20 ವರ್ಷಗಳ ಬಳಿಕ ಲೋಕಸಭಾ ಅಖಾಡಕ್ಕೆ ವಿ.ಶ್ರೀನಿವಾಸ ಪ್ರಸಾದ್
Recommended Video
ಚಾಮರಾಜನಗರ, ಏಪ್ರಿಲ್ 04 : 20 ವರ್ಷಗಳ ನಂತರ ವಿ.ಶ್ರೀನಿವಾಸ ಪ್ರಸಾದ್ ಅವರು ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಒಂದು ಕಾಲದ ಹಿತೈಷಿಗಳಾದ ಆರ್.ಧ್ರುವನಾರಾಯಣ ಮತ್ತು ವಿ.ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಕ್ಷೇತ್ರದಲ್ಲಿ ಎದುರಾಳಿಗಳು.
ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಬಳಿಕ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ವಿ.ಶ್ರೀನಿವಾಸ ಪ್ರಸಾದ್ ಘೋಷಣೆ ಮಾಡಿದ್ದರು. ಆದರೆ, ಪಕ್ಷದ ತೀರ್ಮಾನ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅಖಾಡಕ್ಕೆ ಇಳಿದಿದ್ದಾರೆ.
'ಸಿದ್ದರಾಮಯ್ಯ ವಿಶ್ವಾಸದ್ರೋಹಿ, ಅವರಿಗೆ ಕೃತಜ್ಞತೆ ಇಲ್ಲ'
1974ರಲ್ಲಿ ಚುನಾವಣಾ ರಾಜಕೀಯಕ್ಕೆ ಶ್ರೀನಿವಾಸ ಪ್ರಸಾದ್ ಪಾದಾರ್ಪಣೆ ಮಾಡಿದರು. 1977ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ಈ ವರೆಗೆ 8 ಬಾರಿ ಸ್ಪರ್ಧಿಸಿದ್ದು, 5 ಬಾರಿ ಗೆಲುವು ಸಾಧಿಸಿದ್ದಾರೆ. 3 ಸಲ ಸೋಲು ಕಂಡಿದ್ದಾರೆ.
ಚಾಮರಾಜನಗರದಲ್ಲಿ ಗುರು-ಶಿಷ್ಯರ ನಡುವೆ ಪ್ರಬಲ ಸ್ಪರ್ಧೆ!
1999ರ ಚುನಾವಣೆಯಲ್ಲಿ ಅವರು ಲೋಕಸಭೆಗೆ ಕೊನೆಯ ಬಾರಿ ಸ್ಪರ್ಧಿಸಿದ್ದರು. 2004ರ ಚುನಾವಣೆಯಲ್ಲಿ ಕಣಕ್ಕಿಳಿಯದೇ ಕಾಗಲವಾಡಿ ಶಿವಣ್ಣ ಅವರಿಗೆ ಜೆಡಿಎಸ್ನಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು. 2019ರ ಚುನಾವಣೆಯಲ್ಲಿ ಅನಾರೋಗ್ಯದ ನಡುವೆಯೂ ಅವರು ಕಣಕ್ಕಿಳಿದಿದ್ದಾರೆ.
ಕೋಟ್ಯಾಧೀಶ ವಿ.ಶ್ರೀನಿವಾಸ್ ಪ್ರಸಾದ್ ಬಳಿ ಚಿನ್ನವಿಲ್ಲವಂತೆ!
5 ಬಾರಿ ಗೆಲುವು
ವಿ.ಶ್ರೀನಿವಾಸ ಪ್ರಸಾದ್ ಅವರು 1984, 1989, 1991, 1999ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. 1999ರ ಚುನಾವಣೆಯಲ್ಲಿ ಜೆಡಿಯುನಿಂದ ಕಣಕ್ಕಿಳಿದು ಗೆದ್ದಿದ್ದ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಮೂರು ಬಾರಿ ಸೋಲು
1977ರಲ್ಲಿ ಅವರು ಮೊದಲ ಬಾರಿಗೆ ಲೋಕದಳದಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ನ ಬಿ.ರಾಚಯ್ಯ ಅವರ ಎದುರು ಪರಾಭವಗೊಂಡಿದ್ದರು. 1990ರಲ್ಲಿ ಇಂದಿರಾ ಗಾಂಧಿ ಅವರ ಕಾಂಗ್ರೆಸ್ನಿಂದ ಕಣಕ್ಕಿಳಿದು ಸೋತರು. 1996ರಲ್ಲಿ ಪಿ.ವಿ.ನರಸಿಂಹರಾವ್ ಅವರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದಾರೆ.
2008ರಲ್ಲಿ ರಾಜ್ಯ ರಾಜಕಾರಣ
2008ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2013ರ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ನಂಜನಗೂಡು ಉಪ ಚುನಾವಣೆಯಲ್ಲಿಯೂ ಸೋಲು ಕಂಡರು.
ಹಿತೈಷಿಗಳು ಎದುರಾಳಿಗಳು
ವಿ.ಶ್ರೀನಿವಾಸ ಪ್ರಸಾದ್ ಮತ್ತು ಆರ್.ಧ್ರುವ ನಾರಾಯಣ ಅವರು ಒಂದು ಕಾಲದಲ್ಲಿ ಹಿತೈಷಿಗಳು. 2008ರಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮೇಲೂ ಉಭಯ ನಾಯಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಈಗ ಚಾಮರಾಜನಗರ ಕ್ಷೇತ್ರದಲ್ಲಿ ಆರ್.ಧ್ರುವನಾರಾಯಣ ಕಾಂಗ್ರೆಸ್ನಿಂದ, ಶ್ರೀನಿವಾಸ ಪ್ರಸಾದ್ ಬಿಜೆಪಿಯಿಂದ ಅಭ್ಯರ್ಥಿಗಳು.