ಚಾಮರಾಜನಗರ ಆರ್ ಟಿಓ ಕಚೇರಿ ಮೇಲೆ ಎಸಿಬಿ ದಾಳಿ:1.12 ಲಕ್ಷ ರೂ.ವಶ
ಚಾಮರಾಜನಗರ, ಫೆಬ್ರವರಿ 19:ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಲಂಚ ತಾಂಡವವಾಡುತ್ತಿದ್ದು, ಇಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಅಧಿಕಾರಿಗಳು ಮತ್ತು ನೌಕರರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬ ಆರೋಪವನ್ನು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಮಾಡುತ್ತಲೇ ಬರುತ್ತಿದ್ದರು.
ಸುಪ್ರೀಂಕೋರ್ಟ್ನಲ್ಲಿ ಕೇಜ್ರಿವಾಲ್ಗೆ ಹಿನ್ನಡೆ: ಎಸಿಬಿ ಅಧಿಕಾರ ಕೇಂದ್ರ ಸರ್ಕಾರಕ್ಕೆ
ಇದೀಗ ಅದು ನಿಜವಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ನೌಕರರು ಮತ್ತು ಅಧಿಕಾರಿಗಳ ಬಳಿ 1.12 ಲಕ್ಷ ಹೆಚ್ಚುವರಿ ಹಣ ದೊರೆತಿದ್ದು ಅದನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು
ಸೋಮವಾರ ಸಂಜೆ ಎರಡು ವಾಹನಗಳಲ್ಲಿ ಬಂದ ಎಸಿಬಿ ಡಿವೈಎಸ್ಪಿ ಮೋಹನ್, ಇನ್ಸ್ ಪೆಕ್ಟರ್ ಗಳಾದ ಶ್ರೀಕಾಂತ್, ಜಗದೀಶ್ ಹಾಗೂ ಸಿಬ್ಬಂದಿಯನ್ನೊಳಗೊಂಡ ಎಸಿಬಿ ತಂಡವು ಪ್ರಾದೇಶಿಕ ಸಾರಿಗೆ ಕಚೇರಿಯ ಮೇಲೆ ದಾಳಿ ನಡೆಸಿದೆ. ಈ ವೇಳೆ ನೌಕರರನ್ನು ಪರಿಶೀಲಿಸಿದಾಗ ಮೂರ್ನಾಲ್ಕು ನೌಕರರು ಮಧ್ಯವರ್ತಿಗಳಿಂದ ಹಣ ಪಡೆದು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಯಿತು.
ಈ ನೌಕರರಿಂದ ಸುಮಾರು 82 ಸಾವಿರ ರೂ. ನಗದನ್ನು ವಶಪಡಿಸಿಕೊಂಡ ಎಸಿಬಿ ಅಧಿಕಾರಿಗಳ ತಂಡ ಬಳಿಕ ವಾಹನ ನಿರೀಕ್ಷಕ ಸೈಪುದ್ದೀನ್ ಅವರ ಬಳಿಯಿಂದ 30 ಸಾವಿರ ರೂ. ಹೆಚ್ಚುವರಿ ಹಣವನ್ನು ವಶಪಡಿಸಿಕೊಂಡಿದೆ. ಆ ನಂತರ ಕಚೇರಿಯಲ್ಲಿನ ಕಡತಗಳ ಪರಿಶೀಲನೆಯನ್ನು ತಡ ರಾತ್ರಿಯವರೆಗೂ ಮುಂದುವರೆಸಿದ ಎಸಿಬಿ ಅಧಿಕಾರಿಗಳ ತಂಡ ಹೆಚ್ಚುವರಿ ಹಣವನ್ನು ಹೇಗೆ ವಸೂಲಿ ಮಾಡಲಾಗಿದೆ ಮತ್ತು ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಕಲೆ ಹಾಕಿದೆ.
ವಿಧಾನಸೌಧದಲ್ಲಿ ಹಣ ಪತ್ತೆ : ಮತ್ತೊಬ್ಬ ವ್ಯಕ್ತಿ ಎಸಿಬಿ ವಶಕ್ಕೆ
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಅವರು ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸಾರಿಗೆ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲ ಕೆಲಸಗಳು ಮಧ್ಯವರ್ತಿಗಳ ಮೂಲಕವೇ ನಡೆಯುತ್ತಿದೆ. ಸಾರಿಗೆ ಇಲಾಖೆಯ ನಿಯಮಾವಳಿ ಪ್ರಕಾರ ಯಾವುದೇ ಕೆಲಸ ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರನ್ನು ಆಧರಿಸಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಸಾರಿಗೆ ಕಚೇರಿಯಲ್ಲಿ ಸ್ವಲ್ಪ ಮಟ್ಟಿಗೆ ಭಯವುಂಟಾಗಿದ್ದು, ಇನ್ನಾದರೂ ಸಾರಿಗೆ ಕಚೇರಿಯಲ್ಲಿ ಲಂಚದ ಹಾವಳಿ ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.