಿಭಾಗಾಧಿಕಾರಿಯವರು ಸರ್ಕಾರದ ಸ್ವಾಧಿನದಲ್ಲಿದೆ ಎಂದಿತ್ತು.
ತದ ನಂತರ 16 ವರ್ಷಗಳ ಹಿಂದೆ ಶಾಸಕರಾಗಿದ್ದ ಜಿ.ರಾಜೂಗೌಡರು ಸಂದನಪಾಳ್ಯ ಗ್ರಾಮದ ಸರ್ವೆ ನಂ 510/4 ಎ 35 ಸೆಂಟ್ ಸರ್ಕಾರಿ ಜಮೀನನ್ನು ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ ದಲಿತರಿಗೆ ಹಂಚಿಕೆ ಮಾಡಿದ್ದರು. ಈ ವೇಳೆ ಸರ್ವೆ ನಂ 510/4ಎ ರ 35 ಸೆಂಟ್ಜಾಗದಲ್ಲಿ 30/40 ವಿಸ್ತೀರ್ಣದ ಅಳತೆಯಂತೆ ಲಕ್ಷ್ಮಿ, ಕಮಲ, ಸೆಲ್ಲಾ, ಸರಸ, ಸತ್ಯ, ಕಾಳಿಯಮ್ಮ, ಮಾದಮ್ಮ, ಅಂಗಮ್ಮ, ವಳ್ಳಿ, ಮಾರಮ್ಮ, ರಾಸಮ್ಮ, ವೀರಮ್ಮ ಎಂಬ ಮಹಿಳೆಯರಿಗೆ ನಿವೇಶನದ ಹಕ್ಕು ಪತ್ರವನ್ನು ವಿತರಿಸಿದ್ದರು.
ಹಕ್ಕು ಪತ್ರವನ್ನು ಪಡೆದ ಫಲಾನುಭವಿಗಳು ಗುಡಿಸಲು ಮತ್ತು ಮನೆ ನಿರ್ಮಾಣ ಮಾಡಲು ಮುಂದಾದಾಗ ಗ್ರಾಮದ ರತ್ನಸ್ವಾಮಿ ಮತ್ತು ಈತನ ಪುತ್ರ ತಗಾದೆ ತೆಗೆದು ಬೆದರಿಸಿ ವಾಸ್ತವ್ಯ ಹೂಡದಂತೆ ಬೆದರಿಸಿದ್ದರು. ಇದರಿಂದ ನಿವೇಶನ ಹೊಂದಿದ ದಲಿತರು ಅಲ್ಲಿ ವಾಸಿಸುವ ಧೈರ್ಯವನ್ನು ತೋರಿರಲಿಲ್ಲ. ಈ ಮಧ್ಯೆ ರತ್ನಸ್ವಾಮಿ ನ್ಯಾಯಾಲಯದ ಮೆಟ್ಟಲು ಹತ್ತಿದ್ದರಾದರೂ ನ್ಯಾಯಾಲಯವು À ನಿವೇಶನ ಸರ್ಕಾರ ನೀಡಿರುವ ಫಲಾನುಭವಿಗಳಿಗೆ ಸೇರಿದ್ದು ಎಂದು ತೀರ್ಪು ನೀಡಿತ್ತು.
ಆದರೆ ಇದ್ಯಾವುದನ್ನೂ ಬಹಿರಂಗಗೊಳಿಸದೆ ರತ್ನಸ್ವಾಮಿ ಅವರು ತೆಪ್ಪಗಾಗಿದ್ದರು. ಇದೀಗ ನಿವೇಶನ ಹೊಂದಿದ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದರಿಂದ ಕೊನೆಗೂ ನ್ಯಾಯ ಸಿಕ್ಕಿದಂತಾಗಿದೆ.