ಬಿಳಿಗಿರಿರಂಗನ ಬೆಟ್ಟದಲ್ಲಿ ಪರಿಸರ ಶಿಕ್ಷಣದ ಹೆಸರಿನಲ್ಲಿ ರೆಸಾರ್ಟ್
ಚಾಮರಾಜನಗರ, ಜನವರಿ 08: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ) ದಲ್ಲಿ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, 2009ರಲ್ಲಿ ಹೊರಡಿಸಲಾಗಿದ್ದ ಭೂ ಪರಿವರ್ತನಾ ಆದೇಶ ರದ್ದುಗೊಳಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.
ಇದರಿಂದಾಗಿ ಇದೀಗ ನಡೆಯುತ್ತಿರುವ ಗೊರುಕನ ರೆಸಾರ್ಟ್ ಮೇಲೆ ಕಾರ್ಮೋಡ ಕವಿದಿದೆ. ಈ ಸಂಬಂಧ ವಿಜಿಕೆಕೆ ಸ್ಪಷ್ಟನೆ ನೀಡಿದ್ದು, ರೆಸಾರ್ಟ್ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದೆ.
ಕೊಡಗು; ರೆಸಾರ್ಟ್ ಗಾಗಿ ನಡೆಯಿತಾ ಮರಗಳ ಮಾರಣಹೋಮ?
ಆದರೆ ರೆಸಾರ್ಟ್ನ ನಿರ್ಮಾಣ ಮತ್ತು ಅಲ್ಲಿ ನಡೆಯುತ್ತಿರುವ ಚಟುವಟಿಕೆ, ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಗಳನ್ನು ಗಮನಿಸಿದ್ದೇ ಆದರೆ ರೆಸಾರ್ಟ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿಯೇ ನಿರ್ಮಿಸಲಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈ ಕೇಂದ್ರ ಎಂಟು ಎಕರೆ ಪ್ರದೇಶದಲ್ಲಿ ಗೌರವ ಕಾರ್ಯದರ್ಶಿ ಡಾ.ಎಚ್.ಸುದರ್ಶನ್ ಮಾಲೀಕತ್ವದಲ್ಲಿ ನಡೆಯುತ್ತಿದೆ.
ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್ ಟಿ) ವ್ಯಾಪ್ತಿಯಲ್ಲಿ ಬರುವ, ಬಿಳಿಗಿರಿರಂಗನಬೆಟ್ಟ ಗ್ರಾಮದ ಸರ್ವೆ ನಂಬರ್ನಲ್ಲಿ 4/68ರಲ್ಲಿ ಎಂಟು ಎಕರೆ ಜಮೀನನ್ನು ಶಿಕ್ಷಣ ಕೇಂದ್ರ ತೆರೆಯುವ ಉದ್ದೇಶಕ್ಕಾಗಿ 2009ರ ಸೆಪ್ಟೆಂಬರ್ 16ರಂದು ಭೂಪರಿವರ್ತನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಅದೇ ವರ್ಷದ ಡಿ.8ರಂದು ಈ ಆದೇಶವನ್ನು ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರ ತೆರೆಯುವ ಉದ್ದೇಶಕ್ಕೆ ಎಂದು ತಿದ್ದುಪಡಿ ಮಾಡಲಾಗಿತ್ತು.
ಗೋಲ್ಡನ್ ಪಾಮ್ ರೆಸಾರ್ಟ್ನಲ್ಲಿ ಪ್ರೇಮಿಗಳ ಆತ್ಮಹತ್ಯೆ
ಪ್ರವಾಸೋದ್ಯಮ ಇಲಾಖೆ ನೀಡಿದ್ದ 1.36 ಕೋಟಿ ಅನುದಾನ ಬಳಸಿಕೊಂಡು, ಸಂಸ್ಥೆಯು ವಿವೇಕ್ ಕರುಣಾ ಫೌಂಡೇಷನ್ ಅಡಿಯಲ್ಲಿ 'ಗೊರುಕನ' ಹೆಸರಿನಲ್ಲಿ ಕಾಟೇಜ್, ಸ್ಪಾ, ಟ್ರೀ ಹೌಸ್ ಹಾಗೂ ಇನ್ನಿತರ ಸೌಲಭ್ಯ ಹೊಂದಿರುವ ಪ್ರವಾಸಿ ತಾಣ ಅಭಿವೃದ್ಧಿಪಡಿಸಿತ್ತು. ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ರೆಸಾರ್ಟ್ ನಡೆಸಲಾಗುತ್ತಿದೆ ಎಂಬ ಆರೋಪ ಆಗಿಂದಾಗ್ಗೆ ಕೇಳಿಬರುತ್ತಿತ್ತು. ಪರವಾನಗಿ ಪಡೆಯದೇ ಕೇಂದ್ರ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಕೂಡ ಆರೋಪಿಸಿತ್ತು.
2015ರಲ್ಲಿ ಬಿಆರ್ ಟಿಯ ಅಂದಿನ ಉಪಸಂರಕ್ಷಣಾಧಿಕಾರಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ವಿಜಿಕೆಕೆಯು 'ಗೊರುಕನ' ಹೆಸರಿನಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆ ನಡೆಸುತ್ತಿದೆ. ಸಂರಕ್ಷಿತ ಪ್ರದೇಶದಲ್ಲಿ ಮುಂದಿನ 50 ವರ್ಷಗಳವರೆಗೆ ಭೂಮಿಯ ಸ್ವರೂಪವನ್ನು ಬದಲಾಯಿಸಬಾರದು ಎಂದು 2002ರ ಸೆಪ್ಟೆಂಬರ್ 9ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಸಂಸ್ಥೆ ಉಲ್ಲಂಘಿಸಿದೆ. ಹಾಗಾಗಿ ಭೂಪರಿವರ್ತನೆ ಆದೇಶಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
2008ರಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ವಿಜಿಕೆಕೆ ನೀಡಿದ್ದ ಪ್ರಸ್ತಾವವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ತಿರಸ್ಕೃತಗೊಂಡಿತ್ತು. ಹಾಗಿದ್ದರೂ ಸಂಸ್ಥೆ ರೆಸಾರ್ಟ್ ನಿರ್ಮಿಸಿದೆ ಎಂದು ದೂರಿದ್ದರು. ಈ ಪತ್ರದ ಆಧಾರದಲ್ಲಿ ಜಿಲ್ಲಾಧಿಕಾರಿ ಅವರು ಸಂಸ್ಥೆಯ ಡಾ.ಎಚ್.ಸುದರ್ಶನ್ಗೆ ನೋಟೀಸ್ ನೀಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸುದರ್ಶನ್ ಅವರು ಆರೋಪಗಳನ್ನು ನಿರಾಕರಿಸಿದ್ದರು.
ಸ್ಥಳ ಪರಿಶೀಲಿಸಿ ವರದಿ ನೀಡಲು ಹೆಚ್ಚುವರಿ ಜಿಲ್ಲಾಧಿಕಾರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ಯಳಂದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿನ್ನು ರಚಿಸಲಾಗಿತ್ತು. 2017ರ ಜುಲೈ 28ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಮಿತಿ, ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಮೀಸಲಾದ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಿತ್ತು. ಇದೀಗ ಜಿಲ್ಲಾಧಿಕಾರಿಗಳು ಭೂ ಪರಿವರ್ತನಾ ಆದೇಶವನ್ನು ರದ್ದುಗೊಳಿಸಿದ್ದಾರೆ. ಮುಂದೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.