ಆಕ್ಸಿಜನ್ ದುರಂತದ ನಂತರ ಎಚ್ಚೆತ್ತ ಚಾಮರಾಜನಗರ ಜಿಲ್ಲಾಡಳಿತ: ಮೊಕ್ಕಾಂ ಹೂಡಿದ ಸಚಿವ
ಚಾಮರಾಜನಗರ, ಮೇ 7: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸೋಂಕಿತರು ಮೃತಪಟ್ಟ ನಂತರ ಜಿಲ್ಲಾಡಳಿತ ಚುರುಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಲ್ಲಿಯೇ ಮೊಕ್ಕಾಂ ಹೂಡಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು 15 ಮಂದಿ ಸದಸ್ಯರಿರುವ ಕಾರ್ಯಪಡೆಯೊಂದನ್ನು ರಚಿಸಲಾಗಿದೆ.
Recommended Video
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಸುರೇಶ್ ಕುಮಾರ್, ಇನ್ನು ಮುಂದೆ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲ ಶಾಸಕರು ಸದಸ್ಯರಾಗಿರುವ ಈ ಕಾರ್ಯಪಡೆ ಕೋವಿಡ್ ನಿಯಂತ್ರಣ ಮಾತ್ರವಲ್ಲ, ಆಮ್ಲಜನಕ ಪೂರೈಕೆಯ ಮೇಲೂ ನಿಗಾ ವಹಿಸಲಿದೆ. ಒಬ್ಬೊಬ್ಬ ಅಧಿಕಾರಿಗಳಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ: ಕೊಲೆ ದೂರು ದಾಖಲು
ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡುವ ಕುರಿತು, ಅದರ ಸಾಧಕ-ಬಾಧಕಗಳನ್ನು ಕುರಿತು ಚಿಂತಿಸಬೇಕು ಎಂದು ಅವರು ಹೇಳಿದರು. ಇದೇ ಬಗೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಇಲ್ಲೂ ಇದೇ ರೀತಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ. ಇದರ ಉದ್ದೇಶ ಕೋವಿಡ್ನ್ನು ಶರವೇಗದಲ್ಲಿ ನಿಯಂತ್ರಣಕ್ಕೆ ತರುವುದಾಗಿದೆ ಎಂದು ಹೇಳಿದರು.
ಕಳೆದ ವರ್ಷ ಹಲವು ತಿಂಗಳ ಕಾಲ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ದೇಶದಲ್ಲಿಯೇ ಚಾಮರಾಜನಗರ ಹೆಸರು ವಾಸಿಯಾಗಿತ್ತು. ಆದರೆ, ಈಗ ಬೇರೆ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಜನತಾ ಕರ್ಫ್ಯೂವಿನಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಸೋಂಕಿನ ಸರಪಳಿ ಕತ್ತರಿಸಲು ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಇದರ ಜತೆಗೆ ನಾವು ಕೂಲಿ ಕಾರ್ಮಿಕರ ಪರಿಸ್ಥಿತಿಯ ಬಗ್ಗೆಯೂ ಗಮನ ಹರಿಸಬೇಕಿದೆ. ಮುಖ್ಯಮಂತ್ರಿಗಳ ನೇತೃತ್ವದ ಸಭೆಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಕೇವಲ ಅಧಿಕಾರಿಗಳಿಂದ ಮಾತ್ರವೇ ಕೋವಿಡ್ ನಿಯಂತ್ರಣವಾಗುವುದಿಲ್ಲ. ಸಾರ್ವಜನಿಕರ ಸಹಕಾರ ತೀರಾ ಅಗತ್ಯ ಇದೆ. ಆಸ್ಪತ್ರೆಯ ಒಳಗೆ ಬಂದರೆ ವೇದನೆ ಪಡುವಂತಹ ಸ್ಥಿತಿ. ಹೊರಗೆ ಸಾರ್ವಜನಿಕರು ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಇನ್ನಾದರೂ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೊರೊನಾ ಸೋಂಕಿತರೂ ಸಹ ತಡ ಮಾಡದೇ ಆಸ್ಪತ್ರೆಗೆ ಬರಬೇಕು. ತಡವಾಗಿ, ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬಂದರೆ ನಿಜಕ್ಕೂ ಏನು ಮಾಡಲಾಗದು. ರೋಗ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಅಥವಾ ಕೊರೊನಾ ಪಾಸಿಟಿವ್ ಆದ ನಂತರ ಒಂದೊಂದು ದಿನವೂ ಮುಖ್ಯ. ಒಂದೊಂದು ದಿನ ಕಳೆಯುತ್ತಿದ್ದಂತೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದನ್ನು ಯಾರೂ ಮರೆಯಬಾರದು ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಕಿವಿಮಾತು ಹೇಳಿದರು.