ಕೊಳ್ಳೇಗಾಲ; ಪವಾಡ ಸೃಷ್ಟಿಯ ಸೀಗಮಾರಮ್ಮನ ನರಬಲಿ ಹಬ್ಬ
ಚಾಮರಾಜನಗರ, ಮೇ 11; ಸುಮಾರು 19 ವರ್ಷಗಳ ಬಳಿಕ ಚಾಮರಾಜಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯಗ್ರಾಮದಲ್ಲಿ ಸೀಗಮಾರಮ್ಮನ ನರಬಲಿ ಹಬ್ಬ ಭಕ್ತಿಭಾವದೊಂದಿಗೆ ಅದ್ಧೂರಿಯಾಗಿ ನಡೆಯುವುದರೊಂದಿಗೆ ಪವಾಡವೊಂದನ್ನು ಸೃಷ್ಟಿ ಮಾಡಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗೆಯವರೆಗೆ ನಡೆದ ಈ ಹಬ್ಬವನ್ನು ಪಾಳ್ಯ ಗ್ರಾಮದ ಎಲ್ಲ ಜನಾಂಗದವರು ಒಟ್ಟಾಗಿ ಆಚರಿಸುವ ಮೂಲಕ ಹಬ್ಬಕ್ಕೊಂದು ಕಳೆಕಟ್ಟಿದರು. ಅಷ್ಟೇ ಅಲ್ಲದೆ ಸೀಗೆ ಮಾರಮ್ಮ ತನ್ನ ಪವಾಡವನ್ನು ಬಿಚ್ಚಿಟ್ಟಿದ್ದು ಎದ್ದು ಕಾಣಿಸಿತು.
ಚಾಮರಾಜನಗರ ನಡುರಸ್ತೆ ನರಿಕಲ್ಲು ಮಾರಮ್ಮನ ಮಹಿಮೆ!
ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ಸೀಗಮಾರಮ್ಮ ಜಾತ್ರೆಯಲ್ಲಿ ನಡೆಯುವ ವಿಶೇಷತೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿಸುತ್ತದೆ. ಜಾತ್ರೆ ವೇಳೆ ರಾತ್ರಿ ನರ ಬಲಿ ಕೊಟ್ಟು, ಗ್ರಾಮದ ಮಾರಮ್ಮನ ಗುಡಿಯ ಮುಂದೆ ಬಲಿ ಕೊಟ್ಟ ವ್ಯಕ್ತಿಯನ್ನು ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ.
ಚಾಮರಾಜನಗರ: ಪಾಳ್ಯದ ಸೀಗಮಾರಮ್ಮನ ಪವಾಡದ ವಿಶೇಷತೆಯೇನು?
ಬೆಳಗ್ಗೆ ಸಮೀಪದ ಗುಂಡೇಗಾಲ ಗ್ರಾಮದ ಒಳಗೆರೆ ಹುಚ್ಚಮ್ಮ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದ ನಂತರ ಮೃತಪಟ್ಟ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಅದರಂತೆ ಈ ಬಾರಿಯೂ ಪವಾಡ ನಡೆದಿದೆ.
ಮಂಗಳೂರು ವಿಶೇಷ; ಪೊಳಲಿ ಜಾತ್ರೆ ಚೆಂಡಾಟಕ್ಕೂ ಧಾರ್ಮಿಕ ನಂಬಿಕೆ ನಂಟು
21 ದಿನಗಳ ಜಾತ್ರೆ; ಇನ್ನು ಇಪ್ಪತ್ತೊಂದು ದಿನಗಳ ಕಾಲ ನಡೆಯುವ ಜಾತ್ರೆಗೆ ಏಪ್ರಿಲ್ 24ರಂದು ಚಾಲನೆ ನೀಡಲಾಗಿತ್ತು. ಅದರಂತೆ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಮೇ 18ರವವರೆಗೂ ಜಾತ್ರೆ ನಡೆಯಲಿದೆ. ನರಬಲಿ ಆಚರಣೆ ಈ ಹಬ್ಬದ ಪ್ರಧಾನ ಆಚರಣೆಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಲಿಂಗಾಯತರು ಮಡಿವಾಳ,, ಕುಂಬಾರರು ಸೇರಿದಂತೆ ಗ್ರಾಮದಲ್ಲಿರುವ ಎಲ್ಲ 15 ಜಾತಿಗಳ ಜನರು ಈ ಜಾತ್ರೆಯಲ್ಲಿ ತಮ್ಮದೇ ಆದ ಜವಾಬ್ದಾರಿ ವಹಿಸಿಕೊಂಡು ಸಹಕರಿಸುತ್ತಾರೆ.
ಇನ್ನು ಜಾತ್ರೆ ವೇಳೆ ಮೇ 9ರ ಮಧ್ಯರಾತ್ರಿಯಿಂದ ಮೇ 10ರ ಬೆಳಗ್ಗಿನ ಜಾವದ ತನಕ ನಡೆದ ನರಬಲಿ ಆಚರಣೆ ಗಮನಸೆಳೆಯಿತು. ದೇವರಿಗೆ ಬಲಿಯಾಗುವ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಸೋಮವಾರ ಮಧ್ಯ ರಾತ್ರಿ ಗ್ರಾಮದ ವಿವಿಧ ದೇವಾಲಯಗಳಿಂದ ಹೊರಟ 5 ಮೆರವಣಿಗೆಗಳು ಹೆಬ್ಬರದವರು (ಪರಿಶಿಷ್ಟ ಜಾತಿ), ಕೇಲಿನವರು, ಬಲಿಯವರು (ಪರಿಶಿಷ್ಟ ಪಂಗಡ) ಸೀಗಮಾರಮ್ಮನ ಮುಖವಾಡ (ಮಡಿವಾಳರು), ಹಾಗೂ ಸೀಗಮಾರಮ್ಮನ ಉತ್ಸವ ಮೂರ್ತಿ (ಲಿಂಗಾಯತರು) ಮೆರವಣಿಗೆ ಹೊರಟು ಗ್ರಾಮದ ಮಧ್ಯದ ಕೂಡು ರಸ್ತೆಯಲ್ಲಿ ಸೇರಿದರು.
ಈ ಸಂದರ್ಭದಲ್ಲಿ ಕೇಲಿನವರು ತೀರ್ಥವನ್ನು ಬಲಿಯಾಗುವ ವ್ಯಕ್ತಿಗೆ ಪ್ರೋಕ್ಷಣೆ ಮಾಡಿದಾಗ, ಆತ ಪ್ರಜ್ಞೆ ಕಳೆದುಕೊಂಡನು. ನಂತರ ಆತನನ್ನು ಗ್ರಾಮದ ಬಲಿ ದೇವರ ಮನೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಗೆ ಸೀಗಮಾರಮ್ಮ ದೇವಾಲಯದ ಅರ್ಚಕ ಬಂದು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯ ಎದೆ ಮೇಲೆ ಕಾಲಿಟ್ಟರು ( ಈ ರೀತಿ ಮಾಡಿದರೆ ಪ್ರಾಣ ಹೋಗುತ್ತದೆ ಎಂಬ ನಂಬಿಕೆಯಿದೆ)
ಮುಂಜಾನೆ 4 ಗಂಟೆ ಸಮಯದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಬಲಿ ದೇವರ ಮನೆಯಿಂದ ಮಾರಮ್ಮನ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಈ ಸಂದರ್ಭದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಮೇಲಕ್ಕೆ ಎಸೆಯಲಾಯಿತು. ಬಳಿಕ ಮಾರಮ್ಮನ ಗುಡಿ ಎದುರು ಒಣ ಹುಲ್ಲಿನ ಮೇಲೆ ಆ ವ್ಯಕ್ತಿಯನ್ನು ಮಲಗಿಸಿ ಪೂಜೆ ಮಾಡಲಾಯಿತು. ಕಣ್ಣು ಬಾಯಿ, ಮುಖಕ್ಕೆ ಅರಿಸಿನ, ಕುಂಕುಮ ಹಾಕಲಾಯಿತು. ಬೆಳಗ್ಗೆ 8.45ರವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಆ ನಂತರ ಸಮೀಪದ ಗುಂಡೇಗಾಲದ ಒಳಗೆರೆ ಹುಚ್ಚಮ್ಮ (ಸೀಗಮಾರಮ್ಮದೇವಿಯ ತಂಗಿ) ದೇವಸ್ಥಾನದ ತೀರ್ಥವನ್ನು ಮೆರವಣಿಗೆಯ ಮೂಲಕ ತರಲಾಯಿತು. ಹೆಬ್ಬರದವರು, ಸೀಗಮಾರಮ್ಮನ ಮುಖವಾಡ, ಉತ್ಸವ ಮೂರ್ತಿ ಉಪಸ್ಥಿತಿಯಲ್ಲಿ ಬಲಿ ವ್ಯಕ್ತಿಗೆ ಪೂಜೆ ಮಾಡಿ ಮುಖಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
ಈ ಸಂದರ್ಭ ಅವರು ಕಣ್ಣು ಬಿಟ್ಟಿದ್ದು, ನಂತರ ಅವರನ್ನು ಹೊತ್ತುಕೊಂಡು ಸೀಗಮಾರಮ್ಮನ ದೇವಾಲಯಕ್ಕೆ ಕರೆ ತಂದು ದೇವಿಗೆ ಪೂಜೆ ಸಲ್ಲಿಸಲಾಯಿತು. ಸೀಗಮಾರಮ್ಮದೇವಿ ಪ್ರಾಣ ತೆಗೆದರೆ, ಒಳಗೆರೆ ಹುಚ್ಚಮ್ಮ ಪ್ರಾಣ ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ಹಿಂದೆ 2003ರಲ್ಲಿ ಈ ಹಬ್ಬ ನಡೆದಿತ್ತು. 19 ವರ್ಷಗಳ ನಂತರ ನಡೆಯುತ್ತಿರುವುದರಿಂದ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಜನ ಸೇರಿದ್ದರು. ಸಮೀಪದ ಗುಂಡೇಗಾಲ ಗ್ರಾಮದಲ್ಲೂ ಈ ಹಬ್ಬ ಮುಂದಿನ ವರ್ಷ ನಡೆಯಲಿದೆ.
Recommended Video