ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ವಿರುದ್ಧ ಆದಿವಾಸಿಗಳಿಂದ ಪ್ರತಿಭಟನೆ
ಚಾಮರಾಜನಗರ, ಫೆಬ್ರವರಿ 22: ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸದಂತೆ ಗಿರಿಜನರು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಗುರುವಾರ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ನೆರೆದ ನೂರಾರು ಮಂದಿ ಗಿರಿಜನರು, ಸೋಲಿಗರು ಮತ್ತು ಬುಡಕಟ್ಟು ಸಮುದಾಯದವರು ತಮ್ಮದೇ ಆದ ಉಡುಗೆಗಳನ್ನು ತೊಟ್ಟು, ಬಾಯಿಗೆ ಹಸಿರು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಗಮನಸೆಳೆದರು.
ಚಾಮರಾಜನಗರ ಬಾಲಮಂದಿರದ ಅವ್ಯವಸ್ಥೆ ವಿರುದ್ಧ ಬೀದಿಗಿಳಿದ ಮಕ್ಕಳು
ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಾದ್ಯಂತ ವಿಸ್ತಾರಗೊಂಡಿರುವ ಮಲೆ ಮಹದೇಶ್ವರ ವನ್ಯ ಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ವನ್ಯ ಜೀವಿ ಮಂಡಳಿಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರದ ಆದೇಶಕ್ಕೆ ಕಳುಹಿಸಲಾಗಿದೆ.
ಆದರೆ ಮಲೆ ಮಹದೇಶ್ವರ ವನ್ಯ ಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದಾದರೆ 3,500 ಗಿರಿಜನ ಬುಡಕಟ್ಟು ಕುಟುಂಬದವರ ಸ್ಥಿತಿ ಅತಂತ್ರವಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆದಿವಾಸಿ, ಸೋಲಿಗ ಗಿರಿಜನರಾದ ನಾವು ಶತಶತ ಮಾನಗಳಿಂದಲೂ ಅರಣ್ಯದಲ್ಲಿ ವಾಸಮಾಡಿಕೊಂಡು ಬಂದಿದ್ದೇವೆ.
ಮಲೆಮಹದೇಶ್ವರ ಅರಣ್ಯದ ವ್ಯಾಪ್ತಿಯಲ್ಲಿ ಸುಮಾರು 3500 ಕುಟುಂಬಗಳು, 17,200 ಜನಸಂಖ್ಯೆ ಆದಿವಾಸಿಗಳು ವಾಸಮಾಡುತ್ತಿದ್ದು, 2006ರಡಿ ಮಲೆಮಹದೇಶ್ವರ ವನ್ಯಜೀವಿಧಾಮದ ಒಳಗೆ ವಾಸವಾಗಿರುವ ಸೋಲಿಗರಿಗೆ, ವೈಯಕ್ತಿಕ ಭೂಮಿ ಹಕ್ಕಿನಡಿ 563 ಕುಟುಂಬಗಳಿಗೆ 1143 ಎಕರೆ ಅರಣ್ಯ ಭೂಮಿಯ ಒಡೆತನ ಲಭ್ಯವಾಗಿದೆ, ಇಷ್ಟೆಲ್ಲ ಇದ್ದರೂ ಕೂಡ, ಮಲೆಮಹದೇಶ್ವರ ಅರಣ್ಯವನ್ನು ಹುಲಿ ಯೋಜನೆ ಮಾಡಲು, ಸರ್ಕಾರ ಹೊರಟಿರುವುದು ಖಂಡನೀಯವಾಗಿದ್ದು, ಯಾವುದೇ ಕಾರಣಕ್ಕೂ ತಾವುಗಳು ಅರಣ್ಯ ಪ್ರದೇಶದಿಂದ ಹೊರ ಹೋಗಲ್ಲ ಎಂದು ಪಟ್ಟು ಹಿಡಿಯುವುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ.ಸಿಮಾದೇಗೌಡ, ಕೋಣೂರೇಗೌಡ ಸೇರಿದಂತೆ ವಿವಿಧ ಹಾಡಿ, ಪೋಡಿನಿಂದ ಬಂದ ನೂರಾರು ಮಂದಿ ಗಿರಿಜನರು ಮತ್ತು ಬುಡಕಟ್ಟು ಸಮೂದಾಯದವರು ಪಾಲ್ಗೊಂಡಿದ್ದರು.